"ಎಲ್ಲೋ ತಪ್ಪು ಆಗಿರಬಹುದು, ಬೇಗ ಹೊರಗೆ ಬರಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ": ರತ್ನಕ್ಕ ಭಾವುಕ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 14 ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಸಾಕಷ್ಟು ಜನ ದರ್ಶನ್ ಪರ ಮಾತನಾಡಲು ಆರಂಭಿಸಿದ್ದಾರೆ. ನಾದಬ್ರಹ್ಮ ಹಂಸಲೇಖ, ನಟಿ ಭಾವನಾ ರಾಮಣ್ಣ, ನಿರೂಪಕಿ ಹೇಮಲತಾ ಸೇರಿದಂತೆ ಹಲವರು ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಇದೀಗ ದರ್ಶನ್ಗೆ ತಾಯಿ ಸಮಾನರಾದ ನೀನಾಸಂನ ರತ್ನಕ್ಕ ಪ್ರತಿಕ್ರಿಯಿಸಿದ್ದಾರೆ.
ನಟ ದರ್ಶನ್ ಚಿತ್ರರಂಗಕ್ಕೆ ಬರು ಮುನ್ನ ನೀನಾಸಂನಲ್ಲಿ ನಟನೆಯ ಪಟ್ಟುಗಳನ್ನು ಕಲಿತ್ತಿದ್ದರು. ಅಲ್ಲಿ ರತ್ನಕ್ಕ ಎಂಬುವವರು ಮೆಸ್ ನಡೆಸುತ್ತಿದ್ದರು. ಹಣ ಇಲ್ಲದಿದ್ದರೂ ದರ್ಶನ್ ಸೇರಿದಂತೆ ಹಲವರಿಗೆ ಊಟ ಕೊಡುತ್ತಿದ್ದರು. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಬಿಚ್ಚಿಟ್ಟಿದ್ದರು. ರತ್ನಕ್ಕ ಕೂಡ ಶೋಗೆ ಬಂದು ಆ ದಿನಗಳ ಬಗ್ಗೆ ಮಾತನಾಡಿದ್ದರು. ಆ ಬಳಿಕ ಕೂಡ ಆಗಾಗ್ಗೆ ರತ್ನಕ್ಕನ ಮನೆಗೆ ದರ್ಶನ್ ಹೋಗಿ ಬರುತ್ತಿದ್ದರು. ಅವರು ಕೂಡ ಬೆಂಗಳೂರಿಗೆ ಬಂದು ಭೇಟಿ ಮಾಡುತ್ತಿದ್ದರು

