'ಕನಸುಗಾರ'ನ ಸ್ಟೈಲ್ ನಲ್ಲೇ ಮಗಳ ಮದುವೆ: ಇದು ಮದುವೆನಾ, ಸಿನಿಮಾನಾ?
ಕನ್ನಡದ ರಿಯಲ್ ಶೋ ಮ್ಯಾನ್, ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ಮದುವೆ ಇದೇ ತಿಂಗಳು 28 ಮತ್ತು 29ರಂದು ಅರಮನೆ ಮೈದಾನದಲ್ಲಿರುವ ತ್ರಿಪೂರವಾಸಿನಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಈಗಾಗಲೇ ಬಂಧು-ಮಿತ್ರರಿಗೆ, ಸಿನಿಮಾ ಜಗತ್ತಿನ ಆತ್ಮೀಯರಿಗೆ, ಸ್ಯಾಂಡಲ್ ವುಡ್ ಕಲಾವಿದರಿಗೆ, ಚಿರಂಜೀವಿ, ಅಮಿತಾಬ್ ಬಚ್ಚನ್, ರಜಿನಿಕಾಂತ್ ಸೇರಿದಂತೆ ಪರಭಾಷೆಯ ಕಲಾಬಂಧುಗಳಿಗೆ ಮದುವೆಯ ಆಮಂತ್ರಣ ನೀಡಲಾಗಿದೆ.
ಸಿನಿಮಾಗಳನ್ನೇ ಬಹಳ ವಿಶೇಷವಾಗಿ, ಹೊಸತಾಗಿ ತಲೆಕೆಡಿಸಿಕೊಂಡು ಮಾಡುವ ರವಿಚಂದ್ರನ್ ಇನ್ನು ಮಗಳ ಮದುವೆಗಾಗಿ ಎಷ್ಟೆಲ್ಲಾ ತಲೆ ಓಡಿಸಿರಬಹುದು ಅಲ್ವಾ.! ಹೌದು, ಕನಸುಗಾರನಿಗೆ ಮಗಳ ಮದುವೆ ಹೀಗೆ ಮಾಡಬೇಕು ಎಂಬ ಯೋಚನೆ ಇತ್ತು. ಅದಕ್ಕೆ ತಕ್ಕಂತೆ ಎಲ್ಲ ತಯಾರಿ ನಡೆಯುತ್ತಿದ್ದು, ಇದನ್ನೆಲ್ಲ ಕೇಳಿ ಒಮ್ಮೆ ವಾಹ್ ಎನ್ನಿಸಿದೆ. ನಿನ್ನೆಯಷ್ಟೇ ಮಾಧ್ಯಮದವರನ್ನ ಮನೆಗೆ ಕರೆದು ಮಗಳ ಮದುವೆಗಾಗಿ ಪ್ರೀತಿಯ ಆಹ್ವಾನ ನೀಡಿದ ಕ್ರೇಜಿಸ್ಟಾರ್ ಹಲವು ವಿಷ್ಯಗಳನ್ನ ಹಂಚಿಕೊಂಡರು. ಏನದು? ಮುಂದೆ ಓದಿ....

ಮದುವೆಗಾಗಿ ಗಾಜಿನ ವೇದಿಕೆ
ರವಿಚಂದ್ರನ್ ಅಂದ್ರೇನೆ ಹಾಗೆ. ಏನೇ ಮಾಡಿದ್ರು ವಿಶೇಷ. ಮಗಳ ಅಂದ್ಮೇಲೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದ್ದಾರೆ ಕನಸುಗಾರ. ಹೌದು, ಆರತಕ್ಷತೆಗಾಗಿ ಗಾಜಿನ ವೇದಿಕೆಯನ್ನ ಸಿದ್ಧ ಮಾಡುತ್ತಿದ್ದಾರೆ. ಇದು ಈ ಮದುವೆ ಪ್ರಮುಖ ಆಕರ್ಷಣೆಯಾಗಿರಲಿದೆಯಂತೆ. ಬಹುಶಃ ಮದುವೆ ಆರತಕ್ಷತೆಗಾಗಿ ಗಾಜಿನ ವೇದಿಕೆ ನಿರ್ಮಿಸುತ್ತಿರುವುದು ಕೂಡ ಇದೇ ಮೊದಲು ಎನ್ನಲಾಗಿದೆ.

