ನಿಮಗಿದು ಗೊತ್ತೇ? ಶಂಕರ್ನಾಗ್ ಅವರ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ರು ಪುನೀತ್ ರಾಜ್ಕುಮಾರ್!
ಶಂಕರ್ ನಾಗ್ ಹಾಗೂ ಪುನೀತ್ ರಾಜ್ಕುಮಾರ್ ಈ ಇಬ್ಬರೂ ಪ್ರತಿಭಾವಂತ ನಟರೂ ಸಹ ಇಂದು ನಮ್ಮೊಡನೆ ಇಲ್ಲ. ಅತಿ ಕಿರಿಯ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ ಈ ಇಬ್ಬರೂ ಸಹ ಅಜರಾಮರರಾಗಿ ಕನ್ನಡ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಹಾಗೂ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ.
ಇನ್ನು ರಾಜ್ಕುಮಾರ್ ಹಾಗೂ ಶಂಕರ್ ನಾಗ್ ಕುಟುಂಬಗಳ ಸ್ನೇಹ ಸಂಬಂಧ ಅಂದು ಇಂದು ಚೆನ್ನಾಗಿಯೇ ಇದೆ. ಶಂಕರ್ ನಾಗ್ ಯಶಸ್ಸಿನ ಉತ್ತುಂಗದಲ್ಲಿದ್ದ ಡಾ. ರಾಜ್ಕುಮಾರ್ ಅವರಿಗೆ 'ಒಂದು ಮುತ್ತಿನ ಕಥೆ' ಎಂಬ ವಿಭಿನ್ನ ಕಥಾಹಂದರವಿದ್ದ ಚಿತ್ರವನ್ನು ನಿರ್ದೇಶಿಸಿದ್ದರು. ಅಷ್ಟೇ ಅಲ್ಲದೇ ಅನಂತ್ ನಾಗ್ ಹಾಗೂ ರಾಜ್ಕುಮಾರ್ ಕಾಮನಬಿಲ್ಲು ಹಾಗೂ ಭಕ್ತಪ್ರಹ್ಲಾದ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.
ಇನ್ನು ಶಿವರಾಜ್ಕುಮಾರ್ ಅಭಿನಯದ ಇಂಡಸ್ಟ್ರಿ ಹಿಟ್ ಚಿತ್ರ ಜೋಗಿಯಲ್ಲಿ ಶಂಕರ್ ನಾಗ್ ಪತ್ನಿ ಅರುಂಧತಿನಾಗ್ ತಾಯಿಯ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ಪುನೀತ್ ರಾಜ್ಕುಮಾರ್ ನಾಯಕನಾಗಿ ಅಭಿನಯಿಸಿದ್ದ ಹಾಗೂ ನಿರ್ಮಾಪಕನಾಗಿ ನಿರ್ಮಿಸಿದ್ದ ಹಲವು ಚಿತ್ರಗಳಲ್ಲಿ ಅನಂತ್ ನಾಗ್ ನಟಿಸಿದ್ದರು. ಹೀಗೆ ಅಂದಿನಿಂದ ಹಿಂದಿನವರೆಗೂ ಚಿತ್ರಗಳಿಗಾಗಿ ಕೈಜೋಡಿಸುತ್ತಾ ಬಂದಿರುವ ಈ ಕುಟುಂಬಗಳು ಒಟ್ಟಿಗೆ ಕೆಲಸ ಮಾಡಿದ್ದ ಚಿತ್ರವೊಂದಕ್ಕೆ ನಟ ಪುನೀತ್ ರಾಜ್ಕುಮಾರ್ ಬಾಲನಟ ಮಾಸ್ಟರ್ ಲೋಹಿತ್ ಆಗಿದ್ದಾಗ ಮುಹೂರ್ತದಂದು ಕ್ಲಾಪ್ ಮಾಡಿದ್ದ ಚಿತ್ರ ಸದ್ಯ ವೈರಲ್ ಆಗಿದೆ.

ಒಂದು ಮುತ್ತಿನ ಕಥೆಗಾಗಿ ಮಾಸ್ಟರ್ ಲೋಹಿತ್ ಕ್ಲಾಪ್
ಶಂಕರ್ ನಾಗ್ ನಿರ್ದೇಶನದ ಹಾಗೂ ರಾಜ್ಕುಮಾರ್ ಅಭಿನಯದ ಒಂದು ಮುತ್ತಿನ ಕಥೆ ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರ 1985ರಂದು ನಡೆದಿತ್ತು. ಅಂದು ಮಾಸ್ಟರ್ ಲೋಹಿತ್ ಕ್ಲಾಪ್ ಮಾಡಿ ಒಂದು ಮುತ್ತಿನ ಕಥೆ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದರು. ಸದ್ಯ ಇಂದು ( ನವೆಂಬರ್ 9 ) ಶಂಕರ್ ನಾಗ್ ಹುಟ್ಟುಹಬ್ಬದ ನೆನಪಿನ ಸಲುವಾಗಿ ಅಪ್ಪು ಕ್ಲಾಪ್ ಮಾಡಿರುವ ಈ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಶಂಕರ್ ನಾಗ್ ಅವರ ಚಿತ್ರಕ್ಕಾಗಿ ಪುನೀತ್ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು.

ಅಪ್ಪು ಕ್ಲಾಪ್ ಮಾಡಿದ್ದ ಮೊದಲ ಚಿತ್ರವದು
ಶಂಕರ್ ನಾಗ್ ಚಿತ್ರಕ್ಕಾಗಿ ಪುನೀತ್ ರಾಜ್ಕುಮಾರ್ ಕ್ಲಾಪ್ ಮಾಡಿದ್ದು ಒಂದು ವಿಶೇಷವಾದರೆ, ಇದು ಅಪ್ಪು ತಮ್ಮ ಜೀವನದಲ್ಲಿ ಚಿತ್ರವೊಂದಕ್ಕೆ ಮಾಡಿದ್ದ ಮೊದಲ ಕ್ಲಾಪ್ ಎಂಬುದು ಮತ್ತೊಂದು ವಿಶೇಷ. ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪುವಿನಲ್ಲಿ ಶುರುವಾದ ಚಿತ್ರಗಳಿಗೆ ಬೆಂಬಲ ನೀಡುವ ಹವ್ಯಾಸ ಸ್ಟಾರ್ ಆಗಿ ಬೆಳೆದ ನಂತರವೂ ಸಹ ಮುಂದುವರೆದಿತ್ತು. ಅಪ್ಪು ಹಲವಾರು ಚಿತ್ರಗಳಿಗೆ ಇದೇ ರೀತಿ ಕ್ಲಾಪ್ ಮಾಡಿದ್ದಾರೆ, ಹಾಡು ಹಾಡಿ ಬೆಂಬಲಿಸಿದ್ದಾರೆ, ಆಡಿಯೋ, ಟೀಸರ್ ಲಾಂಚ್ ಮಾಡಿ ಇತರೆ ಕಲಾವಿದರ ಬೆನ್ನು ತಟ್ಟಿದ್ದಾರೆ.

ಗಂಧದ ಗುಡಿಯಲ್ಲೂ ಒಂದು ಮುತ್ತಿನ ಕಥೆ ಮೆಲುಕು ಹಾಕಿದ್ದ ಅಪ್ಪು
ಇನ್ನು ಸದ್ಯ ಚಿತ್ರಮಂದಿರಗಳಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಗೆದ್ದಿರುವ ಗಂಧದ ಗುಡಿ ಚಿತ್ರದಲ್ಲಿ ನೇತ್ರಾಣಿ ಅಂಡರ್ ವಾಟರ್ ಕುರಿತಾದ ದೃಶ್ಯಗಳಿವೆ. ಈ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾದಾಗ ಅಮೋಘವರ್ಷ ಜತೆ ಮಾತನಾಡುವ ಅಪ್ಪು ಒಂದು ಮುತ್ತಿನ ಕಥೆ ಚಿತ್ರೀಕರಣದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲೂ ಈ ರೀತಿ ಅಂಡರ್ ವಾಟರ್ ಶೂಟಿಂಗ್ ತಂತ್ರಜ್ಞಾನ ಇದ್ದಿದ್ದರೆ ಬೇರೆ ದೇಶಕ್ಕೆ ತೆರಳದೇ ಇಲ್ಲಿಯೇ ಚಿತ್ರೀಕರಣ ಮಾಡಬಹುದಿತ್ತು ಎಂದು ಹೇಳುತ್ತಾರೆ. ಹೀಗೆ ತಾವು ಕ್ಲಾಪ್ ಮಾಡಿದ್ದ ಮೊದಲ ಚಿತ್ರದ ಕುರಿತಾಗಿ ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಮಾತನಾಡಿದ್ದಾರೆ.

ಅಂಡರ್ ವಾಟರ್ನಲ್ಲಿ ಶೂಟ್ ಆದ ಭಾರತದ ಪ್ರಥಮ ಚಿತ್ರ
ಒಂದು ಮುತ್ತಿನ ಕಥೆ ಚಂದನವನದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಮೊದಲು ಅಂಡರ್ ವಾಟರ್ನಲ್ಲಿ ಶೂಟ್ ಆದ ಚಿತ್ರ ಎಂಬ ದಾಖಲೆಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಈ ಚಿತ್ರದ ಮೂಲಕ ಶಂಕರ್ನಾಗ್ ರಾಜ್ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಿದ ಅತಿ ಕಿರಿಯ ನಿರ್ದೇಶಕ ಎಂದೂ ಸಹ ಎನಿಸಿಕೊಂಡರು.


Click it and Unblock the Notifications











