ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?
"ಯಾರ್ ಹೇಳಿದ್ದು ಸ್ವಾಮಿ ಕನ್ನಡ ಸಿನಿಮಾ ನೋಡಲ್ಲ ಅಂತ? ಕೆಟ್ಟ ಸಿನಿಮಾ ಮಾಡ್ತಾರೆ. ಅದನ್ಯಾರು ನೋಡ್ತಾರೆ? ನಮ್ಮ ಕರ್ಮ ಮೀಡಿಯಾದವ್ರು ನೋಡ್ಲೇಬೇಕಲ್ವಾ. ಕೆಟ್ಟದ್ದು ಅಂತ ಹೇಳೋಕಾದ್ರೂ ನೋಡ್ಲೇಬೇಕಲ್ವಾ. ಏನೋ ಹೊಸಬ್ರು ಸ್ವಲ್ಪ ಅರೆಬೆಂದ ರೊಟ್ಟಿಯ ತರಹ ಸಿನಿಮಾ ಮಾಡಿದ್ರೆ ಓಕೆ. ದೊಡ್ಡ ದೊಡ್ಡವರೇ ರುಚೀನೇ ಇಲ್ದೆ ಇರೋ ಕೆಟ್ಟ ಸಿನಿಮಾ ಮಾಡಿದ್ರೆ ಹೆಂಗಿರುತ್ತೆ ಹೇಳಿ.."
ಹೀಗೇ ನಾಲ್ಕೈದು ವರ್ಷ ಅನುಭವ ಇರೋ ಸಿನಿಮಾ ವರದಿಗಾರರೊಬ್ಬರು ಸ್ನೇಹಿತರ ಜೊತೆ ಮಾತ್ನಾಡ್ತಿದ್ರು. ಹೌದಲ್ವಾ ಅನ್ನಿಸ್ತು.['ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?]
ಅವ್ರು ಈ ಮಾತನ್ನ ಹೇಳ್ತಾ ಇದ್ದಿದ್ದು 'ರಂಗಿತರಂಗ' ಸಿನಿಮಾ ವಿಷ್ಯದಲ್ಲಿ. ಒಂದೇ ವಾರದಲ್ಲಿ ಟೆಂಟೆತ್ತಿಕೊಂಡು ಡಬ್ಬ ಸೇರ್ಕೊಳ್ಳೋ ಸಿನಿಮಾಗಳ ನಡುವೆ 'ರಂಗಿತರಂಗ' ಸತತ ಐದುವಾರಗಳಿಂದ 'ಬಾಹುಬಲಿ'ಯಂತಹ 250 ಕೋಟಿಯ ಹೊಡೆತಕ್ಕೂ ಜಗ್ಗದೆ, ಬಾಕ್ಸಾಫೀಸ್ ಕಾ ಸುಲ್ತಾನ್ 'ಭಜರಂಗಿ ಭಾಯಿಜಾನ್' ಸಿನಿಮಾಗೂ ಕೇರ್ ಮಾಡದೆ ಹೌಸ್ಫುಲ್ ಶೋ ಕಾಣ್ತಿದೆ.[ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು]
'ಬಾಹುಬಲಿ'ಯ ಮುಂದೆ ಯಾವ ಸಿನಿಮಾಗಳು ನಿಲ್ಲೋದಿಲ್ಲ ಅಂತಾನೇ ಸಿನಿಪಂಡಿತರು ಖಡಾಖಂಡಿತ ಲೆಕ್ಕಾಚಾರ ಹಾಕಿದ್ರು. ಆದ್ರೆ ಅನುಭವಿಗಳ ಲೆಕ್ಕಾಚಾರವನ್ನೂ ಉಲ್ಟಾಪಲ್ಟಾ ಮಾಡಿದ್ದು ಹೊಸ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ'. ಈ ರಂಗಿತರಂಗ ಗೆದ್ದಿದ್ದರ ರಹಸ್ಯವನ್ನು ನಿಮ್ ಮುಂದೆ ಇಡ್ತಿದ್ದೀವಿ.

ಪರದೇಶಿಕತೆ ಇಲ್ಲದ ಪ್ರಾದೇಶಿಕತೆ
ಅನೂಪ್ ಭಂಡಾರಿ ವಿದೇಶದಲ್ಲಿದ್ದವರು. ಏಳು ವರ್ಷ ವಿವಿಧ ರಾಷ್ಟ್ರಗಳನ್ನ ಸುತ್ತಿ ಶಾರ್ಟ್ ಮೂವಿಯನ್ನ ಮಾಡಿ ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವ್ರು. ಆದ್ರೆ ಅಷ್ಟೆಲ್ಲಾ ವಿದೇಶಿ ಪರಿಚಯ ಇದ್ರೂ ಪರದೇಶಿ ಸಿನಿಮಾ ಮಾಡದೇ ಕರಾವಳಿಯ ಸಂಸ್ಕೃತಿಯನ್ನ ಬಿಂಬಿಸೋ ಪ್ರಾದೇಶಿಕ ಸಿನಿಮಾ ಮಾಡಿದ್ದಾರೆ.

ಫಾರೀನ್ ನೋಡಿ ಬೋರಾಗಿದೆ
ಎಲ್ಲಾ ಸ್ಟಾರ್ಗಳೂ ಮಾತೆತ್ತಿದ್ರೆ ಫಾರಿನ್. ಪ್ರತೀ ಸಿನಿಮಾದ ಎರಡು ಸಾಂಗ್ ವಿದೇಶದಲ್ಲಿರ್ಬೇಕು. ಅಲ್ಲಿನ ಲೊಕೇಷನ್ನನ್ನ ಕನ್ನಡದವ್ರಿಗೆ ತೋರಿಸ್ಬೇಕು ಅಂತ ಪಣತೊಟ್ಟವರಂತೆ ಹೊರಟು ಕೋಟಿ ಖರ್ಚು ಮಾಡ್ತಾರೆ. ಆದ್ರೆ ಅಲ್ಲೂ ನೋಡಿದ್ದನ್ನೇ ನೋಡೋದು.

