ಸಿನಿಮಾ ಮಂದಿ v/s ರವಿ ಬೆಳಗೆರೆ: ಹಲವು ವಿವಾದಗಳು
ಖ್ಯಾತ ಪತ್ರಕರ್ತ, ಕಾದಂಬರಿಕಾರ, ಅಂಕಣಕಾರ, ನಟ ರವಿ ಬೆಳಗೆರೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ರವಿ ಬೆಳಗೆರೆಯನ್ನು ಕೆಲವರು ಅತಿಯಾಗಿ ಪ್ರೀತಿಸಿದರೆ ಕೆಲವರು ಅತಿಯಾಗಿ ದ್ವೇಷಿಸುತ್ತಾರೆ. ಬೆಳಗೆರೆ ಬದುಕಿದ್ದಿದ್ದುದು ಹಾಗೆಯೇ ಕೆಲವರಿಗೆ ವಿಲನ್, ಕೆಲವರಿಗೆ ಹೀರೊ. ಸಿನಿಮಾ ಜಗತ್ತಿನ ಹಲವರಿಗೆ ಬೆಳಗೆರೆ ಬಹುತೇಕ ವಿಲನ್ ಆಗಿಯೇ ಇದ್ದರು.
ಹೌದು, ಹಲವು ಮಂದಿ ಸಿನಿಮಾ ನಟ-ನಟಿಯರಿಗೆ ಬೆಳಗೆರೆ ಕಂಡರೆ ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಹಾಯ್ ಬೆಂಗಳೂರು ಪತ್ರಿಕೆ. ಪತ್ರಿಕೆಯಲ್ಲಿ ಹಲವು ನಟ-ನಟಿಯರ ಬಗ್ಗೆ ಋಣಾತ್ಮಕ ವರದಿಗಳನ್ನು ಪ್ರಕಟಿಸಿದ್ದರು ಬೆಳಗೆರೆ. ಕೆಲವರ ಬಗ್ಗೆ ಹೊಗಳಿ ಬರೆದದ್ದೂ ಇದೆ.

ದುನಿಯಾ ವಿಜಯ್-ರವಿ ಬೆಳಗೆರೆ ವಾಗ್ಯುದ್ಧ
ದುನಿಯಾ ವಿಜಯ್ ಹಾಗೂ ರವಿ ಬೆಳಗೆರೆ ನಡುವೆ ಜಗಳ ಬೀದಿ ರಂಪವಾಗಿ ಪರಿಣಮಿಸಿತ್ತು. ದುನಿಯಾ ವಿಜಯ್, ಮಾಧ್ಯಮಗಳಲ್ಲಿ ಕೂತು ರವಿ ಬೆಳಗೆರೆ ಅವರಿಗೆ ಏಕವಚನದಲ್ಲಿ ಮಾತನಾಡಿದ್ದರು. ರವಿ ಬೆಳಗೆರೆ ಸಹ ದುನಿಯಾ ವಿಜಯ್ ಬಗ್ಗೆ ಮಾತನಾಡಿದ್ದರು.

ಇಬ್ಬರ ನಡುವೆ ವೈಷಮ್ಯ
ಭೀಮಾ ತೀರದಲ್ಲಿ ಸಿನಿಮಾ, ದುನಿಯಾ ವಿಜಯ್ ಮದುವೆ, ಪ್ರೀತಿ ಇತರ ವಿಷಯಗಳ ಬಗ್ಗೆ ರವಿ ಬೆಳಗೆರೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ವೈಷಮ್ಯ ಏರ್ಪಟ್ಟಿತ್ತು. ಅದು ಹಾಗೆಯೇ ಮುಂದುವರೆದಿತ್ತು.

ದರ್ಶನ್ ಹಾಗೂ ರವಿ ಬೆಳಗೆರೆ
ನಟ ದರ್ಶನ್ ಹಾಗೂ ರವಿ ಬೆಳಗೆರೆ ನಡುವೆಯೂ ಇಂಥಹುದೇ ಜಗಳಗಳಾಗಿದ್ದವು. ದರ್ಶನ್ ಹಾಗೂ ವಿಜಯಲಕ್ಷ್ಮಿ ವಿವಾದ ನಡೆದಾಗ ಹಾಯ್ ಬೆಂಗಳೂರಲ್ಲಿ ಪ್ರಕಟವಾಗಿದ್ದ ಲೇಖನದ ಬಗ್ಗೆ ದರ್ಶನ್ ಸಿಟ್ಟಾಗಿದ್ದರು. ಆ ನಂತರ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ರವಿ ಬೆಳಗೆರೆ ಬಗ್ಗೆ ಆಕ್ರೋಶ ಹೊರಹಾಕಿದ್ದರು ನಟ ದರ್ಶನ್.

ನಟಿ ಶ್ರುತಿ ವಿವಾದ
ನಟಿ ಶ್ರುತಿ ವಿವಾದವೂ ಸಹ ಮಾಧ್ಯಮಗಳಲ್ಲಿ ಗಮನ ಸೆಳೆದಿತ್ತು. ನಟಿ ಶ್ರುತಿ ಬಗ್ಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬಂದಾಗ, 'ಬೆಳಗೆರೆ ಹಣ ಕೇಳಿದ್ದರು, ಕೊಡದೇ ಇದ್ದಿದ್ದಕ್ಕೆ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ' ಎಂದು ಆರೋಪಿಸಿದ್ದರು ಶ್ರುತಿ.
Recommended Video

ರಾಜ್ ಲೀಲಾ ವಿನೋದ ಪುಸ್ತಕ
'ರಾಜ್ ಲೀಲಾ ವಿನೋದ' ಪುಸ್ತಕ ಹೊರತಂದಿದ್ದ ರವಿ ಬೆಳಗೆರೆ ವಿರುದ್ಧ ಡಾ.ರಾಜ್ಕುಮಾರ್ ಅಭಿಮಾನಿಗಳು ಅತೀವ ಸಿಟ್ಟಾಗಿದ್ದರು. ಹಲವು ವಿರೋಧಗಳ ನಡುವೆಯೂ ರವಿ ಬೆಳಗೆರೆ ಪುಸ್ತಕವನ್ನು ಹೊರತಂದರು. ಪುಸ್ತಕವು ಸಹ ಬಿಸಿ ದೋಸೆಯಂತೆ ಬಿಕರಿಯಾಯಿತು.


Click it and Unblock the Notifications











