"ಇವತ್ತು ದರ್ಶನ್ ಬ್ಯಾನ್ ಮಾಡೋಕೆ ಆಗಲ್ಲ ಎನ್ನುವವರು ಅವತ್ತು ನಿಖಿತಾನ ಬ್ಯಾನ್ ಮಾಡಿದ್ದೇಗೆ?": ರಮ್ಯಾ ಪ್ರಶ್ನೆ
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಥಳಿಸಿ ಹತ್ಯೆ ಮಾಡಿಸಿರುವ ಗಂಭೀರ ಆರೋಪ ದರ್ಶನ್ ಮೇಲಿದೆ. ಆದರೆ ಕನ್ನಡ ಸಿನಿಮಾ ತಾರೆಯರು ಈ ವಿಚಾರದಲ್ಲಿ ಮೌನವಹಿಸಿದ್ದಾರೆ.
ದರ್ಶನ್ ಪರ ಆಗಲಿ ವಿರುದ್ಧ ಆಗಲಿ ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು ಮಾತನಾಡುತ್ತಿಲ್ಲ. ದರ್ಶನ್ ಪರಮಾಪ್ತರೇ ಸೈಲೆಂಟ್ ಆಗಿಬಿಟ್ಟಿದ್ದಾರೆ. ನಟಿ ರಮ್ಯಾ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಿಗೆ ಫೋನ್ ಕರೆ ಮೂಲಕ ಮಾತನಾಡಿ ಈ ಪ್ರಕರಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂಡಿಯಾ ಟುಡೇ ವಾಹಿನಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಾರೆಯರ ಮೌನವಾಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

"ಕನ್ನಡ ಸಿನಿಮಾ ತಾರೆಯರು ಈ ಘಟನೆ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ ಎನಿಸುತ್ತದೆ. ಅದಕ್ಕೆ ಸುಮ್ಮನಿದ್ದಾರೆ. ದರ್ಶನ್ ಬಗ್ಗೆ ಆರೋಪಗಳು ಕೇಳಿ ಬಂದಿರುವುದು ಇದೇ ಮೊದಲಲ್ಲ. ಅವರ ಫಾರ್ಮ್ಹೌಸ್ನಲ್ಲಿ ಒಬ್ಬ ವ್ಯಕ್ತಿಗೂ ಸಮಸ್ಯೆ ಆಗಿದೆ. ಈಗ ಅದು ಬೆಳಕಿಗೆ ಬಂದಿದೆ. ಆತ ಬಹಳ ನಟೋರಿಯಸ್. ಜನರನ್ನು ಬೈಯುವುದನ್ನು ನೋಡಿದ್ದೇವೆ"
"ದರ್ಶನ್ ಫ್ಯಾನ್ಸ್ ಕ್ಲಬ್ ಸೋಶಿಯಲ್ ಮೀಡಿಯಾದಲ್ಲಿ ತಾರೆಯನ್ನು ನಿಂದಿಸುತ್ತದೆ. ನಾನು ಈ ಹಿಂದೆ ಈ ಬಗ್ಗೆ ಹೇಳಿದ್ದೆ. ಸ್ಟಾರ್ ನಟರು ಫ್ಯಾನ್ಸ್ ಕ್ಲಬ್ಗಳು ಕಲಾವಿದರನ್ನು, ಅವರ ಮಕ್ಕಳನ್ನು, ನನ್ನನ್ನು ಟ್ರೋಲ್ ಮಾಡಿದ್ದರು. ಇಂತಹ ಇಮೇಜ್ ಇದ್ದಾಗ ಯಾರು ಕೂಡ ಅಂತಹವರ ಬಗ್ಗೆ ಮಾತನಾಡಲ್ಲ. ಯಾಕಂದರೆ ತಮ್ಮ ಸಿನಿಮಾಗಳು ಬಿಡುಗಡೆ ಆಗುವಾಗ ತೊಂದರೆ ಕೊಡುತ್ತಾರೆ, ಹೋದಲ್ಲಿ ಬಂದಲ್ಲಿ ಕೂಗಾಡಿ ಕಿರುಕುಳ ನೀಡುತ್ತಾರೆ. ಅಷ್ಟು ನಟೋರಿಯಸ್ ಅವ್ರು. ಅದಕ್ಕೆ ಇಂಡಸ್ಟ್ರಿಯವರು ಮಾತನಾಡ್ತಿಲ್ಲ ಅನ್ನಿಸ್ತಿದೆ"
"ದರ್ಶನ್ ವಿರುದ್ಧ ಯಾವುದೇ ಚಾರ್ಜ್ಶೀಟ್ ಆಗಿಲ್ಲ. ಹಾಗಾಗಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಫಿಲ್ಮ್ ಚೇಂಬರ್ ಹೇಳಿದ್ದಾಗಿ ನನ್ನ ಗಮನಕ್ಕೆ ಬಂತು. ಆದರೆ ಅದೇ ಜನ(ಚೇಂಬರ್ನಲ್ಲಿ ಇರುವವರು) ಈ ಹಿಂದೆ ನಟಿ ನಿಖಿತಾ ತುಕ್ರಾಲ್ ಅವರನ್ನು ಬ್ಯಾನ್ ಮಾಡಿದ್ದರು. ಆಗ ಆಕೆಯ ವಿರುದ್ಧವೂ ಯಾವುದೇ ದೂರು ದಾಖಲಾಗಿರಲಿಲ್ಲ. ಈ ಹಿಂದೆ ಹಲವರಿಗೆ ಹೀಗೆ ಆಗಿದೆ. ಆದರೆ ದರ್ಶನ್ ವಿಚಾರದಲ್ಲಿ ಯಾಕೆ ಆಗುತ್ತಿಲ್ಲ" ಎಂದು ರಮ್ಯಾ ಪ್ರಶ್ನಿಸಿದ್ದಾರೆ.

