ಅಸೆಂಬ್ಲಿ ಚುನಾವಣಾ ಕಣಕ್ಕೆ ಸುಂಟರಗಾಳಿ ರಕ್ಷಿತಾ
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲೋ ಒಂದು ಕ್ಷೇತ್ರದಿಂದ ತಾವು ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದಾರೆ. ಶ್ರೀರಾಮುಲು ಅವರ ಪಕ್ಷದಲ್ಲಿ ಈಗಾಗಲೆ ರಾಜಕೀಯದ ಓನಾಮಗಳನ್ನು ರಕ್ಷಿತಾ ಕಲಿತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಗ್ಲಾಮರ್ ಹಾಗೂ ಭಾಷಣಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ರಕ್ಷಿತಾ ಯಶಸ್ವಿಯಾಗಿದ್ದರು.
ಮೊನ್ನೆ ಮೊನ್ನೆ ನಡೆದ ಬಿಎಸ್ಆರ್ ಪಕ್ಷದ 'ಪಾರ್ಟಿ ಮೀಟಿಂಗ್'ನಲ್ಲಿ ಅವರು ಮಾತನಾಡುತ್ತಿದ್ದರು. ಮುಂಬರುವ ವಿಧಾನಸಭೆ ಚುನಾವಣೆಗೆ ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಬಿಎಸ್ಆರ್ ಪಕ್ಷದ ಮಹಿಳಾ ಘಟಕದ ಸಾರಥ್ಯವನ್ನೂ ವಹಿಸುವುದಗಿ ರಕ್ಷಿತಾ ಹೇಳಿದರು.
ತಾವಂತೂ ಚುನಾವಣಾ ಕಣಕ್ಕೆ ಧುಮುಕಲು ಸಿದ್ಧವಾಗಿದ್ದೇವೆ. ಇನ್ನು ಏನಿದ್ದರೂ ಶ್ರೀರಾಮುಲು ಅವರು ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದೇನೆ. 'ಸ್ವಾಭಿಮಾನಿ ಸಂಕಲ್ಪ ಯಾತ್ರೆ'ಯಲ್ಲೂ ರಕ್ಷಿತಾ ಪಾಲ್ಗೊಂಡು ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಿದ್ದಾರೆ. ರಾಮನಗರದಿಂದ ಮಲೆನಾಡತನಕ ರಕ್ಷಿತಾ 'ಸುಂಟರಗಾಳಿ'ಯಂತೆ ಸುತ್ತಲಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಹತ್ತು ತಿಂಗಳುಗಳ ಕಾಲ ಸಮಯಾವಕಾಶವಿದೆ. ಕರ್ನಾಟಕ ರಾಜಕೀಯ ಕ್ಷೇತ್ರಕ್ಕೆ ಜಿಗಿಯುತ್ತಿರುವ ರಕ್ಷಿತಾ ಬಿರುಗಾಳಿ ಎಬ್ಬಿಸದಿದ್ದರೂ ಸುಂಟರಗಾಳಿಯಂತೂ ಎಬ್ಬಿಸುವುದಂತೂ ಗ್ಯಾರಂಟಿ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆ.
ಈ ಹಿಂದೊಮ್ಮೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ರಕ್ಷಿತಾ ಭೇಟಿ ಮಾಡಿದ್ದರು. ಅವರಿಂದ ಕಲಿಯುವುದು ಬಹಳಷ್ಟಿದೆ. ಅವರ ನಡವಳಿಕೆ ನನಗೆ ಹೊಸ ಸ್ಫೂರ್ತಿ ನೀಡಿದೆ. ಅವರ ಸಲಹೆ ಸೂಚನೆಗಳನ್ನು ಪಾಲಿಸುವುದಾಗಿ ಹೇಳಿಕೊಂಡಿದ್ದರು. ಈಗ ಅವೆಲ್ಲಕ್ಕೂ ಕಾಲ ಕೂಡಿಬಂದಿದೆ ಅನ್ನಿಸುತ್ತದೆ. (ಏಜೆನ್ಸೀಸ್)


Click it and Unblock the Notifications












