"ನಾನು ಲೀಡರ್ ಆಗಲ್ಲ..ಶಿವಣ್ಣನೇ ಲೀಡರ್.. ದೊಡ್ಮನೆಯೇ ಹೆಡ್ ಆಫೀಸ್": ನಿರ್ಮಾಪಕರಿಗೆ ಖಡಕ್ ಸಂದೇಶ
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂ ಎನ್ ಕುಮಾರ್ ವಿಚಾರವೇ ಸಾಕಷ್ಟು ಸದ್ದು ಮಾಡ್ತಾ ಇದೆ. ನಾನು ಹಣ ಕೊಟ್ಟಿದ್ದೆ ಆದರೆ, ಸುದೀಪ್ ಡೇಟ್ಸ್ ಕೊಡಲಿಲ್ಲ ಅಂತ ಕುಮಾರ್ ಹೇಳಿದ್ರೆ, ಕಿಚ್ಚ ಸುದೀಪ್ ಎಲ್ಲವೂ ನ್ಯಾಯಾಲಯದಲ್ಲಿಯೇ ತೀರ್ಮಾನ ಆಗಲಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಿಚ್ಚ ಮಾನನಷ್ಟ ಮೊಕದ್ದಮೆ ಹಾಕಿದ್ದೆ ತಡ ನಿನ್ನೆಯಿಂದ ನಿರ್ಮಾಪಕ ಕುಮಾರ್ ಫಿಲ್ಮ್ ಚೇಂಬರ್ ಮುಂದೆ ಧರಣಿ ಕೂತಿದ್ದಾರೆ. ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾರೆ. ಇಂದು (ಜುಲೈ 18) ನಿರ್ಮಾಪಕ ಕುಮಾರ್ಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಯೋಗೀಶ್ ದ್ವಾರಕೀಶ್ ಕೂಡ ಸಾಥ್ ನೀಡಿದ್ರು. ಇವೆಲ್ಲವನ್ನೂ ಗಮನಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಕರೆದು ಮಾತಾಡಿದ್ದಾರೆ.

ಧರಣಿ ಕೂತಿದ್ದವರಿಗೆ ರವಿಚಂದ್ರನ್ ಆಹ್ವಾನ
ನಿರ್ಮಾಪಕ ಎಂ ಎನ್ ಕುಮಾರ್ ಫಿಲ್ಮ್ ಚೇಂಬರ್ ಮುಂದೆ ನ್ಯಾಯಕ್ಕಾಗಿ ಧರಣಿ ಕೂತಿದ್ದರು. ಈ ಸಮಸ್ಯೆಗೆ ರವಿಚಂದ್ರನ್ ಅಥವಾ ಶಿವಣ್ಣ ಎಂಟ್ರಿ ಕೊಟ್ಟು ಸಮಸ್ಯೆ ಬಗೆಹರಿಸಬೇಕು ಅನ್ನೋದೇ ಎಲ್ಲರ ಮನವಿಯಾಗಿತ್ತು. ಇಂದು (ಜುಲೈ 18) ಕೂಡ ಧರಣಿ ಮುಂದುವರೆಯುತ್ತಿದ್ದಂತೆ ಸ್ವತಃ ರವಿಚಂದ್ರನ್ ಅವರೇ ಆಹ್ವಾನ ನೀಡಿದ್ದರು. ಧರಣಿಯ ನಡುವೆಯೇ ಈ ವಿಚಾರ ತಿಳಿದು ನಿರ್ಮಾಪಕರಾದ ಸುರೇಶ್, ಪ್ರವೀಣ್ ಕುಮಾರ್, ಎ ಗಣೇಶ್, ಎಂ ಜಿ ರಾಮಮೂರ್ತಿ ಸೇರಿದಂತೆ ಹಲವರು ರವಿಚಂದ್ರನ್ ಅವರನ್ನು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಭೇಟಿ ಮಾಡಿದ್ರು.
ಕ್ರೇಜಿಸ್ಟಾರ್ ಜೊತೆಗೆ ನಡೆದ ಸಭೆ
ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ರವಿಚಂದ್ರನ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಅಲ್ಲಿಗೆ ನಿರ್ಮಾಪಕರನ್ನು ಕರೆಸಿದ್ದರು. ರವಿಚಂದ್ರನ್ ಅವರನ್ನು ಭೇಟಿ ಮಾಡಿದ ನಿರ್ಮಾಪಕರು, ಕೆಲ ಕಾಲ ಚರ್ಚೆ ನಡೆಸಿದರು. ರವಿಚಂದ್ರನ್ ಮತ್ತು ನಿರ್ಮಾಪಕರ ನಡುವೆ ಸಂಧಾನ ಸಭೆ ಒಂದು ಹಂತಕ್ಕೆ ಸಕ್ಸಸ್ ಆಗಿರುವ ಲಕ್ಷಣಗಳು ಕಂಡು ಬಂದಿದೆ. ಸಭೆ ಮುಗಿದ ಬಳಿಕ ರವಿಚಂದ್ರನ್ ಕೂಡ ನಗುತ್ತಲೇ ಮುಂದೆ ಬಂದರು. ಚಾಕಲೇಟ್ ತಿನ್ನಿ ಮೊದಲು ಎಂದಾಗಲೇ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಹೆಚ್ಚಾಗಿದೆ.
ಸುದೀಪ್ಗೆ ತುಂಬಾನೇ ನೋವಾಗಿದೆ
ಎಲ್ಲಾ ಮುಗಿದ ಬಳಿಕ ಮಾತನಾಡಿದ ರವಿಚಂದ್ರನ್, "ಪರಿಸ್ಥಿತಿ ಸರಿ ಇಲ್ಲದೆ ಇದ್ರೆ ಮನಸ್ಥಿತಿ ಸರಿ ಇರಲ್ಲ. ಸುದೀಪ್ ಗೆ ಹರ್ಟ್ ಆಗಿದೆ ಅನ್ನೋದಂತು ಗೊತ್ತು. ಎಷ್ಟು ಹರ್ಟ್ ಆಗಿದೆ ಗೊತ್ತಿಲ್ಲ. ಎಲ್ಲರೂ ಪರಿಚಯದವರು. ನಮ್ಮ ಮನೆಯವರೇ. ಎಲ್ಲಾ ಒಂದು ಸೆಕೆಂಡ್ ಕೂಲ್ ಆಗ್ಬೇಕು. ನಾನು ಎಲ್ಲಾ ದಾಖಲೆಯನ್ನು ಪರಿಶೀಲಿಸುತ್ತೇನೆ. ಆಮೇಲೆ ಸುದೀಪ್ಗೆ ಮಾತಾಡಬೇಕಾ? ಬೇಡವಾ ಅಂತ ತೀರ್ಮಾನ ಮಾಡುತ್ತೇವೆ." ಎಂದು ರವಿಚಂದ್ರನ್ ನಿರ್ಮಾಪಕರಿಗೆ ಹೇಳಿದ್ದಾರೆ.

