ನಟ ರಮೇಶ್ ಅರವಿಂದ್ ಸಾಧನೆಗೆ ಗೌರವ ಡಾಕ್ಟರೇಟ್ ಪುರಸ್ಕಾರ
ಕನ್ನಡ ಚಿತ್ರರಂಗದ ಪ್ರಮುಖ ನಟ ರಮೇಶ್ ಅರವಿಂದ್ ಅವರು ಕನ್ನಡ ಚಲನಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲು ನಿರ್ದರಿಸಿದೆ. ನಾಳೆ ( ಸೆಪ್ಟೆಂಬರ್ 14 ) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವ ಕಾರ್ಯಕ್ರಮ ಜರುಗಲಿದ್ದು, ಈ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಡಾಕ್ಟರೇಟ್ ನೀಡಲು ಮುಂದಾಗಿದ್ದ ವಿಶ್ವವಿದ್ಯಾಲಯ ಅರ್ಜಿಯನ್ನು ಆಹ್ವಾನಿಸಿತ್ತು.
ಅದರಂತೆ 15 ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಆಯ್ದ ಮೂವರಿಗೆ ಡಾಕ್ಟರಟ್ ನೀಡುತ್ತಿದ್ದೇವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಮಚಂದ್ರ ಗೌಡ ಹೇಳಿಕೆ ನೀಡಿದ್ದಾರೆ. ರಮೇಶ್ ಅರವಿಂದ್ ಅವರ ಜತೆಗೆ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ವಿ. ರವಿಚಂದರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಬೆಳಗಾವಿ ವಿವಿ ಮುಂದಾಗಿದೆ.
ಆದರೆ, ಈ ಕುರಿತು ವಿವಾದವೂ ಸಹ ಎದ್ದಿದ್ದು ರಮೇಶ್ ಅರವಿಂದ್ ಅವರು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಆದರೂ ಸಹ ಅವರಿಗೆ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಹಾಗೂ ಯಾರಿಗೆ ಡಾಕ್ಟರೇಟ್ ನೀಡಬೇಕೆಂದು ಆಯ್ಕೆ ಮಾಡಲು ರಾಜ್ಯಪಾಲರು ಸಮಿತಿಯೊಂದನ್ನು ನೇಮಿಸಿದ್ದರು ಹಾಗೂ ಈ ಸಮಿತಿ ಯಾರನ್ನು ಆಯ್ಕೆ ಮಾಡುತ್ತೋ ಅವರಿಗೆ ಮಾತ್ರ ಡಾಕ್ಟರೇಟ್ ಗೌರವವನ್ನು ನೀಡಬೇಕೆಂಬ ನಿಯಮವಿತ್ತು. ಆದರೂ ಸಹ ಇದನ್ನು ಮೀರಿ ಅರ್ಜಿಯನ್ನೇ ಸಲ್ಲಿಸದ ರಮೇಶ್ ಅರವಿಂದ್ ಅವರಿಗೆ ಡಾಕ್ಟರೇಟ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಇನ್ನು ಈ ಆರೋಪದ ಕುರಿತು ಮಾತನಾಡಿರುವ ಕುಲಪತಿಗಳಾದ ಡಾ. ರಾಮಚಂದ್ರ ಗೌಡ ಸಮಿತಿಯನ್ನು ವಿಚಾರಿಸಿದ ನಂತರ 16 ಅರ್ಜಿಗಳು ಬಂದಿರುವುದು ತಿಳಿದುಬಂದಿದ್ದು, ಈ ಪೈಕಿ ರಮೇಶ್ ಅರವಿಂದ್ ಅವರೂ ಸಹ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.
ಇನ್ನು ಈ ಘಟಿಕೋತ್ಸವ ಸಮಾರಂಭ ನಾಳೆ ( ಸೆಪ್ಟೆಂಬರ್ 14) ಮಧ್ಯಾಹ್ನ 12.30ಕ್ಕೆ ಸುವರ್ಣ ಸೌಧದಲ್ಲಿ ನಡೆಯಲಿದ್ದು, ರಾಜ್ಯ ಶಿಕ್ಷಣ ಸಚಿನ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸದ್ಯ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಚಿತ್ರೀಕರಣದಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೆ ( ಸೆಪ್ಟೆಂಬರ್ 10 ) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು 59ನೇ ವಸಂತಕ್ಕೆ ಕಾಲಿಟ್ಟಿದ್ದರು.


Click it and Unblock the Notifications











