ಅವಕಾಶ ಕೊಟ್ಟಿದ್ದು ರಾಹುಲ್ ಗಾಂಧಿ, ಇನ್ಯಾರೂ ಅಲ್ಲ: ಡಿಕೆ ಶಿವಕುಮಾರ್ ವಿರುದ್ಧ ರಮ್ಯಾ ಕಿಡಿ
ಮಾಜಿ ಸಂಸದೆ, ನಟಿ ರಮ್ಯಾ ರಾಜಕೀಯದಿಂದ, ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿನಿಮಾಕ್ಕೆ ಮತ್ತೆ ರೀ ಎಂಟ್ರಿ ನೀಡಲು ಬಹುತೇಕ ಸಜ್ಜಾಗಿದ್ದಾರೆ.
ರಾಜಕೀಯದಿಂದ ದೂರಾಗಿದ್ದರೂ ಸಹ ಆಗಾಗ್ಗೆ ಟ್ವಿಟ್ಟರ್ನಲ್ಲಿ ರಾಜಕೀಯ ಸಂಬಂಧಿ ಟ್ವೀಟ್ಗಳನ್ನು ಮಾಡುತ್ತಲೇ ಇರುತ್ತಾರೆ. ಇಂದು ಹೀಗೆಯೇ ರಾಜ್ಯ ರಾಜಕೀಯದ ಬಗ್ಗೆ ಮಾಡಿದ ಟ್ವೀಟ್ ಒಂದು ಚರ್ಚೆಗೆ ಕಾರಣವಾಗಿ ನಂತರ ರಮ್ಯಾ ಸರಣಿ ಟ್ವೀಟ್ಗಳನ್ನು ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.
ರಮ್ಯಾರ ಟ್ವೀಟ್ ಸರಣಿ ಆರಂಭವಾಗಿದ್ದು, ಡಿಕೆ ಶಿವಕುಮಾರ್ ಅವರು, ಎಂಬಿ ಪಾಟೀಲ್ ಕುರಿತು ನೀಡಿದ್ದಾರೆ ಎಂದು ಹೇಳಲಾದ ವಿಷಯವಾಗಿ ಟ್ವೀಟ್ ಮಾಡುವ ಮೂಲಕ. ಎಂಬಿ ಪಾಟೀಲ್, ಬಿಜೆಪಿ ಸಚಿವ ಅಶ್ವತ್ಥನಾರಾಯಣ್ ಅವರನ್ನು ಭೇಟಿಯಾಗಿರುವ ಬಗ್ಗೆ ಅನುಮಾನದಿಂದ ಡಿ.ಕೆ.ಶಿವಕುಮಾರ್ ಮಾತನಾಡಿರುವ ವಿಷಯಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ''ಎಂಬಿ ಪಾಟೀಲ್ ಒಬ್ಬ ನಿಜ ಕಾಂಗ್ರೆಸ್ಸಿಗ ಅವರ ಬಗ್ಗೆ ಡಿ.ಕೆ.ಶಿವಕುಮಾರ್ ಹೀಗೆ ಮಾತನಾಡಬಾರದಿತ್ತು. ಪಕ್ಷವು ಚುನಾವಣೆಯನ್ನು ಒಗ್ಗಟ್ಟಾಗಿ ಹೋರಾಡಬೇಕು ಅಲ್ಲವೆ?'' ಎಂದಿದ್ದರು.
ರಮ್ಯಾರ ಟ್ವೀಟ್ಗೆ ಡಿ.ಕೆ.ಶಿವಕುಮಾರ್ ಬೆಂಬಲಿಗರು, ಕೆಲವು ಕಾಂಗ್ರೆಸ್ಸಿಗರು ಪ್ರತಿಕ್ರಿಯಿಸಿ, ಸಂಸದೆಯಾಗಿ ರಮ್ಯಾ ಯಾವ ಕೆಲಸವನ್ನೂ ಮಾಡಿಲ್ಲವೆಂದು, ಸಂಸದೆಯಾದ ಮೇಲೆ ಮಂಡ್ಯದ ಕಡೆ ತಲೆ ಹಾಕಿಲ್ಲವೆಂದು, ಅಂಬರೀಶ್ ಅವರ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಅವಕಾಶ ಕೊಟ್ಟ ಡಿಕೆ.ಶಿವಕುಮಾರ್ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿದ್ದಾಗ ಪಕ್ಷಕ್ಕೆ ಎಂಟು ಕೋಟಿ ಮೋಸ ಮಾಡಿದ್ದಾರೆ ಎಂದೆಲ್ಲ ಆರೋಪಗಳನ್ನುನ ಮಾಡಿದ್ದಾರೆ. ಡಿ.ಕೆ.ಶಿ ಬೆಂಬಲಿಗರು ಮಾಡಿರುವ ಟ್ವೀಟ್ನ ಸ್ಕ್ರೀನ್ ಶಾಟ್ಗಳನ್ನು ಸ್ವತಃ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

''ನನ್ನನ್ನು ಟ್ರೋಲ್ ಮಾಡಲು ಕಾಂಗ್ರೆಸ್ ಕಚೇರಿ ಸೂಚಿಸಿದೆ''
ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪ, ಆನ್ಲೈನ್ ಟ್ರೋಲ್ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ ರಮ್ಯಾ, ''ನಾನು ಹಂಚಿಕೊಂಡಿರುವ ಸಂದೇಶವನ್ನು ಡಿ.ಕೆ.ಶಿವಕುಮಾರ್ ನಾಯಕತ್ವದ ಕಾಂಗ್ರೆಸ್ನ ಕಚೇರಿಯು ತನ್ನ ಮುಖಂಡರಿಗೆ ಕಾರ್ಯಕರ್ತರಿಗೆ ಕಳಿಸಿ ನನ್ನನ್ನು ಟ್ರೋಲ್ ಮಾಡಲು ಹೇಳಿದೆ. ನಿಮಗೆ ಕಷ್ಟ ಬೇಡ, ಆ ಕೆಲವನ್ನು ನಾನೇ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ.

