ತಮ್ಮ ಕನಸಿನ 'ಹುಡುಗ'ನನ್ನು ಕನ್ನಡಿಗರಿಗೆ ಪರಿಚಯಿಸಿದ ಅಚ್ಚ 'ಕನ್ನಡತಿ' ರಂಜಿನಿ ರಾಘವನ್..!
ಒಂದಲ್ಲ.. ಎರಡಲ್ಲ.. ಹತ್ ಹತ್ರ ಐದು ವರ್ಷ ಪ್ರಸಾರವಾದ ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಖ್ಯಾತಿಯ ಶಿಖರಕ್ಕೇರಿದವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೆ ಬಹುತೇಕ ಸಾಂಪ್ರದಾಯಿಕ ಕಾಸ್ಟೂಮ್ಗಳಲ್ಲಿಯೇ ಕಾಣಿಸಿಕೊಂಡ ರಂಜನಿ ರಾಘವನ್ ಹೆಂಗಳೆಯರ ಪಾಲಿಗೆ ಮನೆ ಮಗಳು.
ಕೇವಲ ನಾಯಕಿಯಾಗಿಯಷ್ಟೇ ಅಲ್ಲದೇ ಕಥೆಗಾರ್ತಿಯಾಗಿರುವ ರಂಜನಿ ಕಥೆ ಡಬ್ಬಿ ಎಂಬ ಕಥಾಸಂಕಲನದ ರೂವಾರಿ ಕೂಡ ಹೌದು. ಯುವ ಸಾಹಿತ್ಯ ರತ್ನ ಕೂಡ ಹೌದು. ಇಂಥಾ ರಂಜನಿ ರಾಘವನ್ ಸದ್ಯ ತಮ್ಮ ಗೆಳೆಯ, ಪ್ರಿಯಕರ, ಮುಂದೆ ಮದುವೆಯಾಗಲಿರುವ ಹುಡುಗನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದ್ದಾರೆ. ಯಾಕೆಂದರೆ ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಿನ್ನೆ ಮೊನ್ನೆ ಜತೆಯಾಗಿ ಓಡಾಡಿದವರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ.

ಆದರೆ.. ಕನ್ನಡದ ಬಗ್ಗೆ ತುಂಬು ಅಭಿಮಾನ ಹೊಂದಿರುವ ಬೆಂಗಳೂರಿನ ಅಚ್ಚ ಕನ್ನಡತಿ ರಂಜನಿ ರಾಘವನ್ ಮಾತ್ರ ಇಲ್ಲಿಯವರೆಗೆ ಪುಸ್ತಕದ ಮೇಲೇ ತಮಗೆ ಇರುವ ಪ್ರೀತಿಯನ್ನಷ್ಟೇ ಹಂಚಿಕೊಳ್ಳುತ್ತಿದ್ದರು. ಆದರೆ, ಎಲ್ಲಿಯೂ ಅಪ್ಪಿ ತಪ್ಪಿ ತಮಗೆ ಹುಡಗನೊಬ್ಬನ ಮೇಲೆ ಪ್ರೀತಿಯಾಗಿದೆ ಎಂದು ಹೇಳಿರಲಿಲ್ಲ. ಹೀಗಾಗಿಯೇ ರಂಜಿನಿ ನೀಡಿದ ಈ ಸ್ವೀಟ್ ಸರ್ಫ್ರೈಸ್ನಿಂದ ಆಶ್ಚರ್ಯ ಚಕಿತಗೊಂಡಿರುವ ಅಭಿಮಾನಿಗಳು ಸದ್ಯಕ್ಕೆ ರಂಜಿನಿ ರಾಘವನ್ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಆದಷ್ಟು ಬೇಗ ಮದುವೆಯ ಸಿಹಿ ಸುದ್ದಿಯನ್ನೂ ಕೂಡ ನೀಡಿ ಎಂಬ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ ರಂಜನಿ ರಾಘವನ್ ಹೃದಯ ಗೆದ್ದ ಚೋರನ ಹೆಸರು ಸಾಗರ್ ಭಾರದ್ವಾಜ್. ವೃತ್ತಿಯಲ್ಲಿ ಸಾಗರ್ ರನ್ನರ್, ಸೈಕಲಿಸ್ಟ್ ಮತ್ತು ಬೈಕರ್ ಎಂಬ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ. ಈ ಅಥ್ಲೆಟ್ ಮತ್ತು ಆಕ್ಟರ್ ನಡುವೆ ಪ್ರೇಮಾಂಕುರವಾಗಿದ್ಹೇಗೆ ಎನ್ನುವುದನ್ನು ಈಗ ಖುದ್ದು ರಂಜಿನಿ ಅವರೇ ಹೇಳಬೇಕಿದೆ.

