ಹಿಂದಿ ಕಾರ್ಯಕ್ರಮದಲ್ಲಿ ಕನ್ನಡವನ್ನು ನಿರ್ಲಕ್ಷಿಸಿದ ರಶ್ಮಿಕಾ ಮಂದಣ್ಣ
ಕನ್ನಡ ಭಾಷೆಯ ವಿಚಾರಕ್ಕೆ ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ತೀವ್ರ ಟೀಕೆ, ಮೂದಲಿಕೆಗೆ ಒಳಗಾಗಿದ್ದಾರೆ. ತೆಲುಗಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ ತಮಗೆ ಕನ್ನಡ ಬರುವುದಿಲ್ಲವೆಂದು ಹೇಳಿದ್ದು ದೊಡ್ಡ ವಿವಾದವಾಗಿ, ರಶ್ಮಿಕಾರನ್ನು ಹಿಗ್ಗಾ-ಮುಗ್ಗಾ ಟ್ರೋಲ್ ಮಾಡಲಾಗಿತ್ತು.
ಆ ನಂತರವೂ ಹಲವು ಕಾರಣಗಳಿಗೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದಾರೆ. ತೀವ್ರ ನಿಂದನೆಗೂ ಒಳಗಾಗಿದ್ದಾರೆ. ಇಷ್ಟೆಲ್ಲ ಆದರೂ ಸೂಕ್ಷ್ಮ ವಿಚಾರವಾದ ಭಾಷೆಯ ಕುರಿತು ಮಾತನಾಡುವಾಗ ಎಚ್ಚರದಿಂದಿರಬೇಕು ಎಂಬ ಪಾಠವನ್ನು ರಶ್ಮಿಕಾ ಕಲಿತಂತಿಲ್ಲ.
ಇತ್ತೀಚಿಗೆ ಹಿಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ, ತಮ್ಮ ಮಾತೃಭಾಷೆ ಕನ್ನಡವನ್ನು ನಿರ್ಲಕ್ಷಿಸಿ ಅನ್ಯ ಭಾಷೆಯನ್ನು ಆಯ್ಕೆ ಮಾಡಿಕೊಂಡರು. ಅಲ್ಲದೆ ತಮ್ಮ ಕನ್ನಡ ಭಾಷೆಯ ಉಚ್ಚಾರದ ಬಗ್ಗೆಯೂ ಮಾತನಾಡಿದರು.

ಕನ್ನಡ ಮಾತನಾಡಿದರೆ ಆಕ್ಸೆಂಟ್ ಇಲ್ಲ ಎನ್ನುತ್ತಾರೆ: ರಶ್ಮಿಕಾ
'ಸೋಷಿಯಲ್ ಮೀಡಿಯಾ ಸ್ಟಾರ್ಸ್ ವಿತ್ ಜನೆಸ್' ಹೆಸರಿನ ಟಾಕ್ ಶೋನಲ್ಲಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಭಾಗವಹಿಸಿದ್ದರು. ರಶ್ಮಿಕಾ ಜೊತೆಗೆ ಖ್ಯಾತ ಕಮಿಡಿಯನ್ ಝಾಕಿರ್ ಖಾನ್ ಸಹ ಇದ್ದರು. ಹಿಂದಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಶ್ಮಿಕಾರ ಭಾಷೆ ಬಗ್ಗೆ ಚರ್ಚೆ ನಡೆಯಿತು. ''ನಿಮ್ಮ ಹಿಂದಿ ಬಗ್ಗೆ ಯಾಕೆ ಜನರಿಗೆ ಅಷ್ಟೋಂದು ಆಸಕ್ತಿ?'' ಎಂದು ನಿರೂಪಕಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ, ''ನಾನು ಕನ್ನಡ ಮಾತನಾಡಿದರೆ ನಿನ್ನದು ಕನ್ನಡ ಆಕ್ಸೆಂಟ್ (ಭಾಷಾ ಶೈಲಿ) ಅಲ್ಲ ಎನ್ನುತ್ತಾರೆ. ತೆಲುಗು ಮಾತನಾಡಿದರೆ ನಿನ್ನದು ತೆಲುಗು ಆಕ್ಸೆಂಟ್ ಅಲ್ಲ ಎನ್ನುತ್ತಾರೆ. ಹಿಂದಿ ಮಾತನಾಡಿದರೆ ನಿನ್ನದು ದಕ್ಷಿಣ ಭಾರತದ ಆಕ್ಸೆಂಟ್ ಇದೆ ಎನ್ನುತ್ತಾರೆ. ಹಾಗಿದ್ದರೆ ನಾನು ಎಲ್ಲಿನವಳು? ನನಗೇ ಗೊಂದಲವಾಗುತ್ತದೆ'' ಎಂದು ನಕ್ಕಿದ್ದಾರೆ ರಶ್ಮಿಕಾ.

