ಹೊಯ್ಸಳಗೆ ವಿಶ್ ಮಾಡಿ ಅದೇ ದಿನ ರಿಲೀಸ್ ಆಗುತ್ತಿರುವ ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ!
ರಶ್ಮಿಕಾ ಮಂದಣ್ಣ ಇಂದು ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲಿಯೂ ಸಕ್ರಿಯಳಾಗಿ ಕೆಲಸ ಮಾಡುತ್ತಾ ಹೆಸರು ಮಾಡಿರುವ ನಟಿ. ಇಂದು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಅಪಾರವಾದ ಅಭಿಮಾನಿ ಬಳಗವನ್ನು ಗಳಿಸಿ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟದ್ದು ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಮೂಲಕ.
ಆದರೆ ರಶ್ಮಿಕಾ ಮಂದಣ್ಣಗೆ ಇತರೆ ರಾಜ್ಯಗಳಲ್ಲಿ ಇರುವ ಹಾಗೆ ಕರ್ನಾಟಕದಲ್ಲಿ ಅಭಿಮಾನಿಗಳು ಇಲ್ಲ. ಕಾರಣ ಆಕೆ ತಿಳಿದೋ ಅಥವಾ ತಿಳಿಯದೆಯೋ ಕನ್ನಡವನ್ನು ಕಡೆಗಣಿಸುವಂತಹ ಹೇಳಿಕೆಗಳನ್ನು ನೀಡಿದ್ದು ಹಾಗೂ ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಹುಸಿ ಹೇಳಿಕೆ ನೀಡಿದ್ದು. ಹೌದು, ವಿವಿಧ ಸಂದರ್ಶನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರು ತನ್ನ ವಿರುದ್ಧ ತಿರುಗಿ ಬೀಳುವಂತಹ ಹೇಳಿಕೆಗಳನ್ನು ನೀಡಿ ತನ್ನ ಹೆಸರನ್ನು ತಾನೇ ಕೆಡಿಸಿಕೊಂಡರು ಎನ್ನಬಹುದು.

ಹೀಗೆ ಕನ್ನಡ ಟ್ರೋಲಿಗರಿಗೆ ಆಹಾರವಾಗಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಮ್ಮೆ ಅದೇ ರೀತಿಯ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಹೌದು, ಇಂದು ( ಮಾರ್ಚ್ 30 ) ದೇಶದ ವಿವಿಧ ಇಂಡಸ್ಟ್ರಿಗಳ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಕನ್ನಡದ ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಅಮೃತಾ ಐಯ್ಯಂಗಾರ್ ನಟನೆಯ ಹೊಯ್ಸಳ ಮತ್ತು ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಕೀರ್ತಿ ಸುರೇಶ್ ನಟನೆಯ ದಸರಾ ಚಿತ್ರಗಳೂ ಸಹ ಸೇರಿವೆ.
ಈ ಎರಡೂ ಸಿನಿಮಾಗಳೂ ಸಹ ಬಿಗ್ ಬಜೆಟ್ ಸಿನಿಮಾಗಳಾಗಿದ್ದು, ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿರುವಂತಹ ಚಿತ್ರಗಳಾಗಿವೆ. ಇನ್ನು ಈ ಎರಡು ಚಿತ್ರಗಳ ಬಗ್ಗೆ ಪೋಸ್ಟ್ ಹಾಕುವ ಮೂಲಕವೇ ಇದೀಗ ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು, ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ಸ್ಟೋರಿಯಲ್ಲಿ ಹೊಯ್ಸಳ ಚಿತ್ರದ ಪೋಸ್ಟ್ ಒಂದನ್ನು ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಹೊಯ್ಸಳ ಚಿತ್ರ ಯಶಸ್ಸು ಸಾಧಿಸಲಿ, ಡಾಲಿ ಧನಂಜಯ್ ಅವರಿಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಚಿತ್ರದ ನಾಯಕಿ ಅಮೃತಾ ಐಯ್ಯಂಗಾರ್, ನಿರ್ಮಾಪಕರು, ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರನ್ನೂ ಸಹ ರಶ್ಮಿಕಾ ಮಂದಣ್ಣ ಈ ಸ್ಟೋರಿಯಲ್ಲಿ ಉಲ್ಲೇಖಿಸಿದ್ದಾರೆ.

ಇದರ ಬೆನ್ನಲ್ಲೇ ತೆಲುಗು ಸಿನಿಮಾ ದಸರಾದ ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ ಹಾಗೂ ಇಡೀ ದಸರಾ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಸಕ್ಸಸ್ ಸಿಗಲಿ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ನಿಮಗೆಲ್ಲರಿಗೂ ಶುಭ ಕೋರುತ್ತೇನೆ ಎಂದು ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಕಾತರಳಾಗಿದ್ದೇನೆ ಎಂದೂ ಸಹ ಬರೆದುಕೊಂಡಿದ್ದಾರೆ.
ಹೀಗೆ ಕನ್ನಡ ಚಿತ್ರಕ್ಕೆ ವಿಶ್ ಮಾಡಿ ತೆಲುಗು ಸಿನಿಮಾವನ್ನು ನೋಡಲಿದ್ದೇನೆ ಎಂದು ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರಕ್ಕೆ ಶುಭ ಕೋರಿದ್ರೂ ಸಹ ರಶ್ಮಿಕಾ ಮಂದಣ್ಣ ಸದ್ಯ ಟ್ರೋಲ್ ಆಗ್ತಿದ್ದಾರೆ. ತೆಲುಗು ಸಿನಿಮಾ ನೋಡಲು ಇರುವ ಕಾತರತೆ ಕನ್ನಡ ಚಿತ್ರ ನೋಡಲು ಇಲ್ವಾ ಎಂದು ಕಾಲೆಳೆದಿದ್ದಾರೆ.
ಇನ್ನು ಈ ದಿನದಂದು ಕನ್ನಡದ ಹೊಯ್ಸಳ ಹಾಗೂ ತೆಲುಗಿನ ದಸರಾ ಜತೆಗೆ ತಮಿಳಿನ ಪತ್ತು ತಲ ಹಾಗೂ ಹಿಂದಿಯ ಭೋಲಾ ಸಿನಿಮಾಗಳೂ ಸಹ ಬಿಡುಗಡೆಗೊಂಡಿವೆ. ಪತ್ತು ತಲ ಕನ್ನಡದ ಸೂಪರ್ ಹಿಟ್ ಚಿತ್ರ ಮಫ್ತಿ ರಿಮೇಕ್ ಆಗಿದ್ದರೆ, ಭೋಲಾ ತಮಿಳಿನ ಸೂಪರ್ ಹಿಟ್ ಚಿತ್ರ ಖೈದಿಯ ರಿಮೇಕ್ ಆಗಿದೆ.


Click it and Unblock the Notifications