ದರ್ಶನ್ ಬಂಧನ ವಿಚಾರ ತಿಳಿದು ರತ್ನಕ್ಕ ಭಾವುಕರಾಗಿದ್ದಾರೆ. ಅವನಿಯಾನ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ನೆನೆದು ಅತ್ತಿದ್ದಾರೆ. "ಅಂದು ನಟ ದರ್ಶನ್ ಅರೆಸ್ಟ್ ಎನ್ನುವ ಸುದ್ದಿ ಟಿವಿಯಲ್ಲಿ ನೋಡಿದಾಗ ಆಘಾತವಾಗಿತ್ತು. ಇದು ಹೇಗೆ ಸಾಧ್ಯ ಎನಿಸಿತು. ಬಳಿಕ ರೇಣುಕಾಸ್ವಾಮಿ ವಿಚಾರದ ಬಗ್ಗೆ ಗೊತ್ತಾಯಿತು. ಶನಿವಾರ ನಾವು ಫೋನ್ ಮಾಡಿ ಮಾತನಾಡಿದ್ದೆವು. ಗುರುವಾರ ಬೆಂಗಳೂರಿಗೆ ಬರೋಕೆ ಹೇಳಿದ್ದರು. ಅಷ್ಟರಲ್ಲಿ ಅವರ ಬಂಧನ ವಿಚಾರ ಕೇಳಿ ನೋವಾಗಿತ್ತು" ಎಂದಿದ್ದಾರೆ.
"ದರ್ಶನ್ ಇಂತಹ ತಪ್ಪು ಮಾಡಿದ್ದಾರಾ? ಇಲ್ಲ, ಇದನ್ನು ಒಪ್ಪಿಕೊಳ್ಳೊಕೆ ಸಾಧ್ಯವಾಗ್ತಿಲ್ಲ. ಮನಸ್ಸು ಒಪ್ಪುತ್ತಿಲ್ಲ. ಆದರೆ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ನೋಡ್ತಾ ನೋಡ್ತಾ ಹೋದಾಗ ಎಲ್ಲೋ ತಪ್ಪು ಆಗಿರಬಹುದು. ದೇವರಲ್ಲಿ ಪ್ರಾರ್ಥನೆ ಮಾಡುವುದಷ್ಟೆ ನಮ್ಮ ಕೆಲಸ. ಬೇಗ ದರ್ಶನ್ ಜೈಲಿನಿಂದ ಹೊರಗೆ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ" ಎಂದು ಕಣ್ಣೀರಾಗಿದ್ದಾರೆ.
"ಆ ವ್ಯಕ್ತಿಯಿಂದ ನಾನು ಇವತ್ತಿನವರೆಗೆ ಒಂದು ರೂಪಾಯಿ ಸಹಾಯ ಪಡೆದಿಲ್ಲ. ಆದರೆ ರತ್ನಕ್ಕ-ದರ್ಶನ್ ಬಾಂಧವ್ಯಕ್ಕೆ ಬೆಲೆ ಕಟ್ಟೋಕೆ ಆಗಲ್ಲ. ಕಷ್ಟದ ದಿನಗಳನ್ನು ಮೀರಿ ಇಂದು ಬೆಳೆದಿದ್ದಾರೆ. ಆ ದಿನಗಳಲ್ಲಿ ಊಟ ಹಾಕಿದ್ದನ್ನು ನೆನಪಿಟ್ಟುಕೊಂಡು ನಮ್ಮ ಮನೆಗೆ ಹಲವು ಬಾರಿ ಬಂದಿದ್ದಾರೆ. ನಮ್ಮ ಕುಟುಂಬಕ್ಕೂ ಒಳ್ಳೆ ಬಾಂಧವ್ಯಯಿದೆ. ಹಾಗಾಗಿ ದರ್ಶನ್ ಬಗ್ಗೆ ನೆಗೆಟಿವ್ ಬಂದಾಗ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಲ್ಲ"

"ತಪ್ಪು ಯಾರು ಮಾಡಲ್ಲ, ಎಲ್ಲರೂ ಮಾಡ್ತಾರೆ. ಸಮಯ ಕೆಟ್ಟಾಗ ಎಲ್ಲರೂ ತಪ್ಪು ಮಾಡ್ತಾರೆ. ಆ ಕ್ಷಣ ದರ್ಶನ್ ಒಮ್ಮೆ ಯೋಚನೆ ಮಾಡಬೇಕಿತ್ತು. ನಾನು ದರ್ಶನ್ ಪರ ಮಾತಾಡ್ತಿದ್ದೀನಿ ಅಂತ ಅಲ್ಲ. ತಪ್ಪು ತಪ್ಪೇ. ಎದುರುಗಡೆ ಇರುವ ವ್ಯಕ್ತಿ ಏನು ತಪ್ಪು ಮಾಡಿದ್ದಾನೆ ಅಂತ ನೋಡಬೇಕಿತ್ತು. ಆ ವ್ಯಕ್ತಿ ಅಶ್ಲೀಲ ಮೆಸೇಜ್, ಅಶ್ಲೀಲ ಚಿತ್ರ ಕಳಿಸೋದು, ಅದನ್ನು ಮಾಡದೇ ಇದ್ದಿದ್ದರೆ ದರ್ಶನ್ ಈ ಹಂತಕ್ಕೆ ಹೋಗ್ತಿರಲಿಲ್ಲ. ತಪ್ಪು ನಡೆದು ಹೋಗಿದೆ. ಆದರೆ ಯಾವ ಮಟ್ಟದಲ್ಲಿ ಎನ್ನುವುದು ಯಾರಿಗೂ ಗೊತ್ತಿಲ್ಲ. ತನಿಖೆಯಿಂದ ಗೊತ್ತಾಗುತ್ತದೆ"
"ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ದರ್ಶನ್ ಆರೋಪಿ, ಅಪರಾಧಿ ಅಲ್ಲ. ಎಲ್ಲರೂ ಅವರ ಪರ ಇದ್ದಾರೆ. ಫ್ಯಾನ್ಸ್ ಇದ್ದಾರೆ. ದೇವರ ನಿರ್ಣಯ ನೋಡೋಣ. ಬೇಗ ಹೊರಗೆ ಬರಲಿ" ಎಂದು ಹಾರೈಸೋಣ ಎಂದು ರತ್ನಕ್ಕ ಹೇಳಿದ್ದಾರೆ.


Click it and Unblock the Notifications











