twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಕೇವಲ ಮಾತೃಭಾಷೆ ಆಗಿದ್ರೆ ಸಾಲದು, ಹೃದಯದ ಭಾಷೆ

    By * ಟಿ.ಎಂ. ಸತೀಶ್‌
    |

    ಸುಂದರಸ್ವಪ್ನಗಳು ರಮೇಶ್‌ ನಿಮಗೆ ಗೊತ್ತಲ್ಲ. 'ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ.." ಎಂದು ಹಾಡಿ, ಕುಣಿದು ಕನ್ನಡ ಚಿತ್ರರಸಿಕರ ಮನಗೆದ್ದ ರಮೇಶ್‌ ಅರವಿಂದ್‌ ಮಹಾನ್‌ ಕನ್ನಡಾಭಿಮಾನಿ. ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ.ಇಂಡಿಯಾಇನ್‌ಫೋ.ಕಾಂ ನೊಂದಿಗೆ ರಮೇಶ್‌ ಮನಬಿಚ್ಚಿ ಮಾತನಾಡಿದ್ದಾರೆ.... ನಮ್ಮ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟಿದ್ದಾರೆ. ಅವರ ಒಂದೊಂದು ಉತ್ತರದಲ್ಲೂ ಕನ್ನಡ ಇಂಚರವಿದೆ.....

    ಪ್ರ: ಕನ್ನಡ ರಾಜ್ಯೋತ್ಸವ ಆಚರಣೆ ಹೇಗಿರಬೇಕು?

    ಉ: ಕನ್ನಡ ನಮ್ಮ ಉಸಿರು. ನಮ್ಮ ತಾಯ್ನುಡಿ. ಆದರೆ, ಕನ್ನಡ ಕೇವಲ ಮಾತೃಭಾಷೆಯಾಗಿದ್ದರೆ ಸಾಲದು. ಅದು ಪ್ರತಿಯಾಬ್ಬ ಕನ್ನಡಿಗನ ಹೃದಯದ ಭಾಷೆ ಆಗಬೇಕು. ನವೆಂಬರ್‌ ಮಾಸದ ರಾಜ್ಯೋತ್ಸವ ಆಚರಣೆ ಕೇವಲ ಸಾಂಕೇತಿಕ. ಆದರೆ, ವರ್ಷವಿಡೀ ನಮ್ಮ ಹೃದಯ ಸಿಂಹಾಸನದಲ್ಲಿ ಕನ್ನಡ ರಾಜರಾಜೇಶ್ವರಿಯನ್ನು ಆರಾಧಿಸಬೇಕು. ಪೂಜಿಸಬೇಕು. ಕನ್ನಡ ಮಾತನಾಡುವಾಗ ನಾವು ಹೆಮ್ಮೆ ಪಡಬೇಕು. ಆಗ ಮಾತ್ರ ನಮ್ಮ ತಾಯ್ನುಡಿಯ ಋಣತೀರಿಸಲು ಸಾಧ್ಯ.

    ಪ್ರ: ಕನ್ನಡ ಚಿತ್ರಗಳಲ್ಲಿ ಕನ್ನಡತನ ಇನ್ನೂ ಇದೆಯೇ?

    ಉ: ಕನ್ನಡತನ ಖಂಡಿತಾ ಇದೆ. ಆದರೆ, ನೂರಕ್ಕೆ ನೂರರಷ್ಟು ಇಲ್ಲದೇ ಇರಬಹುದು. 'ಜನುಮದ ಜೋಡಿ"ಯಂಥ ಕನ್ನಡದ ಸೊಗಡಿನ, ಕನ್ನಡದ ಮಣ್ಣಿನ ವಾಸನೆ ಇರುವ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು. ನಮ್ಮತನ, ನಮ್ಮ ಸಂಸ್ಕೃತಿಯನ್ನು ನಾವು ಬಿಂಬಿಸಿಬೇಕು. ಸಿನಿಮಾ ಒಂದು ಮಹತ್ವದ ಹಾಗೂ ಪರಿಣಾಮಕಾರಿ ಮಾಧ್ಯಮ. ಎಲ್ಲ ಕಾಲಕ್ಕೂ, ಎಲ್ಲ ರಾಜ್ಯಕ್ಕೂ ಹೊಂದಿಕೊಳ್ಳುವಂಥ ಚಿತ್ರ ಬರೋದ್ರಿಂದ ನೂರಕ್ಕೆ ನೂರರಷ್ಟು ಕನ್ನಡತನವಿರುವ ಚಿತ್ರಗಳ ಸಂಖ್ಯೆ ಕಡಿಮೆ ಆಗಿದೆ ಅಷ್ಟೇ.

    ಪ್ರ: ಕರ್ನಾಟಕ - ಕನ್ನಡಕ್ಕೆ ಕಲಾವಿದನ ಕಾಣಿಕೆ ಯಾವ ರೀತಿ ಇರಬೇಕು?

