ಹುಟ್ಟೂರಿನಲ್ಲಿ ನಿರ್ಮಾಪಕ ರಾಮು ಅಂತ್ಯಕ್ರಿಯೆ; ಕುಟುಂಬದವರಿಗೆ ಮಾತ್ರ ಅವಕಾಶ
ಕೊರೊನಾದಿಂದ ನಿನ್ನೆ ರಾತ್ರಿ (ಏಪ್ರಿಲ್ 26) ಇಹಲೋಕ ತ್ಯಜಿಸಿದ ನಿರ್ಮಾಪಕ ಕೋಟಿ ರಾಮು ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕುಣಿಗಲ್ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ರಾಮು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತೆಯಿಂದ ಕುಣಿಗಲ್ ಕಡೆ ಆಂಬುಲೆನ್ಸ್ ಮೂಲಕ ರವಾನೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.
ಪಾರ್ಥಿವ ಶರೀರದ ಜೊತೆ ಮಾಲಾಶ್ರೀ ಮತ್ತು ಮಕ್ಕಳು ಸೇರಿದಂತೆ ಕುಟುಂಬದ ಕೆಲವೇ ಕೆಲವು ಮಂದಿ ಹೊರಟಿದ್ದಾರೆ. ಅಂತ್ಯಕ್ರಿಯೆ ವೇಳೆ ಕುಟುಂಬದ ಸದಸ್ಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಕೋವಿಡ್ ನಿಯಮದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.
ಪತಿಯ ಪಾರ್ಥಿವ ಶರೀರ ರವಾನಿಸುವ ವೇಳೆ ನಟಿ ಮಾಲಾಶ್ರೀ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅಪ್ಪನನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು. ಕನ್ನಡ ಸಿನಿಮಾದ ಖ್ಯಾತ ನಿರ್ಮಾಪಕರಾಗಿದ್ದ ಕೋಟಿ ರಾಮು ಅವರು ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

'ಭಾನುವಾರ ಮಧ್ಯಾಹ್ನದವರೆಗೂ ಆರಾಮಾಗೆ ಇದ್ದರು. ಮೇಡಂ ಅವರೆ ಊಟ ತಂದು ಕೊಟ್ಟಿದ್ದರು. ತುಂಬಾ ಸಮಯ ಮಾತನಾಡಿದ್ದಾರೆ. ಚೆನ್ನಾಗೆ ಇದ್ರು. ಅರ್ಜುನ್ ಗೌಡ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು.' ಎಂದು ರಾಮು ಅವರ ಆಪ್ತ ಗೋವಿಂದ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾಮು ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡದ 'ಗೋಲಿಬಾರ್' ಸಿನಿಮಾ ಮೂಲಕ ಚಿತ್ರನಿರ್ಮಾಣ ಆರಂಭ ಮಾಡಿದ ರಾಮು ಅವರು, 'ಎಕೆ 47', 'ಲಾಕಪ್ ಡೆತ್', 'ಕಿಚ್ಚ', 'ಹಾಲಿವುಡ್', 'ಸಿಂಹದ ಮರಿ' ಇನ್ನೂ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದರು.


Click it and Unblock the Notifications