"ನಾನಂತೂ ಲೀಡರ್ ಆಗಲ್ಲ"
"ನಾನಂತು ಲೀಡರ್ ಆಗಲ್ಲ. ನಂದೇ ಆದಂತ ಕ್ಯಾರೆಕ್ಟರ್ ಇದೆ. ನಾನು ಲೀಡರ್ ಆದ್ರೆ ಎಲ್ಲರಿಗೂ ಮೊದಲು ವಿಲನ್ ಆಗ್ತೀನಿ. ಅಸೋಸಿಯೇಷನ್ ಹೇಗೆ ನಡೆಯಬೇಕು ಅನ್ನೋದಕ್ಕೆ ಬುಕ್ ಕೊಟ್ಟಿದ್ದೆ. ಆದರೆ, ಅದನ್ನ ಯಾರು ತಿರುಗಿ ನೋಡಿಲ್ಲ. ಸುದೀಪ್ ಮತ್ತು ಕುಮಾರ್ 20 ವರ್ಷದಿಂದ ಸ್ನೇಹಿತರಾಗಿದ್ದವರು. ಜೊತೆಗೆ ಕೂತು ಊಟ ಮಾಡಿದವರು. ಸಡನ್ ಆಗಿ ಬೆರಳು ತೋರಿಸಿದ್ರೆ ಹೇಗೆ? ಎರಡು ಕಡೆ ಸಹನೆ ಮೀರಿದೆ. ಧರಣಿ ಕುಳಿತವರು ಎದ್ದೇಳಬೇಕು ಆಮೇಲೆ ನಾನು ನಿರ್ಧಾರ ಮಾಡ್ತೀನಿ" ಎಂದಿದ್ದಾರೆ.
ಶಿವಣ್ಣನೇ ಲೀಡರ್.. ಅಣ್ಣಾವ್ರ ಮನೆಯೇ ಹೆಡ್ ಆಫೀಸ್
ಇಂಡಸ್ಟ್ರಿಗೆ ಶಿವಣ್ಣನೇ ಮೊದಲು. ಕರ್ನಾಟಕಕ್ಕೆ ರಾಜ್ಕುಮಾರ್ ಫ್ಯಾಮಿಲಿಯೇ ಮೊದಲು. ಅದೊಂಥರ ಹೆಡ್ ಆಫೀಸ್ ಇದ್ದಂಗೆ. ನಾನೇ ಹೇಳಿದ್ದೀನಿ. ಅಲ್ಲಿ ಹೋಗಿ ಬಳಿಕ ಇಲ್ಲಿಗೆ ಬನ್ನಿ ಅಂತ ಹೇಳಿದ್ದೀನಿ ಎಂದಿದ್ದಾರೆ. ಅಂದು ಶಿವಣ್ಣ ಅವರ ಹುಟ್ಟುಹಬ್ಬದ ದಿನವೂ ಈ ವಿಚಾರ ಚರ್ಚೆಗೆ ಬಂದಿತ್ತು. ಆಗ ಶಿವಣ್ಣ ಕೂಡ ಹೇಳಿದ್ದರು. ಮನೆಯಲ್ಲಿ ಈ ಬಗ್ಗೆ ಚರ್ಚೆಯಾವುತ್ತಿದೆ ಎಂದು. ಹೀಗಾಗಿ ಶಿವಣ್ಣ ಮತ್ತು ರವಿಚಂದ್ರನ್ ನಿಂತು ಈ ಸಮಸ್ಯೆ ಬಗೆಹರಿಸುತ್ತಾರಾ ನೋಡಬೇಕಿದೆ.


Click it and Unblock the Notifications