ರವಿಚಂದ್ರನ್ ಕನಸಿನಂತೆ ವೇದಿಕೆ ನಿರ್ಮಾಣ
ಗಾಜಿನ ವೇದಿಕೆ ಅಂದಾಕ್ಷಣ ಬೇರೆ ಯಾರೋ ವಿನ್ಯಾಸಕರು ಮಾಡಬಹುದು ಅಂದುಕೊಂಡಿದ್ದರೇ ಅದು ತಪ್ಪು. ಯಾಕಂದ್ರೆ, ಮಗಳ ಮದುವೆ ಆಗಿರುವುದರಿಂದ ಪ್ರತಿಯೊಂದನ್ನ ತಾವೇ ಖುದ್ದು ಮಾಡುತ್ತಿದ್ದಾರೆ. ಗಾಜಿನಿ ವೇದಿಕೆಯ ಪೂರ್ಣ ಜವಾಬ್ದಾರಿ ರವಿಚಂದ್ರನ್ ಅವರದ್ದೇ. ಅವರೇ ಡಿಸೈನ್ ಮಾಡಿ ತಯಾರು ಮಾಡಿಸುತ್ತಿದ್ದಾರೆ. ಸುಮಾರು 25 ದಿನದಿಂದ ಸ್ಟೇಜ್ ಸಿದ್ಧ ಮಾಡುತ್ತಿದ್ದಾರಂತೆ. ಈ ಸ್ಟೇಜ್ ನೋಡಿದ್ರೆ ಒಂದು ಕ್ಷಣ ಎಲ್ಲರೂ ಅಂತೆ ನಿಂತಬಿಡಬೇಕು ಎಂಬ ಫೀಲ್ ಬರುತ್ತಂತೆ.

ಕಾಸ್ಟ್ಯೂಮ್ ಡಿಸೈನ್ ಕೂಡ ಕ್ರೇಜಿಸ್ಟಾರ್
ರವಿಚಂದ್ರನ್ ಸಿನಿಮಾಗಳಲ್ಲಿ ಅವರ ಸೆಟ್ ಎಷ್ಟು ಕಲರ್ ಫುಲ್ ಆಗಿರುತ್ತೋ ಅಷ್ಟೇ ಕಲರ್ ಫುಲ್ ಆಗಿ ಮದುವೆ ಮನೆ ಶೃಂಗಾರವಾಗಿರುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಗಳ ಮದುವೆ ಕಾಸ್ಟ್ಯೂಮ್ ಕೂಡ ರವಿಚಂದ್ರನ್ ಅವರೇ ಆಯ್ಕೆ ಮಾಡಿದ್ದಾರಂತೆ. ಮಗಳಿಗಾಗಿ ಗ್ರೀನ್ ಕಲರ್ ಗೌನ್ ಮತ್ತು ಬ್ಲ್ಯಾಕ್ ಕಲರ್ ಗೌನ್ ಮತ್ತು ಬೆಳಗ್ಗೇ ಸೀರೆ ತಯಾರಾಗಿದೆಯಂತೆ. ರವಿಚಂದ್ರನ್ ಆರತಕ್ಷತೆಗೆ ಸೂಟ್ ಮತ್ತು ಮುಹೂರ್ತಕ್ಕೆ ಪಂಚೆ ತೊಡಲಿದ್ದಾರಂತೆ.

ಮಗಳ ಮದುವೆಯಲ್ಲಿ ಹೂವು ಕಾಣಿಸಲ್ಲ
ರವಿಚಂದ್ರನ್ ಸಿನಿಮಾ ಅಥವಾ ರವಿಚಂದ್ರನ್ ಮನೆಯ ಸಂಭ್ರಮ ಅಂದಾಕ್ಷಣ ಅಲ್ಲಿ ಹೂವಿನ ಅಲಂಕಾರ ಎದ್ದು ಕಾಣುತ್ತೆ. ಆದ್ರೆ, ಮಗಳ ಮದುವೆಯಲ್ಲಿ ಹೂವಿನ ಬಳಕೆ ಕಡಿಮೆ ಇರುತ್ತಂತೆ. ಸಾಮಾನ್ಯವಾಗಿ ಮದುವೆ ಆರತಕ್ಷತೆ ವೇದಿಕೆ, ಬಾಗಿಲುಗಳ ಬಳಿ ಹೂವಿನ ಅಲಂಕಾರ ಕಾಣಬಹುದು. ಆದ್ರೆ, ಮಗಳ ಮದುವೆಯಲ್ಲಿ ಎಷ್ಟು ಕಡಿಮೆ ಸಾಧ್ಯವೂ ಅಷ್ಟು ಕಡಿಮೆ ಹೂವು ಬಳಸುವುದು ರವಿಚಂದ್ರನ್ ಅವರ ನಿರ್ಧಾರವಾಗಿದೆ.

