ರಮ್ಯಾ ಈಗ ಇರೋದೇ ಹಿಂಗೆ..ನೋ ಎಕ್ಸ್ ಕ್ಯೂಸ್ ಪ್ಲೀಸ್.!
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬೆಂಗಳೂರಿಗೆ ಬಂದ ಮೇಲೆ ಮತ್ತೆ ಬಣ್ಣ ಹಚ್ತಾರೆ ಅಂತ ಆಸೆ ಪಟ್ಟ ಅಭಿಮಾನಿಗಳಿಗೆ ಬಕೆಟ್ ತಣ್ಣೀರು ಎರಚಿ ನಿರಾಸೆ ಮೂಡಿಸಿದ್ದಾರೆ.
ರಮ್ಯಾ ಮೇಡಂ ಸಿಲಿಕಾನ್ ಸಿಟಿಗೆ ಕಾಲಿಟ್ಟು ಹತ್ತತ್ರ ತಿಂಗಳಾಗುತ್ತಾ ಬಂತು. ಅಂದಿನಿಂದ ರಾಜಕೀಯದಲ್ಲೇ ಸದ್ದು ಮಾಡುತ್ತಿರುವ ರಮ್ಯಾ ಈವರೆಗೂ ಗಾಂಧಿನಗರದ ಕಡೆ ಮುಖ ಮಾಡಿಲ್ಲ. ಅತ್ತ ತಿರುಗಿ ನೋಡುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.

ದಿನಬೆಳಗಾದ್ರೆ ಕೆಪಿಸಿಸಿ ಕಚೇರಿ, ಸಿಎಂ ನಿವಾಸ ಅಂತಲೇ ರಮ್ಯಾ ತಿರುಗಾಡುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ರಂಗೇರುತ್ತಿರುವ ಸಮಯದಲ್ಲಿ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ರಮ್ಯಾ ಇಂದು ನಡೆದ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದರು. [ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ]
ಬೆಂಗಳೂರಿನ ವಸಂತನಗರದ ಸರ್ದಾರ್ ಪಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ರಮ್ಯಾ ಕಾಂಗ್ರೆಸ್ ಪರ ಎಲ್ಲಾ ವಾರ್ಡ್ ಗಳಲ್ಲಿ ಪ್ರಚಾರ ಮಾಡುವುದಾಗಿ ಹೇಳಿದರು.
ಸಾಲದಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಈ ಸಭೆಗೆ ರಮ್ಯಾ ಮೇಡಂ ಆಗಮಿಸಿದ್ದು ಆಟೋದಲ್ಲಿ.!

ಹಾಗ್ನೋಡಿದ್ರೆ, ವಿದೇಶದಿಂದ ವಾಪಸ್ ಆದ್ಮೇಲೆ ರಮ್ಯಾ ಮೇಡಂ 'ಕನ್ನಡದ ತೇರು' ಆಟೋದಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಮೊನ್ನೆ ಸಿ.ಎಂ ಜೊತೆ ಮಾತುಕತೆ ನಡೆಸಲು ಅವರ ಮನೆಗೆ ತೆರಳಿದಾಗ, ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ಕೊಟ್ಟಾಗ ರಮ್ಯಾ ಆಟೋವನ್ನೇ ಆಶ್ರಯಿಸಿದ್ದರು.
ಇದೆಲ್ಲಾ ಗಿಮಿಕ್ಕೋ ಅಥವಾ ರಮ್ಯಾ ತೀರಾ ಸೀದಾ ಸಾದಾ ಆಗಿದ್ದಾರೋ ಗೊತ್ತಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸ್ಟಾರ್ ಕ್ಯಾಂಪೇನರ್ ಆಗಿರುವ ರಮ್ಯಾ ಎಂ.ಎಲ್.ಸಿ ಆಗುವುದಕ್ಕೆ ಇಷ್ಟೆಲ್ಲಾ ತಯಾರಿ ನಡೆಸುತ್ತಿದ್ದಾರಾ ಅಂತ ನಮ್ಮನ್ನ ಕೇಳ್ಬೇಡಿ. [ಮತ್ತೆ ರಾಜಕೀಯಕ್ಕೆ ರಮ್ಯಾ! ಮೇಲ್ಮನೆಯಲ್ಲಿ ರಮ್ಯಾ ರಂಗು!? ]
ಯಾಕಂದ್ರೆ ರಮ್ಯಾ ಈಗ ಇರೋದೇ ಹಿಂಗೆ.! ಬಣ್ಣದ ಪ್ರಪಂಚ ಸಂಪೂರ್ಣವಾಗಿ ಬಿಟ್ಟು ರಾಜಕೀಯದಲ್ಲೇ ರಮ್ಯಾ ಬಿಜಿಯಾದ್ರೆ ಅವರ ಅಭಿಮಾನಿಗಳು ಎಕ್ಸ್ ಕ್ಯೂಸ್ ಮಾಡ್ತಾರಾ ಅನ್ನೋದೇ ಸದ್ಯದ ಪ್ರಶ್ನೆ.


Click it and Unblock the Notifications











