ಅನೇಕ ವರ್ಷಗಳ ನಂತರ ಮುಖಾಮುಖಿ ಆಗಲಿದ್ದಾರೆ ರಮ್ಯಾ ಮತ್ತು ರಕ್ಷಿತಾ...!
ರಮ್ಯಾ ಮತ್ತು ರಕ್ಷಿತಾ, ಒಂದು ಕಾಲದಲ್ಲಿನ ಕನ್ನಡ ಚಿತ್ರರಂಗದ ಎರಡು ಮುತ್ತುಗಳು. ಕನ್ನಡ ಚಿತ್ರರಂಗದಲ್ಲಿ ಆರ್ ಅಕ್ಷರಕ್ಕೆ ಬೆಲೆ ಬಂದಿದ್ದೇ ಇವರು ಇಬ್ಬರಿಂದ. ವಜ್ರೇಶ್ವರಿ ಕಂಬೈನ್ಸ್ ಮೂಲಕ ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಬಂದ ಇಬ್ಬರು ಆ ನಂತರ ಜಿದ್ದಿಗೆ ಬಂದರು. ಒಂದರ್ಥದಲ್ಲಿ ನಾನಾ-ನೀನಾ ಎನ್ನುವ ಮನಸ್ಥಿತಿ ಇಬ್ಬರಲ್ಲಿ ಕೂಡ ಇತ್ತು. ಕೇವಲ ಕನ್ನಡದಲ್ಲಿ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುವ ವಿಚಾರ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಮೆರೆಯುವ ಹಂಬಲ ಇಬ್ಬರಲ್ಲಿ ಕೂಡ ಇತ್ತು.
ಈ ಕಡೆ ಎಕ್ಸ್ಕ್ಯೂಸ್ ಮೀ, ರಂಗ ಎಸ್ ಎಸ್ ಎಲ್ ಸಿ, ಕಂಠಿ, ಆಕಾಶ್, ಅಮೃತಧಾರೆ, ಹೀಗೆ ರಮ್ಯಾ ಒಂದಾದ ಮೇಲೊಂದು ಚಿತ್ರಗಳ ಮೂಲಕ ರಮ್ಯಾ ಸ್ಯಾಂಡಲ್ವುಡ್ ಕ್ವೀನ್ ಎಂದು ಕರೆಸಿಕೊಂಡರೆ ರಕ್ಷಿತಾ ಧಮ್, ಗೋಕರ್ಣ, ಲವ್, ಕಲಾಸಿಪಾಳ್ಯ, ಡೆಡ್ಲಿ ಸೋಮ, ಅಯ್ಯ, ಸುಂಟರಗಾಳಿ ಚಿತ್ರಗಳ ಮೂಲಕ ಕನ್ನಡಿಗರ ಪಾಲಿಗೆ ಕ್ರೇಜಿ ಕ್ವೀನ್ ಆದರು.

ತನನಂ ತನನಂ ಚಿತ್ರದಲ್ಲಿ ಕವಿತಾ ಲಂಕೇಶ್ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದರು ಕೂಡ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಮುನಿಸು ಇದ್ದೇ ಇತ್ತು. ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತಾ ಈ ಮಾತನ್ನು ಒಪ್ಪಿಕೊಂಡಿದ್ದರು.
ರ್ಯಾಪಿಡ್ ರಶ್ಮಿ ಅವರಿಗೆ ಹಿಂದೆ ನೀಡಿದ್ದ ಸಂದರ್ಶನದಲ್ಲಿ ರಕ್ಷಿತಾ ತಮ್ಮ ನಡುವೆ ಇದ್ದ ವೈಮನಸ್ಸು, ದ್ವೇಷದ ಬಗ್ಗೆ ಮಾತನಾಡಿದ್ದರು. ನಮ್ಮ ನಡುವೆ ಆ ಜಗಳ ಇಲ್ಲದಿದ್ದರೆ ನಮ್ಮ ಸಿನಿಮಾ ಪಯಣವೇ ಅಪೂರ್ಣವಾಗಿರುತ್ತಿತ್ತು ಎಂದು ನನಗೆ ಹಲವು ಬಾರಿ ಅನಿಸಿದ್ದು ಇದೆ, ಆ ಒಂದು ದ್ವೇಷ ಇದ್ದಿದ್ದಕ್ಕೆ ನಾವು ಜಿದ್ದಿಗೆ ಬಿದ್ದವರಂತೆ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದ ರಕ್ಷಿತಾ ಅದನ್ನು ಮಾಡಬೇಕು ಇದನ್ನು ಮಾಡಬೇಕು ಎಂಬ ತುಡಿತ ಇಬ್ಬರಲ್ಲಿಯೂ ಇತ್ತು ಆದರೆ ಸ್ಫರ್ಧೆ ಆರೋಗ್ಯಕರವಾಗಿರಲಿಲ್ಲ ಎಂದು ಹೇಳಿದ್ದರು.