ಉಳಿದಂತೆ ಇತ್ತೀಚೆಗಷ್ಟೇ ರಂಜನಿ ರಾಘವನ್, ತಮ್ಮ ಕನಸಿನ ಹುಡುಗನ ಕುರಿತು ಮಾತನಾಡಿದ್ದರು. ಅತ್ಯುತ್ತಮ ಸ್ನೇಹಿತನಾದವನು, ಬಾಳ ಸಂಗಾತಿಯಾದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರು. ಈಗ ಸಮಾಜದಲ್ಲಿ ಹಾಗೇ ಇರೋದು. ಮುಂಚೆ ಗಂಡನಿಗೆ ಸ್ವಲ್ಪ ಚೆಕ್ ಲಿಸ್ಟ್ ಕೊಟ್ಟಿದ್ದರು. ಇವತ್ತು ಅದೆಲ್ಲ ಬಿಟ್ಟು ನಮಗೆ ಯಾರಾದರೂ ಬೆಸ್ಟ್ ಫ್ರೆಂಡ್ ಇದ್ದರೆ ನಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ನಮಗೆ ಬೆಸಿಕ್ ಬೇಕಿರುವುದು ಫ್ರೆಂಡ್ ಶಿಪ್ ಮತ್ತು ಒಡನಾಟ. ಮಿಕ್ಕಿದ್ದೆಲ್ಲ ನಂತರ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆ ತರ ಇದ್ದರೆ ಚೆನ್ನಾಗಿರುತ್ತೆ ಎಂದು ರಂಜನಿ ರಾಘವನ್ ಹೇಳಿದ್ದರು. ಆದರೆ ಆ ತರಹದ ಸ್ನೇಹಿತ ಈಗಾಗಲೇ ನನಗೆ ಸಿಕ್ಕಿದ್ದಾನೆ ಎನ್ನುವ ವಿಚಾರವನ್ನು ಮಾತ್ರ ಈ ಸಂದರ್ಶನದಲ್ಲಿ ಹೇಳಿರಲಿಲ್ಲ.
ಇನ್ನೂ ತಮ್ಮ ನೆಚ್ಚಿನ ನಾಯಕಿ ಮದುವೆಯಾಗುತ್ತಿರುವ ಸುದ್ದಿಯನ್ನು ನೀಡಿದಾಗೆಲ್ಲ ಕೆಲ ಅಭಿಮಾನಿಗಳಿಗೆ ಖುಷಿಯಾದರೆ, ಇನ್ನೂ ಕೆಲವರಿಗೆ ದುಃಖವಾಗುತ್ತೆ. ಸದ್ಯಕ್ಕೆ ರಂಜನಿ ರಾಘವನ್ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ರಂಜನಿ ರಾಘವನ್ ಅವರ ಇನ್ಸ್ಟಾಗ್ರಾಮ್ನ ಕಾಮೆಂಟ್ ಸೆಕ್ಷನ್ನಲ್ಲಿ ಕೆಲವರು ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ.


Click it and Unblock the Notifications











