ಶುಕ್ರವಾರ ತೆರೆಗೆ ‘ರಾಷ್ಟ್ರಗೀತೆ’
ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಕೆ. ಮಂಜು ನಿರ್ಮಿಸಿ, ಕೆ.ವಿ. ರಾಜು ನಿರ್ದೇಶಿಸಿರುವ ದೇಶಪ್ರೇಮದ ಕತೆಯುಳ್ಳ ಚಿತ್ರ 'ರಾಷ್ಟ್ರಗೀತೆ" 23ರ ಶುಕ್ರವಾರ ತೆರೆಕಾಣುತ್ತಿದೆ.
ವಿನೋದ್ ರಾಜ್, ಸಾಯಿಕುಮಾರ್ ಈ ಚಿತ್ರದ ನಾಯಕರು ಎಂದ ಮೇಲೆ ಚಿತ್ರ ಸಾಹಸ ಪ್ರಧಾನವಾದ್ದು ಎಂದು ಮತ್ತೆ ಹೇಳುವ ಅಗತ್ಯ ಇಲ್ಲ. ಮೈಸೂರು, ಬೆಂಗಳೂರು, ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿ, ರಿವೈಸ್ ಕಮಿಟಿ ಮನ್ನಣೆ ಪಡೆದ ಈ ಚಿತ್ರ ಸಾಹಸ ಪ್ರೇಮಿಗಳಿಗೆ ಉತ್ತಮ ಮನರಂಜನೆ ನೀಡುತ್ತದೆ ಎಂಬ ನಿರೀಕ್ಷೆ.
ರಾಕ್ಷಸರ ಅಟ್ಟಹಾಸದ ಜಾತ್ರೆಯಲ್ಲಿ ಕಳೆದುಕೊಂಡ ತನ್ನ ತಮ್ಮ, ಪ್ರೇಯಸಿ, ಸ್ನೇಹಿತರು, ನ್ಯಾಯ, ನೀತಿ, ಧರ್ಮವನ್ನು ಮತ್ತೆ ಹುಡುಕಿ ತರುವ ಪಣ ತೊಟ್ಟ ನಾಯಕ, ಮಂಕಾದ ಮಗನಿಗೆ ಸ್ಫೂರ್ತಿ ತುಂಬುವ ತಾಯಿ, ಸಮಾಜದ ಅವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ, ಈ ಎಲ್ಲದರ ನಡುವೆ ತಂದೆ - ತಾಯಿಯ ಕನಸು ನಿಜ ಮಾಡುವ ಮಗ, ದೇಶಪ್ರೇಮ, ನಿಸ್ವಾರ್ಥ ಪೊಲೀಸ್ ಅಧಿಕಾರಿಯ ದೇಶಸೇವೆ ಇದೇ ಚಿತ್ರದ ಕಥಾವಸ್ತು.
ತಪ್ಪು ಒಪ್ಪುಗಳನ್ನು ಹೊರಗೆಡವಿ, ದೇಶದ ವ್ಯವಸ್ಥೆಯ ಪುನರ್ ಪರಿಶೀಲನೆ, ಪುನರುತ್ಥಾನ ತದನಂತರ ರಾಷ್ಟ್ರಗೀತೆ. ಸಾವಿರಾರು ಸಾಲುಗಳನ್ನು ಹಲವು ಜನ ಬೇರೆ ಬೇರೆಯಾಗಿ ಹಾಡಿದರೆ ಅದು ರಾಷ್ಟ್ರಗೀತೆಯಲ್ಲ. ಆದರೆ, ಒಂದೇ ಸಾಲನ್ನು ಸಾವಿರಾರು ಜನ ಸಮಗ್ರವಾಗಿ ಹಾಡಿದರೆ ಅದಕ್ಕಿಂತ ರಾಷ್ಟ್ರಗೀತೆ ಮತ್ತೊಂದಿಲ್ಲ ಎಂಬ ಸಂದೇಶ.
ಸಾಯಿಕುಮಾರ್, ವಿನೋಜ್ ರಾಜ್ ನಾಯಕತ್ವದ ಈ ಚಿತ್ರದಲ್ಲಿ ಭಾವನಾ, ಸ್ವರ್ಣ, ಮಂಜುಳಾ ಶರ್ಮಾ, ಅವಿನಾಶ್, ಶ್ರೀನಿವಾಸ ಪ್ರಭು, ತಾರಕೇಶ್ ಪಟೇಲ್, ಸಾಧು ಕೋಕಿಲಾ ಅಲ್ಲದೆ ನೂರಾರು ಬಾಲ ಕಲಾವಿದರಿದ್ದಾರೆ.
ಪ್ರದರ್ಶನ: ಸಂತೋಷ್, ಪ್ರಮೋದ್, ನವರಂಗ್, ನಳಂದಾ, ವೆಂಕಟೇಶ್ವರ, ಮೋಹನ್, ಬಾಲಾಜಿ, ಆದರ್ಶ (ದಿನ ಮೂರು ಆಟಗಳು) ಬೆಳಗಿನ ಪ್ರದರ್ಶನ- ಉಮಾ, ಸಂತೋಷ್, ಪ್ರಮೋದ್, ಸ್ವಾಗತ್, ಅಜಂತಾ.


Click it and Unblock the Notifications