ಚೆಕ್ ಬೌನ್ಸ್ ಪ್ರಕರಣದಲ್ಲಿ 'ರನ್ನ' ಚಿತ್ರದ ನಿರ್ಮಾಪಕ
ಚೆಕ್ ಬೌನ್ಸ್ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ 'ರನ್ನ' ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಕುಮಾರ್ ಎಂಬುವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಬಸವೇಶ್ವರ ಠಾಣೆ ಪೊಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದರು. ಉದ್ಯಮಿ ಅನಿಲ್ ಕುಮಾರ್ ಅವರಿಂದ ಚಂದ್ರಶೇಖರ್ ಅವರು ರು.20 ಲಕ್ಷ ಪಡೆದಿದ್ದಾರೆಂಬ ಆರೋಪ ಮಾಡಲಾಗಿದೆ.

ಇದಕ್ಕೆ ಪ್ರತಿಯಾಗಿ ಚಂದ್ರಶೇಖರ್ ಅವರು ಕೊಟ್ಟಿದ್ದ ಚೆಕ್ ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದ್ರಶೇಖರ್ ಅವರು ಕನ್ನಡದ ಅಣ್ಣಯ್ಯ ಹಾಗೂ ಬಿಂದಾಸ್ ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಇನ್ನು ರನ್ನ ಚಿತ್ರದ ವಿಚಾರಕ್ಕೆ ಬರುವುದಾದರೆ, ವಿಕ್ಟರಿ ಹಾಗೂ ಅಧ್ಯಕ್ಷ ಚಿತ್ರಗಳ ನಿರ್ದೇಶಕ ನಂದಕಿಶೋರ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ನಾಯಕಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ರನ್ನ' ಚಿತ್ರವು ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಪವನ್ ಕಲ್ಯಾಣ್ ಅಭಿನಯಿಸಿದ್ದ ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಏಕತಾನತೆಯನ್ನು ಮುರಿದಂತಹ ಚಿತ್ರ ಇದು. ಸರಿಸುಮಾರು ರು.55 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.85 ಕೋಟಿ ಬಾಚಿತು.


Click it and Unblock the Notifications