ನನಗೆ ಅವಕಾಶ ಕೊಟ್ಟಿದ್ದು ರಾಹುಲ್ ಗಾಂಧಿ: ರಮ್ಯಾ
''ನನಗೆ ಯಾರಾದರೂ ಅವಕಾಶ ಕೊಟ್ಟಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ಅವರು ನನ್ನ ಬೆನ್ನಿಗೆ ನಿಂತು ಬೆಂಬಲ ನೀಡಿದರು. ನನಗೆ ಅವಕಾಶ ಕೊಟ್ಟೆ ಎಂದು ಹೇಳಿಕೊಳ್ಳುತ್ತಿರುವವರೆಲ್ಲರೂ ಕೇವಲ ಅವಕಾಶವಾದಿಗಳು. ಈ ಅವಕಾಶವಾದಿಗಳೇ ನನ್ನ ಬೆನ್ನಿಗೆ ಇರಿದರು. ನನ್ನನ್ನು ತುಳಿಯಲು ನೋಡಿದರು. ನೀವು ಟಿವಿಗಳಲ್ಲಿ ನೋಡುತ್ತಿರುವುದೆಲ್ಲ ಅವರ ವಂಚಕ ಮುಖವನ್ನು ಮುಚ್ಚಿಡಲು ಮಾಡುತ್ತಿರುವ ಪ್ರಹಸನ'' ಎಂದಿದ್ದಾರೆ.

ಮೌನವಾಗಿದ್ದದ್ದೇ ನಾನು ಮಾಡಿದ ತಪ್ಪು: ರಮ್ಯಾ
ಮತ್ತೊಂದು ಟ್ವೀಟ್ನಲ್ಲಿ, ''ನಾನು ಕಾಂಗ್ರೆಸ್ ಬಿಟ್ಟ ನಂತರ, 'ಆಕೆ ಕಾಂಗ್ರೆಸ್ಗೆ ಎಂಟು ಕೋಟಿ ಮೋಸ ಮಾಡಿದ್ದಾಳೆ ಎಂದು ಕೆಲವರು ಆರೋಪ ಮಾಡಿದರು. ಕನ್ನಡದ ಕೆಲವು ಟಿವಿಗಳಲ್ಲಿ ಅದೇ ಪ್ರಸಾರವಾಯ್ತು. ನನ್ನ ಗೌರವವನ್ನು ಕಳೆಯುವ, ಪ್ರಾಮಾಣಿಕತೆಯನ್ನು ಮಣ್ಣುಪಾಲುವ ಮಾಡುವ ಕಾರ್ಯವನ್ನು ಕೆಲವು ಮಾಡಿದರು. ಆದರೆ ನಾನು ಎಲ್ಲಿಗೂ ಓಡಿ ಹೋಗಲಿಲ್ಲ. ನಾನು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದೆ. ನಾನು ಯಾರಿಗೂ ಹಣ ಮೋಸ ಮಾಡಿಲ್ಲ. ನನ್ನ ವಿರುದ್ಧ ಆರೋಪಗಳು ಬಂದಾಗ ನಾನು ಮೌನವಾಗಿದ್ದಿದ್ದು ನಾನು ಮಾಡಿದ ತಪ್ಪು'' ಎಂದಿದ್ದಾರೆ ರಮ್ಯಾ.

ರಾಷ್ಟ್ರೀಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ಗೆ ರಮ್ಯಾ ಟ್ವೀಟ್
ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ಗೆ ಟ್ವೀಟ್ ಮಾಡಿರುವ ರಮ್ಯಾ, ''ಕೆಸಿ ವೇಣುಗೋಪಾಲ್ ಅವರೇ ನಿಮ್ಮ ಬಳಿ ವಿನಮ್ರ ಮನವಿ. ಮುಂದಿನ ಬಾರಿ ನೀವು ಕರ್ನಾಟಕಕ್ಕೆ ಬಂದಾಗ ದಯವಿಟ್ಟು ನನ್ನ ವಿರುದ್ಧ ಎದ್ದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರಿ. ಈ ಒಂದು ಸಹಾಯವನ್ನಾದರೂ ನನಗೆ ಮಾಡಿಕೊಡಿ. ಇಲ್ಲವಾದರೆ ನನ್ನ ಜೀವನ ಪರ್ಯಂತ ಈ ಸುಳ್ಳು ಆರೋಪಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ. ಇದರೊಟ್ಟಿಗೆ ಬದುಕಬೇಕಾಗುತ್ತದೆ'' ಎಂದಿದ್ದಾರೆ.


Click it and Unblock the Notifications











