ಅತ್ಯಾಚಾರ ಆರೋಪ: ಕನ್ನಡ ಸಿನಿಮಾ ನಿರ್ಮಾಪಕನ ಬಂಧನ
ಯುವತಿಯೊಬ್ಬರಿಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಆಸೆ ತೋರಿಸಿ ಹಾಗೂ ಆಕೆಯನ್ನೇ ಮದುವೆಯಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಕನ್ನಡ ಸಿನಿಮಾದ ನಟ, ನಿರ್ಮಾಪಕ ಹರ್ಷವರ್ಧನ್ ಟಿಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
'ಮಿಷನ್ 2023' ಹೆಸರಿನ ಸಿನಿಮಾವನ್ನು ನಿರ್ಮಾಣ ಮಾಡಿ ನಾಯಕನಾಗಿ ನಟಿಸಿದ್ದ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ ಎಂತಾದ ಸಿನಿಮಾಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡು, ಆಕೆಗೆ ತನ್ನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಬಳಿಕ ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ, ಮದುವೆಯಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ.
ಮದುವೆಯಾಗುವುದಾಗಿ ನಂಬಿಸಿ ಕಳೆದ ಎರಡು ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹರ್ಷವರ್ಧನ್ ಅನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕನ್ನಡದ ಮತ್ತೊಬ್ಬ ನಟನನ್ನು ಇಂಥಹುದೇ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ಶೇಷಗಿರಿ ಬಸವರಾಜ್ ಎಂಬ ನಟ, ಯುವತಿಯೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಆ ಯುವತಿಯೊಟ್ಟಿಗೆ ಅಸಭ್ಯವಾಗಿ ವರ್ತಿಸಿದ್ದ ಈ ಬಗ್ಗೆ ಯುವತಿಯು ಕೆಲ ದಿನಗಳ ಹಿಂದೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಯುವತಿ ದೂರು ನೀಡಿದ ಬಳಿಕ ನಾಪತ್ತೆಯಾಗಿದ್ದ ಶೇಷಗಿರಿ ಬಸವರಾಜ್ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ನಟನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಶೇಷಗಿರಿ ಬಸವರಾಜ್ ಮೈಸೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದು, ಆತನನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಶೇಷಗಿರಿ ಬಸವರಾಜ್, 'ಕನ್ನಡದ 'ಡಾರ್ಕ್', 'ಸಸ್ಪೆನ್ಸ್', 'ಕಿಲಾಡಿಗಳು', 'ಆಶಿಕಿ 3' ಇನ್ನೂ ಕೆಲವು ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