ಹಂಸಲೇಖ ಸಂಗೀತ ಕಾರ್ಯಕ್ರಮ
ಮದುವೆ ಅಂದ್ಮೇಲೆ ಮನರಂಜನೆ ಕಾರ್ಯಕ್ರಮವೂ ಇರಬೇಕು ಅಲ್ವಾ. ಅದರ ಜವಾಬ್ದಾರಿ ನಾದಬ್ರಹ್ಮ ಹಂಸಲೇಖ ಅವರದ್ದು. ಸ್ವತಃ ಹಂಸಲೇಖ ಅವರೇ ಈ ಬಗ್ಗೆ ಆಸಕ್ತಿ ತೋರಿದ್ದು, ಸಂಗೀತ ಕಾರ್ಯಕ್ರಮ ನಾನೇ ಕೊಡುತ್ತೇನೆ ಎಂದಿದ್ದಾರಂತೆ. ಇದು ಮದುವೆಯ ಸಂಭ್ರಮವನ್ನ ಮತ್ತಷ್ಟು ಹಚ್ಚಿಸಲಿದೆ.

ಎಲ್ಲರಿಗೂ ಆಹ್ವಾನ
ಸೆಲೆಬ್ರಿಟಿ ಮದುವೆ ಅಂತ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಆಹ್ವಾನ ನೀಡಿಲ್ಲ. ಎಲ್ಲ ಅಭಿಮಾನಿಗಳು ಕೂಡ ಈ ಮದುವೆಯಲ್ಲಿ ಭಾಗಿಯಾಗಬಹುದು. ಅದುವೆ ರವಿಚಂದ್ರನ್ ಆಸೆಯೂ ಕೂಡ. ನಮ್ಮ ಮನೆಯ ಮದುವೆ ಎಂದು ಬನ್ನಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಊಟದ ವ್ಯವಸ್ಥೆಯೂ ಆಗಿದೆಯಂತೆ. ಊಟದ ಮೆನ್ಯೂ ತಿಳಿಸಿಲ್ಲವಾದರೂ ಮದುವೆ ಊಟದ ರೀತಿ ಅದ್ಭುತವಾಗಿ ಇರುತ್ತೆ ಎಂದಷ್ಟೇ ಹೇಳಿದರು.

3ಡಿ ಆಮಂತ್ರಣ ಪತ್ರಿಕೆ ಮೊದಲ ಸಲ
ಇದೇ ಮೊದಲ ಮದುವೆ ಆಮಂತ್ರಣ ಪತ್ರಿಕೆಯಲ್ಲೂ 3ಡಿ ವ್ಯವಸ್ಥೆಯನ್ನ ರವಿಚಂದ್ರನ್ ಪರಿಚಯಿಸಿದ್ದಾರೆ. ರವಿಚಂದ್ರನ್ ಅವರ ಆತ್ಮೀಯ ಶ್ರೀಪಾದ್ ಅವರು ಈ ಪತ್ರಿಕೆ ಡಿಸೈನ್ ಮಾಡಿದ್ದು, ಸುಮಾರು 2000 ಪತ್ರಿಕೆ ಹಂಚಿದ್ದಾರಂತೆ.

ಹಣಕ್ಕಿಂತ ತಲೆ ಖರ್ಚು ಮಾಡಿದ್ದೇನೆ
ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿರುವ ರವಿಚಂದ್ರನ್ ಮಗಳ ಮದುವೆಗೆ ಎಷ್ಟು ಖರ್ಚು ಆಗುತ್ತಿರಬಹುದು ಎಂಬ ಕುತೂಹಲ ಕಾಡುವುದು ಸಹಜ. ಈ ಬಗ್ಗೆ ಮಾತನಾಡಿದ ಕ್ರೇಜಿಸ್ಟಾರ್ ''ನನ್ನ ಮಗಳ ಮದುವೆಗಾಗಿ ನಾನು ಹಣ ಖರ್ಚು ಮಾಡುವುದಕ್ಕಿಂತ ನನ್ನ ತಲೆ ಖರ್ಚು ಮಾಡುತ್ತಿದ್ದೇನೆ. ಈ ಮದುವೆ ಅದ್ಧೂರಿಗಿಂತ ಅದ್ಭುತವಾಗಿರುತ್ತೆ'' ಎಂದು ಮನದಾಳ ಹಂಚಿಕೊಂಡರು.


Click it and Unblock the Notifications