"ಫ್ಯಾನ್ಸ್ ಕ್ಲಬ್ ಈ ಮಟ್ಟಕ್ಕೆ ಇಳಿಯಬಾರದು. ಟ್ರೋಲ್ ಮಾಡಬಾರದು. ಇದಕ್ಕೆ ನಟರು ಜವಾಬ್ದಾರರಾಗಿರಬೇಕು, ಅವರಿಗೆ ತಿಳಿ ಹೇಳಬೇಕು ಎಂದು ನಾನು ಈ ಹಿಂದೆ ಟ್ವೀಟ್ ಮಾಡಿ ಹೇಳಿದ್ದೇನೆ. ಆದರೆ ಯಾರೂ ಗಮನ ಹರಿಸಲಿಲ್ಲ. ಅವರಿಗೆ ಹಣ ಕೊಟ್ಟು ಹೀಗೆ ಮಾಡಿಸಲಾಗುತ್ತಿದೆ. ಹಾಗಾಗಿ ಏನೂ ಮಾಡೋಕೆ ಸಾಧ್ಯವಿಲ್ಲ" ಎಂದು ನಟಿ ರಮ್ಯಾ ಆತಂಕ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ನಟ ದರ್ಶನ್ ಪ್ರಕರಣದಲ್ಲೇ ನಟಿ ನಿಖಿತಾ ತುಕ್ರಾಲ್ ಅವರನ್ನು ನಿರ್ಮಾಪಕರ ಸಂಘ 3 ವರ್ಷ ಬ್ಯಾನ್ ಮಾಡಿತ್ತು. ದರ್ಶನ್ ಜಂಟಲ್ಮನ್. ಆದರೆ ನಿಖಿತಾ ಅವರ ಬಾಳಿಗೆ ಎಂಟ್ರಿ ಕೊಟ್ಟಮೇಲೆ ಬಾಳಲ್ಲಿ ಬಿರುಗಾಳಿ ಎದ್ದಿದೆ ಎಂದು ಆರೋಪಿಸಲಾಗಿತ್ತು. ನಿರ್ಮಾಪಕರ ಸಂಘದ ನಡೆಯನ್ನು ಹಲವರು ವಿರೋಧಿಸಿದ್ದರು. ಹಿರಿಯ ನಿರ್ಮಾಪಕಿ ಪಾರ್ವತಮ್ಮ, ರಮ್ಯಾ ಕೂಡ ಅಂದು ನಿಖಿತಾ ಪರ ನಿಂತಿದ್ದರು. ಬಳಿಕ ತಮ್ಮ ತಪ್ಪಿ ಅರಿವಾಗಿ ಬ್ಯಾನ್ ಹಿಂಪಡೆಯಲಾಗಿತ್ತು. ಇನ್ನು ಮುಂದೆ ಯಾರನ್ನು ಬ್ಯಾನ್ ಮಾಡಲ್ಲ ಎಂದು ಹೇಳಿದ್ದರು.


Click it and Unblock the Notifications











