ಸಂಜನಾ ಆನಂದ್ ಜೊತೆ ನಿಜಕ್ಕೂ ಮದುವೆಯಾಗುತ್ತಿದ್ದಾರಾ ಚಂದನ್ ಶೆಟ್ಟಿ ? ಸತ್ಯಾಂಶ ಇಲ್ಲಿದೆ...!
ಸಾಮಾಜಿಕ ಜಾಲತಾಣ ಎಷ್ಟು ಉಪಯುಕ್ತ ಮತ್ತು ಜನ ಸ್ನೇಹಿಯೋ ಅಷ್ಟೇ ಪ್ರಮಾಣದಲ್ಲಿ ವಿಲನ್ ಕೂಡ. ಅದರಲ್ಲಿಯೂ ಸೆಲೆಬ್ರಿಟಿಗಳ ಪಾಲಿಗೆ ಸೋಶಿಯಲ್ ಮೀಡಿಯಾ ಮಗ್ಗಲ ಮುಳ್ಳು. ಇಲ್ಲಿ ಚೂರೇ ಚೂರು ಯಾಮಾರಿದರೂ ಸುಳ್ಳು ಸುದ್ದಿಗಳಿಗೆ ತಾರೆಯರು ಆಹಾರವಾಗಬೇಕಾಗುತ್ತೆ. ಸಾರ್ವಜನಿಕವಾಗಿ ಕಸಿವಿಸಿ ಅನುಭವಿಸಬೇಕಾದ ಸಂಕಷ್ಟ ಹೆಚ್ಚಾಗುತ್ತೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸದ್ಯದ ಉದಾಹರಣೆ.
ಹೌದು, ಅಸಲಿಗೆ ಕಳೆದ ಕೆಲ ದಿನಗಳಿಂದ ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ, ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ಹಬ್ಬಿಸಿದ್ದಾರೆ. ಸತ್ಯಾಸತ್ಯತೆಯನ್ನು ಅರಿಯದೇ ಕೆಲವರು ಈ ಸುದ್ದಿಯನ್ನು ನಿಜ ಎಂದು ಅಂದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಗೆ ಶುಭಾಶಯಗಳನ್ನು ಕೂಡ ಹೇಳುತ್ತಿದ್ದಾರೆ. ಈ ಹಿನ್ನೆಲೆ ಮೊನ್ನೆಯಷ್ಟೇ ಈ ವಿಚಾರದ ಕುರಿತು ಸ್ಪಷ್ಟನೆಯನ್ನು ಸಂಜನಾ ನೀಡಿದ್ದಾರೆ. ನನ್ನ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಕೂಡ ಹೇಳಿದ್ದಾರೆ.

ಆದರೂ ಕೂಡ, ಕೆಲವರಿಗೆ ಇನ್ನೂ ನಂಬಿಕೆ ಬರುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇಬ್ಬರ ಮದುವೆಯ ಕುರಿತ ಮೀಮ್ಗಳನ್ನು ಅನೇಕರು ತಮ್ಮ ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಜನರನ್ನೂ ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೀಗಾಗಿಯೇ ಈಗ ಚಂದನ್ ಶೆಟ್ಟಿ ತಮ್ಮ ಎರಡನೇ ಮದುವೆಯ ಕುರಿತು ಹಬ್ಬಿರುವ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ. ಸ್ಪಷ್ಟನೆಯನ್ನು ನೀಡಿದ್ದಾರೆ.
ಹೌದು, ಅಸಲಿಗೆ ಟ್ರೆಂಡಿಂಗ್ ಹೆಸರಿನ ಖಾತೆಯೊಂದರಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯ ಕುರಿತು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಬಲ್ಲ ಮೂಲಗಳ ಪ್ರಕಾರ ಇವರಿಬ್ಬರ ಮದುವೆ ಸದ್ಯದಲ್ಲಿಯೇ ಅದ್ದೂರಿಯಾಗಿ ನಡೆಯಲಿದೆ ಎಂದು ಫೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿದ್ದು ಕೆಲವರು ಈ ವಿಚಾರ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರಿಗೆ ಗೊತ್ತಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಇನ್ನೂ ಬಹುತೇಕರು ಚಂದನ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಈ ವಿಚಾರಾ ನಿಜಾನಾ ಎನ್ನುವ ಪ್ರಶ್ನೆಯನ್ನು ನೇರವಾಗಿ ಕೇಳಿದ್ದಾರೆ.

ಹೀಗಾಗಿಯೇ ಇದಕ್ಕೆ ಉತ್ತರವನ್ನು ನೀಡಿರುವ ಚಂದನ್ ಶೆಟ್ಟಿ ಇದೆಲ್ಲವೂ ಶುದ್ಧ ಸುಳ್ಳು ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಚಂದನ್ ಶೆಟ್ಟಿ ತಮ್ಮ ಮದುವೆಯ ಕುರಿತು ಸ್ಪಷ್ಟನೆಯನ್ನು ನೀಡಿದ ನಂತರವೂ ಕೂಡ, ಚಂದನ್ ಶೆಟ್ಟಿ ಕಾಮೆಂಟ್ ಕಡೆ ಗಮನ ಹರಿಸಲು ವ್ಯವಧಾನ ಇರದ ಅನೇಕರು ಚಂದನ್ ಶೆಟ್ಟಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕಾಲೆಳೆಯುತ್ತಿದ್ದಾರೆ.
ಉಳಿದಂತೆ ಸದ್ಯಕ್ಕೆ ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಸದ್ಯಕ್ಕೆ ಬ್ಯಾಚುಲರ್ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ, ಹಾಡು, ಅಭಿನಯ ಎಂದು ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯೆಲ್ಲ ವಿಚ್ಚೇದನದ ವಿಚಾರವನ್ನೂ ಮರೆತು ದುಬೈ ಸುತ್ತಾಡಿಕೊಂಡು ಬಂದಿದ್ದಾರೆ. ಇನ್ನೂ ಸಂಜನಾ ಆನಂದ್ ಸದ್ಯಕ್ಕೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೇ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸೂತ್ರಧಾರಿ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರ ಕೂಡ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಈ ಚಿತ್ರ ಹೊರತು ಪಡಿಸಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಭಿನಯದ ಮುದ್ದು ರಾಕ್ಷಸಿ ಕೂಡ ತೆರೆಗೆ ಬರಬೇಕಿದೆ.


Click it and Unblock the Notifications