ಒಳ್ಳೆಯ ಕಥೆ ಮಾಡಿ ಸ್ವಾಮಿ
ಕಾಸು ಕೊಟ್ರೆ ನಿರ್ದೇಶಕ ರಘುರಾಮ್ ಅವ್ರ ತರಹ ವಿಶ್ವದ ಏಳು ಅದ್ಭುತಗಳನ್ನ ನೋಡಿ ಬರ್ಬಹುದು ಆದ್ರೆ. ಒಳ್ಳೆಯ ಕಥೆಯನ್ನ ಕಾಸಿಲ್ದೇ ಮಾಡ್ಬಹುದು. ಅದಕ್ಕೆ ಸೃಜನಶೀಲತೇನೇ ಬಂಡವಾಳ. ಇದನ್ನ ಮಾಡೋರ ಕೊರತೆ ಕನ್ನಡದಲ್ಲಿದೆ.

ಅಪರಿಚಿತ ಜಗತ್ತನ್ನು ತೆರೆದಿಟ್ಟ ರಂಗಿ
ವಿದೇಶದಲ್ಲಿದ್ದು ಬಂದ್ರೂ ನಮ್ಮ ದೇಸೀ ತನುಮನದ ಅರಿವಿರೋ ಅಪರೂಪದ ನಿರ್ದೇಶಕನಿಗೆ ಕನ್ನಡದ ಪ್ರೇಕ್ಷಕರ ರಂಗು ರಂಗಾದ ಬಹುಪರಾಕ್ ಹೇಳಿದ್ದಾನೆ. ತುಳು ಜಾನಪದ ಶೈಲಿ ಮತ್ತು ಪಾಡ್ದನ ಪ್ರಕಾರದ ಡೆನ್ನಾನಾ ಡೆನ್ನಾನ ಹಾಡು ಮತ್ತು ಒಟ್ಟಾರೆ ಕಥೆಯೇ ನಮ್ಮನ್ನ ನಮ್ಮ ಕರ್ನಾಟಕದಲ್ಲೇ ಇರೋ ಅಪರಿಚಿತ ನಮ್ಮ ಮುಂದೆ ಜಗತ್ತೊಂದನ್ನ ತೆರೆದಿಡುತ್ತೆ.

ಅನೂಪ್ ಭಂಡಾರಿಯವ್ರ ವಡ್ಸರ್ರ
ವಡ್ಸರ್ರ ಅನ್ನೋ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಶಾರ್ಟ್ ಫಿಲಂ ನೋಡಿದ್ದೀರಾ? ಅನೂಪ್ ನಿರ್ದೇಶನದ ಮಾತುಗಳೇ ಇಲ್ಲದ ಈ ಶಾರ್ಟ್ ಮೂವಿಯಲ್ಲೇ ಮಾತಿಗಿಂತ ಹೆಚ್ಚಿನದ್ದನ್ನ ಹೇಳಿ ಮುಗಿಸಿರೋ ಅನೂಪ್ ಭಂಡಾರಿ, ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ಮಾಡಿದ್ದಾರೆ ಅನ್ನೋ ಮಾತನ್ನ ಸಿನಿಪ್ರೇಮಿಗಳು ಒಪ್ಪಿದ್ದಾರೆ.

ರಂಗಿತರಂಗ ರಹಸ್ಯ?
ನಿಗೂಢ ರಹಸ್ಯ ಅಂತೇನೂ ಇಲ್ಲ. ರಹಸ್ಯವಾಗಿರೋದನ್ನ ಓಪನ್ ಆಗಿಸೋದೇ ಚಿತ್ರದ ಗೆಲುವಿನ ರಹಸ್ಯ. ಚಿತ್ರ ನೋಡಿದವ್ರಿಗೆ ಅದು ಗೊತ್ತಾಗುತ್ತೆ. ಒಬ್ಬ ಕಥೆಗಾರ, ಒಬ್ಬ ನಿರ್ದೇಶಕ, ಒಬ್ಬ ಸೃಜನಶೀಲ ವ್ಯಕ್ತಿ ಮಾತ್ರ ಇಂಥ ಒಂದೊಳ್ಳೆ ಸಿನಿಮಾ ಕೊಡಬಲ್ಲ.

ಸಿನಿಮಾ ರಿಪೋರ್ಟರ್ ಹಿಡಿಶಾಪ
ಆದ್ರೆ ಕೋಟಿಗಟ್ಟಲೆ ಖರ್ಚು ಮಾಡಿ ಆಕ್ಷನ್ ಕಟ್ ಹೇಳೋಕೆ ಬರೋರೆಲ್ಲಾ ಸಿನಿಮಾ ಮಾಡಿದ್ರೆ ಸಿನಿಮಾ ರಿಪೋರ್ಟರ್ಗಳು ಸಿಕ್ಕಾಪಟ್ಟೆ ಬಯ್ಕೋತಾರೆ. ಅವ್ರ ಶಾಪ ನಿಮ್ಗೆ ತಟ್ಟದೇ ಇರೋದಿಲ್ಲ. ಪಾಪ ದಾರಿಯಲ್ಲಿ ಸಿಕ್ಕ ಆ ರಿಪೋರ್ಟರ್ ಬೈಕೊಳ್ತಾ ಇದ್ದಿದ್ದನ್ನ ನಿಮ್ಗೆ ಹೇಳ್ತಿದ್ದೀನಿ ಅಷ್ಟೆ.


Click it and Unblock the Notifications











