ಒಂದೇ ಹಾಡಿನಲ್ಲಿ ವಿಷ್ಣು, ಅಂಬಿ, ದರ್ಶನ್, ಅಪ್ಪು, ಶಿವಣ್ಣ, ಉಪೇಂದ್ರ; ಇಲ್ಲಿದೆ ಸಣ್ಣ ಝಲಕ್
15 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಬಹಳ ಒಗ್ಗಟ್ಟಿತ್ತು. ಬಳಿಕ ಯಾಕೋ ಎಲ್ಲರೂ ತಮ್ಮ ತಮ್ಮ ನಡುವೆ ಗೋಡೆ ಕಟ್ಟಿಕೊಳ್ಳಲು ಆರಂಭಿಸಿದ್ದರು. ವಿಷ್ಣು, ಅಂಬಿ, ಅಪ್ಪು ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಮಗೆ ಗೊತ್ತಾ ಕನ್ನಡದ ಹಾಡೊಂದರಲ್ಲಿ ವಿಷ್ಣು, ದರ್ಶನ್, ಅಂಬಿ, ಅಪ್ಪು ಒಟ್ಟಿಗೆ ಹೆಜ್ಜೆ ಹಾಕಿದ್ದರು.
ಭಿನ್ನಾಭಿಪ್ರಾಯಗಳು ಆತ್ಮೀಯರನ್ನು ದೂರ ಮಾಡಿಬಿಡುತ್ತದೆ. ದರ್ಶನ್ ಹಾಗೂ ಸುದೀಪ್ ಬಹಳ ಆತ್ಮೀಯರಾಗಿ ಇದ್ದಿದ್ದು ಬಳಿಕ ದೂರಾಗಿದ್ದು ಗೊತ್ತೇಯಿದೆ. ಎಲ್ಲರೂ ಒಟ್ಟಾಗಿ ಇರಬೇಕು, ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಬೇಕು ಎನ್ನುವುದು ಸಿನಿರಸಿಕರ ಆಸೆ ಕೂಡ. 18 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ 'ರಕ್ತ ಕಾಶ್ಮೀರ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಹಾಡೊಂದರಲ್ಲಿ ಚಿತ್ರರಂಗ 14 ಜನ ಕಲಾವಿದರು ಹೆಚ್ಚು ಹಾಕಿದ್ದರು.

ನಿಂತೇ ಹೋಗಿದ್ದ ಚಿತ್ರಕ್ಕೆ ಈಗ ಮರುಜೀವ ಬಂದಿದೆ. ಸಿನಿಮಾ ಬಿಡುಗಡೆಗೆ ಅಣಿಯಾಗುತ್ತಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯಾ ಜೋಡಿಯಾಗಿ ನಟಿಸಿದ್ದರು. ನಾಲ್ವರು ಬಾಲ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಉಪ್ಪಿ ದ್ವಿಪಾತ್ರದಲ್ಲಿ ನಟಿಸಿದ್ದು ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಟದ ಕತೆ ಈ ಚಿತ್ರದಲ್ಲಿದೆ. ಸಿಂಧೂ ನದಿ ದಡದಲ್ಲಿ ಕೂಡ ಸಿನಿಮಾ ಚಿತ್ರೀಕರಣ ಮಾಡಿದ್ದರು. ಮಕ್ಕಳನ್ನು ಬಳಸಿಕೊಂಡು ನಾಯಕ ಭಯೋತ್ಪಾದಕರ ದುಷ್ಕೃತ್ಯವನ್ನು ತಡೆಯುವ ಕಥೆ ಚಿತ್ರದಲ್ಲಿದೆ.
ರಾಜೇಂದ್ರ ಸಿಂಗ್ ಬಾಬು ಅವರ ಮೇಲಿನ ಅಭಿಮಾನದಿಂದ ಚಿತ್ರದ ಹಾಡೊಂದರಲ್ಲಿ "ವಿಷ್ಣುವರ್ಧನ್, ಅಂಬರೀಶ್, ಜಗ್ಗೇಶ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ದರ್ಶನ್, ರಮೇಶ್ ಅರವಿಂದ್, ಶ್ರೀನಾಥ್, ಜೈ ಜಗದೀಶ್, ಆದಿತ್ಯ ಹೀಗೆ ಕನ್ನಡದ ಸ್ಟಾರ್ ನಟರೆಲ್ಲಾ ಹೆಜ್ಜೆ ಹಾಕಿದ್ದರು. ಸದ್ಯ 'ರಕ್ತ ಕಾಶ್ಮೀರ' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಕೊನೆಯಲ್ಲಿ ಆ ಹಾಡಿನ ಸಣ್ಣ ಝಲಕ್ ನೋಡಬಹುದು.
ಅವತ್ತಿನ ಕಾಲಕ್ಕೆ 6 ಕೋಟಿ ರೂ. ವ್ಯಯಿಸಿ 'ರಕ್ತ ಕಾಶ್ಮೀರ' ಸಿನಿಮಾ ನಿರ್ಮಿಸಲಾಗಿತ್ತು. ಬರೋಬ್ಬರಿ 10 ನಿಮಿಷದ ಹಾಡಿದು. 6 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗಿತ್ತು. ಇದೊಂದು ಸಾಧನೆ, ಮತ್ಯಾರು ಇದನ್ನು ಮಾಡಲು ಸಾಧ್ಯವಿಲ್ಲ" ಎಂದು ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಯಾವುದೇ ಸಂಭಾವನೆ ಪಡೆಯದೇ ದ್ವಿಪಾತ್ರದಲ್ಲಿ ನಟಿಸಿರುವ ಉಪೇಂದ್ರ 6 ವಿಭಿನ್ನ ಗೆಟಪ್ಗಳಲ್ಲಿ ಕೂಡ ಮಿಂಚಿದ್ದಾರೆ. ಅಂದಹಾಗೆ ನಟ ಆದಿತ್ಯ ಈ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಇನ್ನು ಗುರುಕಿರಣ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ವಿಶೇಷ. ಉಪೇಂದ್ರ, ರಮ್ಯಾ ಜೊತೆಗೆ ಓಂ ಪ್ರಕಾಶ್ ರಾವ್, ದೊಡ್ಡಣ್ಣ, ಕುರಿ ಪ್ರತಾಪ್ ಸೇರಿ ಹಲವರು ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಪಾರ್ವತಿ ಮೆಲ್ಟನ್ ಮಿಂಚಿದ್ದರು. ಎಂಡಿಎಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಎಂ. ಎಸ್ ರಮೇಶ್ ಚಿತ್ರಕ್ಕೆ ಸಂಭಾಷನೆ ಬರೆದಿದ್ದರು.
ಆರ್. ಗಿರಿ ಛಾಯಾಗ್ರಹಣ, ಎಸ್. ಮನೋಹರ್ ಸಂಕಲನ 'ರಕ್ತ ಕಾಶ್ಮೀರ' ಚಿತ್ರಕ್ಕಿದೆ. ಕನ್ನಡ ಜೊತೆಗೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿವೆ. 'ಸ್ಟಾರ್ ಸ್ಟಾರ್ ಸ್ಟಾರ್' ಎಂದು ಶುರುವಾಗುವ ಹಾಡಿನಲ್ಲಿ ಕನ್ನಡದ ಸ್ಟಾರ್ ನಟರು ಹೆಜ್ಜೆ ಹಾಕಿದ್ದರು. ಎಸ್. ಪಿ ಬಾಲಸುಬ್ರಮಣ್ಯಂ ಈ ಹಾಡಿಗೆ ದನಿಯಾಗಿದ್ದರು.


Click it and Unblock the Notifications











