ಕತ್ತೆಗೆ ಹೆಚ್ಚಿನ ಬೆಲೆ ನೀಡಿದರೆ ಅದು ತನ್ನಷ್ಟಕ್ಕೆ ಸಿಂಹ ಎಂದುಕೊಳ್ಳುತ್ತೆ - ರಮ್ಯಾ..!
ಕಮಲ್ ಹಾಸನ್ ಕನ್ನಡಿಗರನ್ನು ಕೆಣಕಿದ್ದಾರೆ. ಕೆರಳಿಸಿದ್ದಾರೆ. ಭಾಷಾ ಜ್ಞಾನದ ಕೊರತೆಯಿಂದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿಯೇ ಕನ್ನಡದ ಜನ್ಮಕ್ಕೆ ತಮಿಳು ಭಾಷೆ ಕಾರಣವೆಂದಿದ್ದಾರೆ. ಕಮಲ್ ಅವರಾಡಿದ ಈ ಮಾತು ಇದೀಗ ಆಕ್ರೋಶದ ಜ್ವಾಲೆಯ ಸ್ವರೂಪ ಪಡೆದು ಧಗಧಗಿಸುತ್ತಿದೆ. ಕರುನಾಡಿನೆಲ್ಲೆಡೆ ಕಮಲ್ ಹಾಸನ್ ಅವರ ಚಿತ್ರಕ್ಕೆ ಬಿಡುಗಡೆಗೆ ಅವಕಾಶ ನೀಡಬಾರದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ ಕನ್ನಡ ಚಿತ್ರರಂಗದ ಅನೇಕರು ಕಮಲ್ ಹಾಸನ್ ವಿರುದ್ದ ಕಿಡಿ ಕಾರುತ್ತಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮತ್ತೂ ಕೆಲವರು ಕಮಲ್ ಹಾಸನ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಉದಾಹರಣೆಗೆ ಕಿಶೋರ್. ಕೇವಲ ಕಿಶೋರ್ ಮಾತ್ರವಲ್ಲ ರಮ್ಯಾ ಕೂಡ ಕಮಲ್ ಹಾಸನ್ ಪರ ವಕಾಲತ್ತು ವಹಿಸಿದ್ದರು.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ರಮ್ಯಾ ದ್ರಾವಿಡ ಭಾಷೆಯ ಅಡಿಯಲ್ಲಿಯೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳಲ್ಲಿ ಸಾಮ್ಯತೆ ಇರಬಹುದು ಆದರೆ ಯಾವ ಭಾಷೆ ಕೂಡ ಇನ್ನೊಂದು ಭಾಷೆಗಿಂತ ಶ್ರೇಷ್ಠ ಎಂದಿಲ್ಲ.
ನಮ್ಮಲ್ಲಿ ಹಲವರು ಸಂಸ್ಕ್ರತ ಎಲ್ಲ ಭಾಷೆಗಳ ತಾಯಿ ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದು ಕೂಡ ತಪ್ಪು. ಯಾಕೆಂದರೆ ಸಂಸ್ಕ್ರತ ಇಂಡೋ-ಆರ್ಯನ್ ಭಾಷೆ. ಇಂಡೋ ಆರ್ಯನ್ನರು ಇಲ್ಲಿ ವಲಸೆ ಬರುವುದಕ್ಕಿಂತ ಬಹಳ ವರ್ಷಗಳ ಮುಂಚೆಯಿಂದ ನಾವು ಇಲ್ಲಿ ಇದ್ದೇವೆ ಎಂದು ಹೇಳಿದ್ದರು. ತಮ್ಮ ಹೇಳಿಕೆಗೆ ಪೂರಕವಾಗಿ ದ್ರಾವಿಡ ಭಾಷೆಗಳ ಉಗಮದ ಚಾರ್ಟ್ನ್ನು ಕೂಡ ರಮ್ಯಾ ಹಂಚಿಕೊಂಡಿದ್ದರು.
