ರಕ್ಷಿತಾ ಪ್ರೇಮ್ ಸ್ಪರ್ಧೆಗೆ ಶ್ರೀರಾಮುಲು ಗ್ರೀನ್ ಸಿಗ್ನಲ್
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲೋ ಒಂದು ಕ್ಷೇತ್ರದಿಂದ ತಾವು ಸ್ಪರ್ಧಿಸುವುದಾಗಿ ರಕ್ಷಿತಾ ಈ ಮೊದಲು ತಿಳಿಸಿದ್ದರು. ಇದೀಗ ಶ್ರೀರಾಮುಲು ಅವರು ಮಂಡ್ಯದ ಮಳವಳ್ಳಿಯಲ್ಲಿ ನಡೆದ ಬಹಿರಂಗ ಮೆರವಣಿಗೆಯಲ್ಲಿ ತಿಳಿಸಿರುವ ಪ್ರಕಾರ ರಕ್ಷಿತಾ ಸ್ಪರ್ಧಿಸಲಿರುವ ಕ್ಷೇತ್ರ ಅವರ ಪತಿ ಪ್ರೇಮ್ ಹುಟ್ಟೂರಿನ ಜಿಲ್ಲೆಯದು. ನಿರ್ಧಿಷ್ಟವಾಗಿ ಯಾವ ಕ್ಷೇತ್ರವುದೆಂಬುದು ಇನ್ನಷ್ಟೇ ತಿಳಿಯಬೇಕಿದೆ.
ಶ್ರೀರಾಮುಲು ಬಿಎಸ್ ಆರ್ ಪಕ್ಷದಲ್ಲಿ ಈಗಾಗಲೆ ರಾಜಕೀಯದ ಒಳಹೊರಗನ್ನು ಕಲಿತಿದ್ದಾರೆ ರಕ್ಷಿತಾ ಪ್ರೇಮ್. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಗ್ಲಾಮರ್ ಇಮೇಜ್ ಹಾಗೂ ಭಾಷಣಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ರಕ್ಷಿತಾ ಯಶಸ್ವಿಯಾಗಿದ್ದರು. ರಕ್ಷಿತಾ ಹೋದಲ್ಲೆಲ್ಲಾ ಅವರ ಅಭಿಮಾನಿಗಳು ಮುತ್ತಿಕೊಳ್ಳುವುದು ಸಾಮಾನ್ಯ ಸಂಗತಿ ಎನಿಸಿದೆ.
ಮೊನ್ನೆ ಮೊನ್ನೆ ನಡೆದ ಬಿಎಸ್ಆರ್ ಪಕ್ಷದ 'ಪಾರ್ಟಿ ಮೀಟಿಂಗ್'ನಲ್ಲಿ ಅವರು ಮಾತನಾಡುತ್ತಿದ್ದರು. ಮುಂಬರುವ ವಿಧಾನಸಭೆ ಚುನಾವಣೆಗೆ ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಬಿಎಸ್ಆರ್ ಪಕ್ಷದ ಮಹಿಳಾ ಘಟಕದ ಸಾರಥ್ಯವನ್ನೂ ವಹಿಸುವುದಗಿ ರಕ್ಷಿತಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ತಮ್ಮ ಆಸೆಯನ್ನು ವ್ಯಕತಪಡಿಸಿದ್ದ ರಕ್ಷಿತಾ, ಶ್ರೀರಾಮುಲು ಅವರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಈಗ ಅವರ ಬಯಕೆಗೆ ಶ್ರೀರಾಮುಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನೇನಿದ್ದರೂ ಪೂರ್ವ ತಯಾರಿ ಮುಗಿಸಿ ಚುನಾವಣೆ ಎದುರಿಸುವುದಷ್ಟೇ ಬಾಕಿ. ಇಡೀ ಕರ್ನಾಟಕವನ್ನು 'ಸುಂಟರಗಾಳಿ'ಯಂತೆ ಸುತ್ತಲಿದ್ದಾರೆ ರಕ್ಷಿತಾ ಪ್ರೇಮ್.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಹತ್ತು ತಿಂಗಳುಗಳ ಕಾಲ ಸಮಯಾವಕಾಶವಿದೆ. ಕರ್ನಾಟಕ ರಾಜಕೀಯ ಕ್ಷೇತ್ರಕ್ಕೆ ಜಿಗಿಯುತ್ತಿರುವ ರಕ್ಷಿತಾ ಬಿರುಗಾಳಿ ಎಬ್ಬಿಸದಿದ್ದರೂ ಸುಂಟರಗಾಳಿಯಂತೂ ಆಗುವುದು ಗ್ಯಾರಂಟಿ ಎಂಬ ಮಾತುಗಳು ಶ್ರೀರಾಮುಲು ಪಕ್ಷದ ವಲಯದಲ್ಲಿ ಭಾರಿ ಸುದ್ದಿಯಾಗಿ ಕಿವಿಗೆ ಅಪ್ಪಳಿಸುತ್ತಿದೆ. ಮುಂದಿನದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)


Click it and Unblock the Notifications