    ಉ: ಕಲೆ, ಸಾಹಿತ್ಯದ ಪ್ರಭಾವ ಮಹತ್ವವಾದ್ದು. ಯಾವುದೇ ಭಾಷೆಯ ಬೆಳವಣಿಗೆ ಆ ಭಾಷೆಯ ಸಾಹಿತ್ಯ - ಸಂಸ್ಕೃತಿ, ಕಲಾ ಶ್ರೀಮಂತಿಕೆಯ ಮೇಲೆ ನಿಂತಿದೆ. ಕನ್ನಡ ಭಾಷೆಯ ಸಿರಿವಂತಿಕೆಗೆ ಕನ್ನಡ ಸಾಹಿತ್ಯ - ಕಲೆಯ ಕೊಡುಗೆ ಅಪಾರ. 7 ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಸಮೃದ್ಧ - ಶ್ರೀಮಂತ ಭಾಷೆ ಕನ್ನಡ.

    ಆದರೆ, ಒಬ್ಬ ಕಲಾವಿದ ಈ ನಾಡಿಗೆ ಕೊಟ್ಟಿರುವ ಕೊಡುಗೆ ಏನು ಅನ್ನೋದು ಈಗ ತಿಳಿಯಲ್ಲ. ಮುಂದೆ 40- 50 ವರ್ಷ ಆದ ಮೇಲೆ ಅವರ ಕೊಡುಗೆ ಗಮನಕ್ಕೆ ಬರತ್ತೆ. ಡಾ. ರಾಜ್‌ಕುಮಾರ್‌ ಅವರು ಕಲಾವಿದರಾಗಿ ನಾಡಿಗೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಸುಂದರ ಹಾಗೂ ಸರಳ ಕನ್ನಡವನ್ನು ಅವರು ಉಚ್ಚರಿಸುವ ರೀತಿಯನ್ನು ಪ್ರತಿಯಾಬ್ಬ ಕಲಾವಿದ, ಕನ್ನಡಿಗನೂ ಕಲೀಬೇಕು. ನಾವು ಕನ್ನಡವನ್ನು ತಪ್ಪಿಲ್ಲದೆ ಮಾತಾಡಿದ್ರೆ, ಅದೇ ನಾವು ನಮ್ಮ ನಾಡಿಗೆ ಕೊಟ್ಟ ದೊಡ್ಡ ಕಾಣಿಕೆ. ಇದನ್ನು ಮೊದಲು ಕಲಾವಿದರು ಮೈಗೂಸಿಕೊಳ್ಳಬೇಕು.

    ಪ್ರ: ರೀಮೇಕ್‌ ಚಿತ್ರಗಳಿಂದ ಕನ್ನಡ ಸಂಸ್ಕೃತಿ- ಪರಂಪರೆಗೆ ಧಕ್ಕೆ ಆಗತ್ತೆ ಅಂತ ನಿಮಗನ್ನಿಸುತ್ತದೆಯೇ?

    ಉ: ಖಂಡಿತಾ ಇಲ್ಲ. ಕನ್ನಡ ಚಿತ್ರೋದ್ಯಮ ಭಾರತೀಯ ಭಾಷೆಯ ಚಿತ್ರಗಳನ್ನಷ್ಟೇ ರೀಮೇಕ್‌ ಮಾಡ್ತಾ ಇದೆ. ಆ ಕಥಾವಸ್ತುವಿನಲ್ಲಿ ಭಾರತೀಯ ಸಂಸ್ಕೃತಿ ಇದೆ. ಕನ್ನಡತನ ಭಾರತೀಯ ಸಂಸ್ಕೃತಿಯ ಪ್ರತೀಕ. ಹೀಗಾಗಿ ರೀಮೇಕ್‌ ಚಿತ್ರಗಳಿಂದ ಕನ್ನಡತನಕ್ಕೆ ಲವಲೇಶವೂ ಘಾಸಿ ಆಗಿಲ್ಲ. ಉದಾ. ಯಜಮಾನ ಚಿತ್ರ ತಮಿಳು, ಕನ್ನಡದಲ್ಲೂ ಶತದಿನ ಆಚರಿಸಿತು. ಪ್ರೀತಿ, ಮಮತೆ, ಮಮಕಾರ, ವಾತ್ಸಲ್ಯ ಭಾರತೀಯತೆಯಲ್ಲಿದೆ. ಆ ಭಾವನೆ ರೀಮೇಕ್‌ ಚಿತ್ರಗಳಲ್ಲೂ ಪ್ರತಿಬಿಂಬಿತವಾಗಿದೆ.

    ಪ್ರ: ಕರ್ನಾಟಕ ಹೊರಗೆ ನೆಲೆಸಿರುವ ಕನ್ನಡಿಗರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ಏನು ಹೇಳ ಬಯಸುತ್ತೀರಿ ?

    ಉ: ಮೊದಲಿಗೆ ಕನ್ನಡ.ಇಂಡಿಯಾಇನ್‌ಫೋ.ಕಾಂನ ಎಲ್ಲ ಓದುಗರಿಗೂ ರಾಜ್ಯೋತ್ಸವದ ಶುಭಾಶಯಗಳು. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು... ಕನ್ನಡವನ್ನು ಮರೆಯಬೇಡಿ. ಜನನಿ, ಜನ್ಮಭೂಮಿಗಿಂತ ಮಿಗಿಲಾದ್ದು ಮತ್ತೇನೂ ಇಲ್ಲ.

    English summary
    Kannda cinema Hero Ramesh Aravind sheared his thoughts and views with kannada.filmibeat.com
    Monday, July 8, 2013, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X