ರವಿ ಬಸ್ರೂರು ತಂಡದ ಮತ್ತೊಂದು ಪ್ರಯತ್ನ: ಜ.19ಕ್ಕೆ ಕರಾವಳಿ ಮೀನುಗಾರರ ಬದುಕಿನ ಕಥೆ 'ಕಡಲ್' ಬಿಡುಗಡೆ
'ಉಗ್ರಂ', 'ಕೆಜಿಎಫ್ ಚಾಪ್ಟರ್ 1 ಮತ್ತು 2', 'ಸಲಾರ್' ಸಿನಿಮಾ ಮ್ಯೂಸಿಕ್ ಕೇಳಿದವರು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಚಂದನವನದ ಖ್ಯಾತ ಸಂಗೀತ ನಿರ್ದೇಶಕರಾಗಿರುವ ರವಿ ಬಸ್ರೂರು ಕನ್ನಡ, ತುಳು, ತೆಲುಗು, ತಮಿಳು, ಹಿಂದಿ ಹೀಗೆ ನಾನಾ ಭಾಷೆಗಳಲ್ಲಿ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಖ್ಯಾತಿ ಗಳಿಸಿದ್ದಾರೆ.
ಇದೀಗ ಸಾಲು ಸಾಲು ಚಿತ್ರಗಳ ಕೈಯಲ್ಲಿ ಹಿಡಿದು ಬ್ಯುಸಿಯಾಗಿರುವ ಇವರು ಬಿಡುವು ಮಾಡಿಕೊಂಡು ಆಗಾಗ ನಿರ್ದೇಶನದ ಕಡೆಗೂ ಗಮನ ನೀಡುತ್ತಿದ್ದಾರೆ. ಇದು ಅವರೊಳಗೊಬ್ಬ ನಿರ್ದೇಶಕನಿದ್ದಾನೆ ಎಂಬುದನ್ನು ಸಾಬೀತು ಪಡಿಸುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಗರ್ ಗರ್ ಮಂಡ್ಲ, ಬಿಲಿಂದರ್, ಕಟಕ, ಗಿರ್ಮಿಟ್ ಸಿನಿಮಾಗಳಿವೆ. ಈಗ ಮತ್ತೊಂದು ಸಿನಿಮಾ 'ಕಡಲ್' ಮೂಲಕ ಸಿನಿ ಪ್ರೇಕ್ಷಕರ ಮುಂದಿ ಬಂದಿದ್ದಾರೆ.

ವರ್ಷಕ್ಕೊಂದು ಸಿನಿಮಾ: ಇದು ರವಿ ಬಸ್ರೂರು ಪಣ
ವರ್ಷಕ್ಕೊಂದು ಸಿನಿಮಾ ಮಾಡಬೇಕು, ಇದರಿಂದ 2000 ಮಂದಿಗೆ ಕೆಲಸ ಕೊಟ್ಟಂತಾಗುತ್ತದೆ ಎಂದು ಪಣತೊಟ್ಟಿರುವ ನಿರ್ದೇಶಕ ರವಿ ಬಸ್ರೂರು ಇದೀಗ ಮತ್ತೊಂದು ಹೊಚ್ಚ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅದುವೇ 'ಕಡಲ್' ಸಿನಿಮಾ. ಇದು ಇವರ ನಿರ್ದೇಶನದ ಐದನೇ ಚಿತ್ರ.
ಸಿನಿಮಾ ನಿರ್ದೇಶನದಲ್ಲೂ ಜನರ ಮೆಚ್ಚುಗೆ ಗಳಿಸಿರುವ ಇವರು ಕಡಲ ನಾಡಿನ ಹುಡುಗ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕರಾವಳಿಯ ಮೀನುಗಾರರ ಬದುಕಿನ ಕಥೆಯನ್ನು ಆಧರಿಸಿದ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಜನವರಿ 19 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ. ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಗೊಂಡಿದೆ.
ರವಿ ಬಸ್ರೂರು ಅವರದ್ದೇ ಯೂಟ್ಯೂಬ್ ಚಾನಲ್ ಆದ ರವಿ ಬಸ್ರೂರು ಮ್ಯೂಸಿಕ್ ಚಾನಲ್ ನಲ್ಲಿ ಜನವರಿ 15 ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಟ್ರೇಲರ್ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೂ ಪಾತ್ರವಾಗಿದೆ. 19 ಗಂಟೆಗಳಲ್ಲಿ 17 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿರುವ ಈ ಟ್ರೇಲರ್ ಕಡಲ ಮೊರೆತದ ನಡುವೆಯೇ ಸಾಗುವುದು ಈ ಸಿನಿಮಾದ ಪ್ಲಸ್ ಪಾಯಿಂಟ್.

'ಬೋಟ್ ಮಿಸ್ ಆಯ್ತು' ಎಂದು ತೆರೆದುಕೊಳ್ಳುವ ಈ ಟ್ರೇಲರ್ ಇದು ಮೀನುಗಾರರ, ಕರಾವಳಿ ಬದುಕು, ಬವಣೆ ಸುತ್ತ ಹೆಣೆದ ಕಥೆ ಎಂಬುದನ್ನು ಅನಾವರಣಗೊಳಿಸುತ್ತವೆ. ಕಡಲನ್ನೇ ನಂಬಿ ಬದುಕುವ ಮಂದಿಯ ನಡುವೆ ಸಾಗುವ ಈ ಸಿನಿಮಾದಲ್ಲಿ ಪ್ರೀತಿ, ಪ್ರೇಮ ದ್ವೇಷದ ಚಹರೆಯ ಹಂದರವೂ ಇದೆ.
ಓಂಕಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಎನ್.ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಚಿನ್ ಬಸ್ರೂರು ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇನ್ನು ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ ಹಾಗೂ ಸಂಕಲನಕಾರರಾಗಿ ಹೊಣೆ ಹೊತ್ತಿದ್ದಾರೆ ರವಿ ಬಸ್ರೂರು.
'ಕಡಲ್' ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಸೌರಭ ಭಂಡಾರಿ, ಸೂಚನ್ ಶೆಟ್ಟಿ ಹಾಗೂ ನಾಯಕಿಯಾಗಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದು, ಭಾಸ್ಕರ್ ಬಸ್ರೂರು, ನಾಗೇಂದ್ರ ಕೋಟೆ, ಸುಜಾತ ಅಂದ್ರದೆ, ವಿಜಯ್ ಬಸ್ರೂರು ಸೇರಿದಂತೆ ಹಲವರ ತಾರಾಗಣವಿದೆ.


Click it and Unblock the Notifications











