ಭಾರತ - ಪಾಕಿಸ್ತಾನದ ನಡುವೆ ಯುದ್ಧ ಶುರುವಾದರೆ ಸಾಯುವುದು ನಮ್ಮ ಸೈನಿಕರೇ - ರಮ್ಯಾ !
ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನು ಹಾಗೂ ಭಗ್ನ ಪ್ರೇಮಿಗಳನ್ನು ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮೋಹಕತಾರೆ, ಸ್ಯಾಂಡಲ್ವುಡ್ ಕ್ವೀನ್ ಎಂಬ ಪಟ್ಟಗಳನ್ನು ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು.
ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ಕೂಡ ರಾಷ್ಟ್ರ ರಾಜಕಾರಣದಲ್ಲಿ ರಮ್ಯಾ ಪಾತ್ರರಾದರು. ಇಂಥಾ ರಮ್ಯಾ ಇದೀಗ ಮತ್ತೊಮ್ಮೆ ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾದರೆ ನಮ್ಮ ಸೈನಿಕರೇ ಸಾಯುವುದು ಎಂದು ಹೇಳಿದ್ದಾರೆ.

ಹೌದು, ಪೆಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಿಸಬೇಕು ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಯುದ್ಧ ಒಂದೇ ಮಾರ್ಗ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಯುದ್ದದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಇದರ ನಡುವೆ ಇದೀಗ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಮ್ಯಾ ಮಾತನಾಡಿದ್ದು ಎಲ್ಲದಕ್ಕೂ ಯುದ್ಧ ಒಂದೇ ಪರಿಹಾರ ಅಲ್ಲ ಎಂದು ಹೇಳಿದ್ದಾರೆ. ಯುದ್ಧ ಬೇಡ ಯುದ್ದದಿಂದ ಯಾರು ಉದ್ದಾರ ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ರಮ್ಯಾ, ಗುಪ್ತಚರ ಇಲಾಖೆಯ ವೈಫಲ್ಯ ಮತ್ತು ಭದ್ರತಾ ಉಲ್ಲಂಘನೆಯೇ
ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಉಗ್ರರು ಅದ್ಹೇಗೆ ಒಳಗಡೆ ಬಂದರು ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಹೀಗೆ ಆಗಲು ಕಾರಣವೇನು ಎನ್ನುವುದರ ಕುರಿತು ತಿಳಿದುಕೊಳ್ಳಬೇಕು ಎಂದಿರುವ ರಮ್ಯಾ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತೆ ಎನ್ನುವುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಉಪೇಂದ್ರ ಜೊತೆ ನಾನೊಂದು ಚಿತ್ರದ ಚಿತ್ರೀಕರಣಕ್ಕೆ ಕಾಶ್ಮೀರ್ಗೆ ಹೋಗಿ ಬಂದಿದ್ದೇನೆ ಎಂದಿರುವ ರಮ್ಯಾ ಆಗ ನಾವು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಾಗ ನಮಗೆ ಸಂಪೂರ್ಣ ಭದ್ರತೆಯನ್ನು ನೀಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲ ಎಂದಿರುವ ರಮ್ಯಾ, ನಾವು ಇಲ್ಲಿ ಕುಳಿತುಕೊಂಡು ಕಾಮೆಂಟ್ ಮಾಡುವುದು ಸುಲಭ ಆದರೆ ಅಲ್ಲಿದ್ದವರಿಗೆ ಅಲ್ಲಿ ಏನೆಲ್ಲ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತೆ ಎಂದು ಹೇಳಿದ್ದಾರೆ. ನಾಯಕರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದುನ್ನು ಕಾದು ನೋಡಬೇಕು ಎಂದಿರುವ ರಮ್ಯಾ ನೋಟು ಅಮಾನ್ಯೀಕರಣ ಮಾಡಿದರೆ ಭಯೋತ್ಪಾದನೆ ನಿಲ್ಲುತ್ತೆ ಎಂದು ಹೇಳಿದ್ದರು, ಅದು ಇದುವರೆಗೂ ನಿಂತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರ ನಾಯಕರೇ ಕೊಡಬೇಕು ಎಂದು ಕೂಡ ರಮ್ಯಾ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಯುದ್ಧದ ಬಗ್ಗೆ ಕೂಡ ಮಾತನಾಡಿರುವ ರಮ್ಯಾ, ವ್ಯೆಯಕ್ತಿಕವಾಗಿ ಹಿಂಸೆ ನನಗೆ ಇಷ್ಟ ಇಲ್ಲ, ಯುದ್ಧ ಮಾಡುವುದರಿಂದ ಯಾರು ಉದ್ಧಾರ ಕೂಡ ಆಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಯುದ್ಧನೇ ಉತ್ತರ ಅಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಯುದ್ಧ ಆದರೆ ಸಾಯುವುದು ನಮ್ಮ ಸೈನಿಕರೇ ಅಲ್ವಾ ? ಎಂದು ಪ್ರಶ್ನೆ ಮಾಡಿರುವ ರಮ್ಯಾ ನಾವು ನಾಯಕರನ್ನು ಆಯ್ಕೆ ಮಾಡುವುದು ನಮ್ಮ ರಕ್ಷಣೆ ಮಾಡಲಿ ಅಂತನೇ ಅಲ್ವಾ ? ಎಂದು ಕೂಡ ಪ್ರಶ್ನೆ ಮಾಡಿದ್ದಾರೆ. ಮತ್ತೊಮ್ಮೆ ಈ ತರಹದ ಘಟನೆಗಳು ನಡೆಯದೇ ಇರುವ ಹಾಗೇ ನೋಡಿಕೋಳ್ಳಬೇಕು ಅದನ್ನು ಬಿಟ್ಟು ಯುದ್ಧ ಒಂದೇ ಪರಿಹಾರ ಅಲ್ಲ ಎಂದು ಪುನರುಚ್ಚಿಸಿದ್ದಾರೆ ರಮ್ಯಾ.


Click it and Unblock the Notifications











