ಡಿಕೆಶಿ ಸಾಹೇಬರು ಹೇಳಿದ್ದರಲ್ಲಿ ತಪ್ಪಿಲ್ಲ, ಮೋಹಕತಾರೆ ರಮ್ಯಾ ಪ್ರತಿಕ್ರಿಯೆ...!
ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ಎಂದು ಕರೆಯಿಸಿಕೊಂಡಾಗಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಚಿತ್ರರಂಗದಿಂದ ದೂರ ಸರಿದು ರಾಜಕೀಯದ ಚದುರಂಗವಾಡಲು ಹೋದ ರಮ್ಯಾ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಕೂಡ ಹೌದು. ಇಂಥಾ ರಮ್ಯಾ ಈಗ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಡಿಕೆಶಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೌದು, ಕನ್ನಡ ಚಿತ್ರರಂಗದ ಸ್ಟಾರ್ಗಳಿಗೆ ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ರಾಜಕಾರಣಿಗಳು ಮಾತ್ರವಲ್ಲ ಸಿನಿಮಾದವರು ಕೂಡ ಡಿಕೆ ಶಿವಕುಮಾರ್ ಅವರು ನೀಡಿದ್ದ ನಟ್ಟು ಬೋಲ್ಟಿನ ಕುರಿತು ಮಾತನಾಡುತ್ತಿದ್ದಾರೆ. ಹೀಗೆ ಧಮ್ಕಿ ಹಾಕುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ. ಇದರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಮೋಹಕತಾರೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಮಾತನಾಡಿದ್ದಾರೆ.

ಈ ಕುರಿತು ಹಂಪಿ ಉತ್ಸವದಲ್ಲಿ ಮಾತನಾಡಿರುವ ರಮ್ಯಾ ಸಾಹೇಬರು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಅವರು ಹೇಳಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ. ಕಲಾವಿದರಾಗಿ ನಮಗೆ ಜವಾಬ್ಧಾರಿ ಇರುತ್ತೆ ಎಂದು ಹೇಳಿರುವ ರಮ್ಯಾ ಡಾ.ರಾಜ್ ಕುಮಾರ್ ಅವರನ್ನು ಕೂಡ ಇದೇ ವೇಳೆ ಸ್ಮರಿಸಿದ್ದಾರೆ.ಕನ್ನಡ ಭಾಷೆಗೆ ಅಣ್ಣಾವ್ರು ಮಾಡಿದ್ದ ಹೋರಾಟದ ಕುರಿತು ಮಾತನಾಡಿದ್ದಾರೆ. ಮೊದಲು ಸಿನಿಮಾ ಮತ್ತು ರಾಜಕೀಯದ ನಡುವೆ ಪರಸ್ಪರ ಪ್ರೋತ್ಸಾಹ ಮತ್ತು ಬೆಂಬಲ ಇತ್ತು ಆದರೆ ಈಗ ಆ ಬೆಂಬಲ ನನಗೆ ಕಾಣಿಸುತ್ತಿಲ್ಲ ಎಂದಿರುವ ರಮ್ಯಾ ನೆಲ, ಜಲ, ಭಾಷೆಯ ವಿಚಾರಕ್ಕೆ ಎಲ್ಲರೂ ಒಂದಾಗಬೇಕು ಅವರು ಹೇಳಿರುವುದರಲ್ಲಿ ನನಗೇನು ತಪ್ಪು ಕಾಣಲಿಲ್ಲ ಎಂದು ಹೇಳಿದ್ದಾರೆ.
ರಮ್ಯಾ ಅವರ ಈ ಮಾತು ಈಗ ಅನೇಕರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಎರಡು ವರ್ಷದ ಹಿಂದೆ ರಮ್ಯಾ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರ ಶುರುವಾಗಿತ್ತು. ರಮ್ಯಾ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಈ ಟ್ವೀಟ್ ವಾರ್ ಕಾಂಗ್ರೆಸ್ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು. ಕಾಂಗ್ರೆಸ್ ನಾಯಕರು ಅವರದ್ದೇ ಆದ ಶೈಲಿಯಲ್ಲಿ ರಮ್ಯಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. ರಮ್ಯಾ ನಡೆಗೆ ಹಲವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಡಿಕೆ ಶಿವಕುಮಾರ್ ಅವರ ವಿರೋಧಿ ಬಣದಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಾರೆ ಎಂದು ಕೂಡ ಹಲವರು ಮಾತನಾಡಿದ್ದರು. ಆದರೆ ಈಗ ಡಿಕೆಶಿ ಅವರ ಹೇಳಿಕೆಯನ್ನು ರಮ್ಯಾ ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಾಗಿ 'ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳಲ್ಲ' ಎಂದು ಅನೇಕರು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಅಂದ್ಹಾಗೇ ಮೊನ್ನೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕನ್ನಡ ಚಿತ್ರರಂಗದ ಹಲವರು ಹಾಜರಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಖಾರವಾಗಿ ಹೇಳಿದ್ದರು.
ಇನ್ನುಳಿದಂತೆ ಚಿತ್ರರಂಗಕ್ಕೆ ಮರಳಿ ಬರುವ ಕುರಿತು ಕೂಡ ಮಾತನಾಡಿರುವ ರಮ್ಯಾ ಸದ್ಯಕ್ಕೆ ಯಾವುದೇ ಚಿತ್ರದ ಕುರಿತು ಮಾತುಕತೆಯಾಗಿಲ್ಲ, ನಿರ್ಧಾರ ಆಗಿಲ್ಲ, ಕೆಲವೊಂದಿಷ್ಟು ಕಥೆಗಳನ್ನು ಓದುತ್ತಿದ್ದೇನೆ, ನೋಡೋಣ ಮುಂದೆ ಏನಾದರೂ ಇಂಟ್ರೆಸ್ಟಿಂಗ್ ಆಗಿದ್ದರೆ ಖಂಡಿತ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications










