ಕ್ರೇಜಿಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಳ್ಳದ್ದಕ್ಕೆ ಅಭಿಮಾನಿಗಳಿಗೆ ನಿರಾಸೆ: ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್
ಕನಸುಗಾರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಕ್ರೇಜಿಸ್ಟಾರ್ ಹುಟ್ಟುಹಬ್ಬ ಆಚರಿಸಲು ಅವರ ನಿವಾಸದ ಬಳಿ ಜಮಾಯಿಸಿದ್ದ ಅಭಿಮಾನಿಗಳಿಗೆ ಇಂದು ನಿರಾಸೆ ