ಅರೇ, ರಶ್ಮಿಕಾ ಮಂದಣ್ಣಗೆ ದಿಢೀರ್ ಕನ್ನಡ ಸಿನಿಮಾ ಮೇಲೆ ಲವ್ವಾಗೋಯ್ತು
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದಲೋಕ ಪ್ರವೇಶಿಸಿದ ರಶ್ಮಿಮಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಹೀರೊಯಿನ್ ಆಗಿ ಮೆರೆಯುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಕೂಡ ರಶ್ಮಿಕಾ ಹವಾ ನಡೀತಿದೆ. ಮದುವೆ ಬಳಿಕ ಕೂಡ ಬ್ರೇಕ್ ಪಡೆಯದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. 'ಪೊಗರು' ಸಿನಿಮಾ ಬಳಿಕ ಕನ್ನಡದ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.
ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ರಶ್ಮಿಕಾ ಕೆಲ ಕನ್ನಡ ಸಿನಿರಸಿಕರ ದ್ವೇಷ ಕಟ್ಟಿಕೊಂಡಿದ್ದಾರೆ. ಒಂದು ಹಂತಕ್ಕೆ ರಶ್ಮಿಕಾರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಅರ್ಥದಲ್ಲಿ ಕೆಲವರು ಟ್ರೋಲ್ ಮಾಡಿದ್ದರು. ಕೊಡಗಿನ ಕುವರಿ ಕೂಡ ಕನ್ನಡ ಚಿತ್ರರಂಗದ ಜೊತೆ ನಂಟು ಕಳೆದುಕೊಂಡಿದ್ದಾರೆ. ಯಾರೊಟ್ಟಿಗೂ ಸಂಪರ್ಕದಲ್ಲಿ ಇಲ್ಲ. ಆದರೆ ದಿಢೀರನೆ ಕನ್ನಡ ಚಿತ್ರವೊಂದಕ್ಕೆ ಶುಭ ಕೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ 'ಮೋಡ ಕವಿದ ವಾತಾವರಣ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ 'ಯಯಾತಿ ಯಯಾತಿ' ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಸುನಿ ಟ್ವಿಟ್ಟರ್ನಲ್ಲಿ ಸಾಂಗ್ ಲಿಂಕ್ ಶೇರ್ ಮಾಡಿದ್ದಾರೆ. "ಬಗೆದಷ್ಟು ಬಾಂಧವ್ಯ.. ಮೊಗೆದಷ್ಟೂ ರಸಕಾವ್ಯ.. ಸವಿಯೋಣ ಬಾ ಶೃಂಗಾರ.. ಇಟ್ಟಷ್ಟು ಚುಕ್ಕಿಯ" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ರೀ-ಟ್ವೀಟ್ ಮಾಡಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.
"ಇಡೀ 'ಮೋಡ ಕವಿದ ವಾತಾವರಣ' ಚಿತ್ರತಂಡಕ್ಕೆ ಶುಭವಾಗಲಿ.. ಸಿಂಪಲ್ ಸುನಿ ಸರ್ ಆಲ್ದಿ ಬೆಸ್ಟ್.. ಬಹಳ ಪ್ರೀತಿಯಿಂದ" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. "ಏನ್ ಮೇಡಂ ಸಡನ್ ಆಗಿ ಕನ್ನಡ ಸಿನಿಮಾ ಬಗ್ಗೆ ಟ್ವೀಟ್ ಮಾಡಿಬಿಟ್ಟಿದ್ದೀರಾ?" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ರಶ್ಮಿಕಾ ಕನ್ನಡ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು ನಿಜಾನಾ?" ಎಂದು ಮತ್ತೊಬ್ಬರು ಅಚ್ಚರಿಯಿಂದ ಕೇಳಿದ್ದಾರೆ. ಮದುವೆ ಬಳಿಕ 'ರಣಬಾಲಿ' ಸಿನಿಮಾ ಚಿತ್ರೀಕರಣಕ್ಕೆ ವಿಜಯ್ ಹಾಗೂ ರಶ್ಮಿಕಾ ಹಾಜರಾಗಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ಸಿನಿಮಾ ಸೆಟ್ಗೆ ನವಜೋಡಿಯನ್ನು ಚಿತ್ರತಂಡ ಸ್ವಾಗತಿಸಿತ್ತು. ಅದಕ್ಕೂ ಮುನ್ನ ಸ್ನೇಹಿತರ ಜೊತೆ 'ಬಡ್ಡಿಮೂನ್'ಗೆ ದಂಪತಿ ಹೋಗಿ ಬಂದಿದ್ದರು. ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದರು.