ಕನ್ನಡದಲ್ಲಿ ಹೇಳಿಕೊಡಿ ಎಂದರೆ ತೆಲುಗಿನಲ್ಲಿ ಹೇಳಿಕೊಟ್ಟ ರಶ್ಮಿಕಾ
ಇದೇ ಶೋನ ಅಂತ್ಯದಲ್ಲಿ ನಿರೂಪಕಿಯು ರಶ್ಮಿಕಾರನ್ನು ಕುರಿತು, ''ಝಾಕಿರ್ ಖಾನ್ಗೆ 'ಮೇ ತೊ ಪಿಗಲ್ ಗಯಾ' ಅನ್ನು ಕನ್ನಡದಲ್ಲಿ ಹೇಗೆ ಹೇಳುವುದು ಹೇಳಿಕೊಡಿ'' ಎನ್ನುತ್ತಾರೆ. ಅಲ್ಲದೆ ಆಕೆಯೇ ಹೇಳುತ್ತಾರೆ ಕನ್ನಡದಲ್ಲಿ ಹೇಳಿಕೊಡಿ ಎಂದು ಆದರೆ ರಶ್ಮಿಕಾ ಹಿಂದೇಟು ಹಾಕಿದಾಗ ನಿಮಗೆ ಅನುಕೂಲವಾಗುವ ಭಾಷೆಯಲ್ಲಿ ಹೇಳಿಕೊಡಿ ಎನ್ನುತ್ತಾರೆ. ಆಗ ತೆಲುಗು ಆಯ್ಕೆ ಮಾಡಿಕೊಳ್ಳುವ ರಶ್ಮಿಕಾ ಮಂದಣ್ಣ, ''ನೇನು ಕರಿಗಿಪೋಯಾ' ಎಂದು ಹೇಳಿಕೊಟ್ಟಿದ್ದಾರೆ. ಝಾಕಿರ್ ಖಾನ್ ಸಹ ಅದನ್ನು ಕಲಿತು ಪುನರುಚ್ಚರಿಸಿದ್ದಾರೆ.

''ಯಾವುದ್ಯಾವುದೊ ಚಿತ್ರಗಳನ್ನು ಹಂಚಿಕೊಂಡುಬಿಡುತ್ತಾರೆ''
ಇದೇ ಶೋ ನಲ್ಲಿ ರಶ್ಮಿಕಾರ ಕುಟುಂಬದ ಬಗ್ಗೆಯೂ ಮಾತುಕತೆ ನಡೆದಿದ್ದು, ನನ್ನ ತಾಯಿ ನನ್ನ ಟ್ವೀಟ್ಗಳಿಗೆ ರಿಪ್ಲೈ ಮಾಡುತ್ತಾರೆ. ನಾನು ತಾಯಿಗೆ ಹೇಳುತ್ತೇನೆ ಹಾಗೆ ಮಾಡಬೇಡವೆಂದು ಅವರು ಕೇಳುವುದಿಲ್ಲ. ಹುಡುಕಿಕೊಂಡು ಬಂದ ಅಭಿಮಾನಿಗಳನ್ನು ಮನೆಗೆ ಕರೆದು ಬಿಡುತ್ತಾರೆ. ಮನೆಗೆ ಹೋದಾಗ ನನ್ನ ಫೊಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಿಡುತ್ತಾರೆ. ''ಅಮ್ಮ ನಾನು ಹೀರೋಯಿನ್ ಹೀಗೆ ಸಿಕ್ಕ-ಸಿಕ್ಕ ಫೊಟೊಗಳನ್ನು ಹಂಚಿಕೊಳ್ಳಬೇಡ ಎಂದು ಹೇಳಿಕೊಡಬೇಕಾಗುತ್ತದೆ'' ಎಂದಿದ್ದಾರೆ ರಶ್ಮಿಕಾ.

ರಶ್ಮಿಕಾಗೆ ನಟನೆ ಮಾಡಬೇಡ ಎಂದಿದ್ದ ಶಿಕ್ಷಕಿ
ರಶ್ಮಿಕಾ ವಿದ್ಯಾರ್ಥಿಯಾಗಿದ್ದಾಗ ನಾಟಕ ಮಾಡಿದ್ದರಂತೆ ಆ ನಾಟಕ ನೋಡಿ ಅವರ ಶಿಕ್ಷಕಿ ನೀನು ನಟನೆ ಮಾಡಬೇಡ ನೃತ್ಯ ಕಲಿತುಕೊ ಅದರಲ್ಲೇ ಮುಂದುವರಿ ಎಂದಿದ್ದರಂತೆ. ಆದರೆ ರಶ್ಮಿಕಾರ ತಾಯಿಗೆ ಮಗಳು ನಟಿಯೇ ಆಗಬೇಕು ಎಂಬ ಕನಸಿತ್ತಂತೆ. ಮತ್ತೊಂದು ವಿಷಯ ಹಂಚಿಕೊಂಡಿರುವ ರಶ್ಮಿಕಾ, ''ನನಗೆ ಆಡಿಷನ್ಗಳಲ್ಲಿ ಕ್ಯಾಮೆರಾ ಎದುರು ನಟಿಸುವುದು ಬರುವುದಿಲ್ಲ. ಅದೇ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಅಕ್ಕ-ಪಕ್ಕ ಸಹ ನಟರು ಇದ್ದಾಗ ಆರಾಮವಾಗಿ ನಟಿಸುತ್ತೇನೆ ಆದರೆ ಒಬ್ಬಳೇ ಕ್ಯಾಮೆರಾ ಮುಂದೆ ನಿಂತು ಏಕಪಾತ್ರಾಭಿನಯ ಮಾಡಲು ನನಗೆ ಸಾಧ್ಯವೇ ಇಲ್ಲ'' ಎಂದಿದ್ದಾರೆ.

ಬಾಲಿವುಡ್ನಲ್ಲಿ ನೆಲೆ ಊರುವ ಯೋಜನೆಯಲ್ಲಿ ರಶ್ಮಿಕಾ
ರಶ್ಮಿಕಾ ಮಂದಣ್ಣ ಇದೀಗ ಮುಂಬೈಗೆ ಶಿಫ್ಟ್ ಆಗಿದ್ದು ಬಾಲಿವುಡ್ನಲ್ಲಿ ನೆಲೆ ಊರುವ ಯೋಜನೆಯಲ್ಲಿದ್ದಾರೆ. ಈಗ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಇನ್ನಷ್ಟು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದರೊಟ್ಟಿಗೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ, ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