ಆದರೆ ಇದೇ ಸಮಯದಲ್ಲಿ ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗಿಗೆ ಕೂಡ ಉತ್ತರ ನೀಡಿದ್ದ ರಮ್ಯಾ, ಕಮಲ್ ಹಾಸನ್ ಅವರ ಹೇಳಿಕೆ ತಪ್ಪಿದೆ. ಹಾಗೆಂದ ಮಾತ್ರಕ್ಕೆ ಅವರ ಚಿತ್ರವನ್ನು ನಿಷೇಧ ಮಾಡಲು ಮುಂದಾಗಿದ್ದು ತುಸು ಅತಿರೇಕ ಅನಿಸುವುದಿಲ್ಲವೆ ಎಂದು ಪ್ರಶ್ನೆ ಮಾಡಿದ್ದರು. ನಾವೆಲ್ಲರು ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಅದಕ್ಕಾಗಿ ಒಂದಾಗಬೇಕು ಆದರೆ ಅದಕ್ಕೂ ಮೊದಲು ಪರಸ್ಪರ ಗೌರವ ಕೊಡುವುದನ್ನು ನಾವು ಕಲಿಯಬೇಕು ಎಂದು ರಮ್ಯಾ ಹೇಳಿದ್ದರು.
ರಮ್ಯಾ ಅವರ ಈ ಹೇಳಿಕೆ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಟ್ರೋಲಿಗರ ಬಾಯಿಗೆ ಕೂಡ ಆಹಾರವಾಗಿತ್ತು. ಟ್ರೋಲ್ ಹೆಸರಿನಲ್ಲಿ ಅನೇಕರು ರಮ್ಯಾ ಅವರನ್ನು ವ್ಯೆಯಕ್ತಿಕವಾಗಿ ನಿಂದಿಸಲು ಶುರು ಮಾಡಿದ್ದರು.ಇವರೆಲ್ಲರಿಗೆ ಈಗ ರಮ್ಯಾ ಉತ್ತರ ನೀಡಿದ್ದಾರೆ. ಮೂರ್ಖರ ಜೊತೆ ಮತಾಂಧರರ ಜೊತೆ ಯಾವತ್ತು ವಾದ ಮಾಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಕೆಟ್ಟ ಮಾರ್ಗವೆಂದರೆ ಸತ್ಯ ಅಥವಾ ವಾಸ್ತವದ ಬಗ್ಗೆ ಕಡಿಮೆ ಕಾಳಜಿ ವಹಿಸುವ ಆದರೆ ತನ್ನದೇ ಆದ ನಂಬಿಕೆಗಳು ಮತ್ತು ಅವಾಸ್ತವಿಕ ಭ್ರಮೆಗಳಲ್ಲಿ ಮಾತ್ರ ನಂಬುವ ಮೂರ್ಖ ಮತ್ತು ಮತಾಂಧರೊಂದಿಗೆ ವಾದ ಮಾಡುವುದು ಎಂದು ಹೇಳಿದ್ದಾರೆ.
ಮುಂದುವರೆದು ಅರ್ಥಹೀನ ವಾದಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ನಾವು ಎಷ್ಟೇ ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ ಮತ್ತು ಇತರರು ಅಹಂಕಾರ, ದ್ವೇಷ ಮತ್ತು ಅಸಮಾಧಾನದಿಂದ ಕುರುಡರಾಗಿದ್ದಾರೆ. ಅವರು ಸರಿಯಾಗಿಲ್ಲದಿದ್ದರೂ ಸಹ ಅವರು ಬಯಸುವುದು ಮಾತ್ರ. ಅಜ್ಞಾನವು ಕಿರುಚಿದಾಗ, ಬುದ್ಧಿವಂತಿಕೆ ಮೌನವಾಗಿರುತ್ತದೆ. ನಿಮ್ಮ ಶಾಂತಿ ಮತ್ತು ಮೌನವು ಹೆಚ್ಚು ಯೋಗ್ಯವಾಗಿದೆ. ಕತ್ತೆಯ ಬಗ್ಗೆ ಹೆಚ್ಚಿನ ಗಮನ ನೀಡುವುದರಿಂದ ಅದು ಸಿಂಹ ಎಂದು ಭಾವಿಸುತ್ತದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.



Click it and Unblock the Notifications











