ಆಂಧ್ರ ಸಿನಿಸಂತೆಯಲ್ಲಿ ಗುಲ್ಲೆಬ್ಬಿಸಿದ 'ಸಾವಿತ್ರಿ' ಟೀಚರ್
ಇತ್ತೀಚಿನ ದಿನಗಳಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸದ್ದಿಲ್ಲದಂತೆ ಮಕಾಡೆ ಮಲಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವರ್ಮಾ ಚಿತ್ರಗಳನ್ನು ಕಾತುರದಿಂದ ನಿರೀಕ್ಷಿಸುವಂತಹ ಪ್ರೇಕ್ಷಕ ವರ್ಗ ಈಗ ಅವರ ಚಿತ್ರಗಳೆಂದರೆ ಅಸಹ್ಯ ಪಡುವಂತಾಗಿದೆ.
ಇತ್ತೀಚೆಗೆ ಬರುತ್ತಿರುವ ಅವರ ಚಿತ್ರಗಳು ಪ್ರೇಕ್ಷಕರಿಗೆ ರುಚಿಸುತ್ತಿಲ್ಲ. ಈ ಹಿಂದೆಲ್ಲಾ ಅವರ ಚಿತ್ರಗಳು ಅನಿರೀಕ್ಷಿತ ವಿವಾದಗಳಿಗೆ ಗುರಿಯಾಗಿ ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದ್ದವು. ಅಂತಹದ್ದೇನಿದೆ ವರ್ಮಾ ಚಿತ್ರದಲ್ಲಿ ಎಂದು ಪ್ರೇಕ್ಷಕರು ಹೋಗಿ ನೋಡುವಷ್ಟು ಕುತೂಹಲಕ್ಕೆಡೆ ಮಾಡಿಕೊಡುತ್ತಿದ್ದವು. [ಹೆಣ್ಣೆಂದರೆ ಕೇವಲ ಕಾಮತೃಷೆ ತೀರಿಸುವ ವಸ್ತು]

ಇತ್ತೀಚೆಗೆ ಅವರ 'ಸಾವಿತ್ರಿ' ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಆ ಚಿತ್ರದ ಪೋಸ್ಟರ್ ನೋಡಿದವರು ಚಕಿತರಾದರು. ಶಾಲಾ ಬಾಲಕನೊಬ್ಬ ಮಹಿಳೆಯೊಬ್ಬರ ಹೊಕ್ಕುಳು ನೋಡುತ್ತಿರುವ ದೃಶ್ಯದ ಪೋಸ್ಟರ್ ಅದು.
ಈ ಪೋಸ್ಟರ್ ನೋಡಿದ ಕೆಲವರು ಒಳಗೊಳಗೇ ಮಂಡಿಗೆ ತಿಂದರೆ ಇನ್ನೂ ಕೆಲವು ಸಂಘಟನೆಗಳು ವರ್ಮಾಗೆ ಬಿಸಿ ಮುಟ್ಟಿಸಿವೆ. ಕೂಡಲೆ ವರ್ಮಾ ತಮ್ಮ ಚಿತ್ರದ ಟೈಟಲನ್ನು 'ಶ್ರೀದೇವಿ' ಎಂದು ಬದಲಾಯಿಸಿದ್ದಾರೆ.
ಈ ಚಿತ್ರದ ಬಗ್ಗೆ ವರ್ಮಾ ಹೇಳಿರುವುದೇನೆಂದರೆ, ಹದಿಹರೆಯದ ವಯಸ್ಸಿನಲ್ಲಿ ತಮಗೆ ಎದುರಾದ ಅನುಭವಗಳ ಆಧಾರದ ಮೇಲೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ ಎಂದಿದ್ದಾರೆ. ಈ ಚಿತ್ರದ ಟೈಟಲ್ ಬಿಡುಗಡೆಯಾದಂದಿನಿಂದ ವಿವಾದಗಳು ಸುತ್ತಿಕೊಂಡಿವೆ.
'ಸಾವಿತ್ರಿ' ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಿದ ಮರುದಿನವೇ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಈ ಶೀರ್ಷಿಕೆಯನ್ನು ಬೇರೊಬ್ಬರು ಅದಾಗಲೇ ನೋಂದಾಯಿಸಿಕೊಂಡಿದ್ದ ಕಾರಣ ಇದೀಗ 'ಶ್ರೀದೇವಿ' ಎಂದು ಹೊಸ ಶೀರ್ಷಿಕೆ ಇಟ್ಟಿದ್ದಾರೆ ಎನ್ನುತ್ತವೆ ಮೂಲಗಳು.
ಪೋಸ್ಟರ್ ಸಮಾಚಾರ ಇಂತಿದ್ದರೆ, ವರ್ಮಾ ಸಾಹೇಬರು ಇನ್ನೊಂದು ಎಡವಟ್ಟನ್ನೂ ಮಾಡಿಕೊಂಡಿದ್ದಾರೆ. ಈ ಚಿತ್ರದ ಕಥೆಗೆ ಸಹಕರಿಸುವಂತೆ ಪ್ರೇಕ್ಷಕರ ಹದಿಹರೆಯದ ಅನುಭವಗಳನ್ನು ತಮಗೆ ತಿಳಿಸುವಂತೆ ಕೋರಿದ್ದರು. ಆಯ್ಕೆಯಾದವರ ಹದಿಹರೆಯದ ಅನುಭವಗಳನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುವುದಾಗಿಯೂ ಭರವಸೆ ನೀಡಿದ್ದರು.
ಈ ಚಿತ್ರದ ಬಗ್ಗೆ ಮಾತನಾಡುತ್ತಾ, "ನನಗೆ ಸರಸ್ವತಿ ಟೀಚರ್ ಇದ್ದಂತೆ ನಿಮ್ಮ ನಿಮ್ಮ ಜೀವನದಲ್ಲಿ...ನಿಮ್ಮ ಟೀಚರ್ ಗಳೋ, ಪಕ್ಕದ ಅಥವಾ ಎದುರು ಮನೆ ಆಂಟಿಯೋ, ನಿಮ್ಮಕ್ಕನ ಫ್ರೆಂಡ್ಸ್, ನಿಮ್ಮ ಟ್ಯೂಷನ್ ಟೀಚರ್ಸ್...ಹೀಗೆ ನಾನಾ 'ಸಾವಿತ್ರಿ'ಗಳು ಇದ್ದೇ ಇರುತ್ತಾರೆ. ಅದೇ ರೀತಿ ನಿಮ್ಮೆಲ್ಲರ ಜೀವನದಲ್ಲಿ ಬಂದಂತಹ ಸಾವಿತ್ರಿಯರೆಲ್ಲರ ಸ್ಫೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ" ಎಂದಿದ್ದರು.
ತಮ್ಮ ಚಿತ್ರದ ಬಗ್ಗೆ ವರ್ಮಾ ಈ ರೀತಿ ಪ್ರಕಟಿಸುತ್ತಿದ್ದಂತೆ ಆಂಧ್ರದಲ್ಲಿನ ಮಹಿಳಾ ಸಂಘಟನೆಗಳು ಸಿಡಿದೆದ್ದಿವೆ. ಅವರ ಪ್ರತಿಕೃತಿಯನ್ನು ಗುಂಟೂರಿನಲ್ಲಿ ದಹಿಸಿ ತಮ್ಮ ಸಿಟ್ಟು ತೀರಿಸಿಕೊಂಡಿವೆ. ಇನ್ನೊಂದು ಕಡೆ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿದೆ.


Click it and Unblock the Notifications











