ಬಾವ ಬಾಮೈದ ಕೈ ಕಚ್ಚದಿದ್ದರೂ ರಿಮೇಕೆಂಬ ನಕಲಿನ ಪಾಪ
'ಬಾವ ಬಾಮೈದ" ಚಿತ್ರ ಕೈ ಕಚ್ಚದಿದ್ದರೂ ಕೋಟಿ ನಿರ್ಮಾಪಕ ರಾಮು ಮುಖದಲ್ಲಿ ಕಳೆಯೇನೂ ಲಕಲಕಿಸುತ್ತಿಲ್ಲ . ಬದಲಾಗಿ ಅನಂತ ಅಪರಾಧ ಪ್ರಜ್ಞೆ ಅವರನ್ನು ಕಾಡುತ್ತಿದೆ. ಮೊನ್ನೆ 'ಧರ್ಮಪುರುಷ" ಸೆಟ್ನಲ್ಲಿ ಕೂಡ ರಾಮು ಮಂಕು ಮಂಕಾಗಿಯೇ ಇದ್ದರು.
ಬಾವ ಬಾಮೈದ ಚಿತ್ರ ಹಣದ ಹೊಳೆಯನ್ನೇ ಹರಿಸುತ್ತದೆಂದು ರಾಮು ಅಂದುಕೊಂಡಿದ್ದರು. ಶಿವರಾಜ್ ಹಾಗೂ ರತಿ ವರ್ಚಸ್ಸಿನ ರಂಭಾ ಜೋಡಿ, ಪ್ರಕಾಶ್ ರೈ ಗತ್ತುಗಾರಿಕೆಯ ಅಭಿನಯ, ವಿನಯಾ ಪ್ರಸಾದ್ ಕಣ್ಣೀರು ಚಿತ್ರಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನು ಕರೆ ತರುತ್ತದೆಂದು ರಾಮು ನಂಬಿದ್ದರು. ಅವರ ಲೆಕ್ಕಾಚಾರಗಳು ಕೂಡ ತಪ್ಪಾಗಿವೆ.
ಅಂದಮಾತ್ರಕ್ಕೆ ಬಾವ ಬಾಮೈದ ಚಿತ್ರದಿಂದ ರಾಮು ಹೆಚ್ಚೇನೂ ಕಳಕೊಂಡಿಲ್ಲ . ಶಿವರಾಜ್ ಚಿತ್ರಗಳಿಗೆ ಸಿಗಬೇಕಾದ ಓಪನಿಂಗ್ ಸಿಗದಿದ್ದಾಗ, ರಾಮು ಪ್ರಚಾರವನ್ನು ಮತ್ತಷ್ಟು ಚುರುಕಾಗಿಸಿದ್ದರು. ಪರಿಣಾಮವಾಗಿ ಜನ ಸಿನಿಮಾ ಮಂದಿರಕ್ಕೆ ಬರುತ್ತಿದ್ದಾರೆ. ಬಿ ಹಾಗೂ ಸಿ ಸೆಂಟರ್ಗಳಲ್ಲಿ ಬಾಮೈದ ದುಡ್ಡು ಮಾಡುವ ನಿರೀಕ್ಷೆಯೂ ಇದೆ. ಆದರೇನು? ರಾಮು ರಿಮೇಕ್ ಮಾಡಿದರು ಅನ್ನುವ ಅಪವಾದ ಶಾಶ್ವತವಾಗಿ ನಿಂತು ಬಿಟ್ಟಿತಲ್ಲ !?
'ನಾನು ರಿಮೇಕ್ ಮಾಡಬಾರದಿತ್ತು " ಎಂದು ಕೊರಗುತ್ತಾರೆ ಸ್ವಮೇಕ್ ಹಿಟ್ಗಳನ್ನು ಕೊಟ್ಟಿರುವ ರಾಮು. ಆದರೆ, ಮಾಡಿಯಾಗಿದೆ. ಇನ್ನು ಮುಂದೆ ರಿಮೇಕ್ ಮಾಡುವುದಿಲ್ಲ ಅನ್ನುವ ಸಂಕಲ್ಪದ ಮೂಲಕ ರಾಮು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ!
ಕೊನೆಮಾತು-
ಬಾವ ಬಾಮೈದ ಹಾಗೂ ಬಹಳ ಚೆನ್ನಾಗಿದೆ ಚಿತ್ರಗಳು ಹಿಟ್ ಆಗಬೇಕಿತ್ತು ಎಂದಿದ್ದಾರೆ ಎರಡೂ ಚಿತ್ರಗಳ ನಾಯಕ ಶಿವರಾಜ್ ಕುಮಾರ್. ಈ ಚಿತ್ರಗಳಲ್ಲಿ ಕಮರ್ಷಿಯಲ್ ಸಿನಿಮಾದ ಎಲ್ಲ ಅಂಶಗಳೂ ಇದ್ದವು. ಚೆನ್ನಾಗಿ ಓಡುತ್ತವೆ ಅಂದುಕೊಂಡಿದ್ದೆ. ಓಡದಿದ್ದರೆ ನಾವೇನು ಮಾಡೋಕಾಗುತ್ತೆ ಎನ್ನುವುದು ಶಿವರಾಜ್ ಸ್ವ ಸಮಾಧಾನ. ಸಿನಿಮಾ ಚೆನ್ನಾಗಿರದಿದ್ದರೆ ನಾವೇನು ಮಾಡೋಕಾಗುತ್ತೆ ಎನ್ನುತ್ತಿದ್ದಾರೆ ಪ್ರೇಕ್ಷಕರು.


Click it and Unblock the Notifications