ಸಿಂಪಲ್ ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿತ್ತು. ಸಿನಿಮಾ ಶತದಿನೋತ್ಸವ ಆಚರಿಸಿ ರಶ್ಮಿಕಾಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅದರ ಬೆನ್ನಲ್ಲೇ ತೆಲುಗು ಸಿನಿಮಾಗಳತ್ತ ಆಕೆ ಮುಖ ಮಾಡಿದ್ದರು. 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದರು. ಬಳಿಕ ಬಂದ 'ಗೀತಾಗೋವಿಂದಂ' ಸಿನಿಮಾ ಆಕೆಯ ಅದೃಷ್ಟ ಬದಲಿಸಿತ್ತು.
ರಾಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಶ್ರೀರಂಗರಾಜು, ಮೈಸೂರು ರಮೇಶ್, ಲೋಕೇಶ್ ಬೆಳವಡಿ, ಗೋವಾ ರಮೇಶ್ ಎಂಬುವವರು 'ಮೋಡ ಕವಿದ ವಾತಾವರಣ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಶೀಲಂ ಎಂ ಸ್ವಾಮಿ, ಮೋಕ್ಷ ಕುಶಾಲ್, ಸಾತ್ವಿಕ ಚಿತ್ರದ ಲೀಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.
ಸದ್ಯ ಬಿಡುಗಡೆ ಆಗಿರುವ 'ಯಯಾತಿ ಯಯಾತಿ' ಹಾಡಿಗೆ ಸುನಿ ಸಾಹಿತ್ಯ ಬರೆದಿದ್ದು ಸಂಗೀತಾ ರವೀಂದ್ರ, ಚೇತನ್ ನಾಯಕ್ ದನಿಯಾಗಿದ್ದಾರೆ. ಜೂನ್ 26ಕ್ಕೆ 'ಮೋಡ ಕವಿದ ವಾತಾವರಣ' ಸಿನಿಮಾ ಬಿಡುಗಡೆ ಆಗಲಿದೆ. ಕೆಲ ದಿನಗಳ ಹಿಂದೆ ಚಿತ್ರದ 'ನನ್ನದೆಯಾ ಹಾಡೊಂದನು' ಎನ್ನುವ ಸಿಂಗಲ್ ಟೇಕ್ ಸಾಂಗ್ ರಿಲೀಸ್ ಆಗಿತ್ತು. ಸುನಿ ಗರಡಿಯಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶೀಲಂ ಈ ಚಿತ್ರದ ಮೂಲಕ ಹೀರೊ ಆಗಿದ್ದಾರೆ.
ಸೈಂಟಿಫಿಕ್ ಫಿಕ್ಷನ್ ಕಥಾಹಂದರ ಸಿನಿಮಾ ಇದು. ಕಳೆದ ವರ್ಷ 'ಗತವೈಭವ' ರೀತಿಯ ವಿಭಿನ್ನ ಸಿನಿಮಾ ಕಟ್ಟಿಕೊಟ್ಟಿದ್ದ ಸುನಿ ಈಗ 'ಮೋಡ ಕವಿದ ವಾತಾವರಣ' ಕಥೆ ಹೇಳಲು ಸಜ್ಜಾಗಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