ಇಂಥಾ ರಮ್ಯಾ ಮತ್ತು ರಕ್ಷಿತಾ ಈ ಹಳೆಯ ವಿಚಾರಗಳನ್ನೆಲ್ಲ ಮರೆತು ಸ್ನೇಹಿತರಾಗಿ ತುಂಬಾ ದಿನಗಳಾಗಿವೆ. ಇಬ್ಬರಲ್ಲಿಯೂ ಈಗ ಪರಸ್ಪರ ಗೌರವದ ಮನೋಭಾವನೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ರಮ್ಯಾ ಬಗ್ಗೆ ರಕ್ಷಿತಾ ಮತ್ತೊಮ್ಮೆ ಮಾತನಾಡಿದ್ದಾರೆ. ಹೌದು, ರಕ್ಷಿತಾ ಅವರ ಸಹೋದರ ರಾಣಾ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಿದ್ಧರಾಗಿದ್ದಾರೆ. ಗ್ರಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಸಹಜವಾಗಿ ಅದ್ಧೂರಿಯಾಗಿ ನಡೆಯಲಿರುವ ಈ ಮದುವೆಗೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿಯಾಗಲಿದ್ದಾರೆ. ನವ ಜೋಡಿಗೆ ಶುಭಾಶಯವನ್ನು ಕೋರಲಿದ್ದಾರೆ.
ಇನ್ನು ಮದುವೆಯ ತಯಾರಿಯನ್ನು ಪ್ರೇಮ್ ಮತ್ತು ರಕ್ಷಿತಾ ಆಗಲೇ ಶುರು ಮಾಡಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಕೊಡುತ್ತಿದ್ದಾರೆ. ಈ ಸಮಯದಲ್ಲಿ ರಾಣಾ ಮದುವೆಗೆ ರಮ್ಯಾ ಬರುತ್ತಾರಾ ಎನ್ನುವ ಪ್ರಶ್ನೆ ರಕ್ಷಿತಾಗೆ ಎದುರಾಗಿದೆ. ಈ ಪ್ರಶ್ನೆಗೆ ನ್ಯೂಸ್ ಫಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿರುವ ರಕ್ಷಿತಾ ಮದುವೆ ಆಮಂತ್ರಣ ಪತ್ರಿಕೆ ಎಲ್ಲರಿಗೆ ಕೊಡಲಾಗಿದೆ. ರಮ್ಯಾ ಅವರಿಗೆ ಕೂಡ ಇನ್ವಿಟೇಷನ್ ಕಾರ್ಡ್ ತಲುಪಿಸಲಾಗಿದೆ. ಆದರೆ ರಮ್ಯಾ ಸದ್ಯಕ್ಕೆ ಊರಲ್ಲಿ ಇಲ್ಲ, ನಾನು ಫೋನ್ ಮೂಲಕ ಅವರಿಗೆ ಮದುವೆಯ ವಿಚಾರ ಹೇಳಿದ್ದೇನೆ, ಇಲ್ಲ ಖಂಡಿತ ಬಂದೇ ಬರುತ್ತೇನೆ ಮಿಸ್ ಮಾಡಲ್ಲ ಎಂದು ರಮ್ಯಾ ಹೇಳಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ. ಹಾಗೊಂದು ವೇಳೆ ಮಾತು ತಪ್ಪದೇ ರಮ್ಯಾ ಈ ಮದುವೆ ಸಮಾರಂಭಕ್ಕೆ ಬಂದರೆ ವರ್ಷಗಳ ನಂತರ ರಮ್ಯಾ ಮತ್ತು ರಕ್ಷಿತಾ ಮುಖಾಮುಖಿಯಾದಂತೆ ಆಗಲಿದೆ. ಈ ಅಮೃತ ಗಳಿಗೆಗೆ ಕನ್ನಡ ಚಿತ್ರರಂಗ ಕೂಡ ಸಾಕ್ಷಿಯಾಗಲಿದೆ.


Click it and Unblock the Notifications











