'ರತ್ನನ್ ಪ್ರಪಂಚ' ಖ್ಯಾತಿಯ ಪ್ರಮೋದ್ಗೆ ಖುಲಾಯಿಸಿದ ಅದೃಷ್ಟ; ಪ್ರಶಾಂತ್ ನೀಲ್ ಚಿತ್ರಕ್ಕೆ ಆಯ್ಕೆ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕುಮಿ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಂಡ್ಯ ಮೂಲದ ಪ್ರತಿಭೆ ಪ್ರಮೋದ್ ಪಂಜು ನಂತರ ಹಲವು ಧಾರವಾಹಿಗಳಲ್ಲಿ ನಟಿಸಿ ವೀಕ್ಷಕರ ಗಮನ ಸೆಳೆದಿದ್ದರು. ನಂತರ 2015ರಲ್ಲಿ ತೆರೆಕಂಡ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದಲ್ಲಿ ನಟನಾಗಿ ಚಿತ್ರರಂಗಕ್ಕೂ ಕಾಲಿಟ್ಟರು. ಮೊದಲ ಚಿತ್ರದಲ್ಲಿಯೇ ತನ್ನ ಮನೋಜ್ಞ ಅಭಿನಯದ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದ ಪ್ರಮೋದ್ ಪಂಜು ಭರವಸೆಯ ನಟ ಎನಿಸಿಕೊಂಡಿದ್ದರು.
ಹೀಗೆ ಮೊದಲ ಚಿತ್ರದಲ್ಲೇ ನಟನಾಗಿ ಗೆದ್ದಿದ್ದ ಪ್ರಮೋದ್ ಪಂಜು ಪ್ರೀಮಿಯರ್ ಪದ್ಮಿನಿ ಹಾಗೂ ಮತ್ತೆ ಉದ್ಭವ ಚಿತ್ರಗಳಲ್ಲಿ ಅಭಿನಯಿಸಿದ್ದರು ಹಾಗೂ ಇದೇ ನಡುವೆ ಕೆಲ ಧಾರಾವಾಹಿಗಳಲ್ಲೂ ಸಹ ಪ್ರಮೋದ್ ಅಭಿನಯಿಸಿದ್ದರು. ಇನ್ನು ಹೀಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಭಿನಯಿಸುತ್ತಿದ್ದ ಪ್ರಮೋದ್ ಪಂಜು ಅವರ ಸಿನಿ ಜರ್ನಿಗೆ ತುಸು ದೊಡ್ಡ ತಿರುವು ಕೊಟ್ಟದ್ದು ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರ.
ಈ ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಉಡಾಳ್ ಬಾಬು ರಾವ್ ಪಾತ್ರದಲ್ಲಿ ನಟಿಸಿದ್ದ ಪ್ರಮೋದ್ ಪಂಜು ಅಪ್ಪಟ ಉತ್ತರ ಕರ್ನಾಟಕದ ಹೈದನಾಗಿ ಡೈಲಾಗ್ ಹೊಡೆದು ಪ್ರೇಕ್ಷಕರ ಮನಗೆದ್ದಿದ್ದರು. ಪ್ರಮೋದ್ ಪಂಜು ಈ ಚಿತ್ರದಲ್ಲಿ ಮಾಡಿದ್ದ ಅಭಿನಯ ಕಂಡ ಸಿನಿ ರಸಿಕರು ಈತ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಅವಕಾಶ ಪಡೆಯುವುದು ಖಚಿತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಈ ಊಹೆಗಳು ಸದ್ಯಕ್ಕೆ ನಿಜವಾಗುವ ಹಂತದಲ್ಲಿದ್ದು, ಪ್ರಶಾಂತ್ ನೀಲ್ ಚಿತ್ರದಲ್ಲಿ ಪ್ರಮೋದ್ ಪಂಜು ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಸಲಾರ್ ಚಿತ್ರದಲ್ಲಿ ಪ್ರಮೋದ್ ನಟನೆ
ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಸಲಾರ್ನಲ್ಲಿ ಪ್ರಮೋದ್ ಪಂಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಾಗಿ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಪ್ರಮೋದ್ ತಮ್ಮ ಪಾಲಿನ ಚಿತ್ರೀಕರದಲ್ಲೂ ಸಹ ಪಾಲ್ಗೊಂಡಿದ್ದರು ಎಂದು ಸುದ್ದಿಗಳು ಹರಿದಾಡುತ್ತಿವೆ. ಈ ಮೂಲಕ ಪ್ರಶಾಂತ್ ನೀಲ್ ರೀತಿಯ ದೊಡ್ಡ ನಿರ್ದೇಶಕ ಹಾಗೂ ಹೊಂಬಾಳೆ ಫಿಲ್ಮ್ಸ್ ರೀತಿಯ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಡಿಯಲ್ಲಿ ಅಭಿನಯಿಸಲಿರುವ ಪ್ರಮೋದ್ಗೆ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು.

ಸಲಾರ್ ತಾರಾಗಣ
ಇನ್ನು ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ಅಭಿನಯಿಸುತ್ತಿದ್ದರೆ, ನಟಿಯಾಗಿ ಶೃತಿ ಹಾಸನ್ ಆಧ್ಯಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ವರದರಾಜ್ ಮನ್ನಾರ್, ಜಗಪತಿ ಬಾಬು ರಾಜಾ ಮನ್ನಾರ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಮಧು ಗುರುಸ್ವಾಮಿ, ಈಶ್ವರಿ ರಾವ್ ಹಾಗೂ ಶ್ರೀಯಾ ರೆಡ್ಡಿ ಕೂಡ ಚಿತ್ರದಲ್ಲಿದ್ದಾರೆ.

ಮುಂದಿನ ವರ್ಷ ಚಿತ್ರ ತೆರೆಗೆ
ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಸಲಾರ್ ಚಿತ್ರ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಬೇಕಿತ್ತು. ಆದರೆ ನಟ ಪ್ರಭಾಸ್ ರಾಧೆ ಶ್ಯಾಮ್ ಚಿತ್ರದಲ್ಲಿ ಹಾಗೂ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಚಿತ್ರಗಳಲ್ಲಿ ನಿರತರಾಗಿದ್ದ ಕಾರಣ ಈ ಚಿತ್ರದ ಚಿತ್ರೀಕರಣ ವಿಳಂಬವಾಗಿ ಮುಂದಿನ ವರ್ಷದ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿದೆ.


Click it and Unblock the Notifications











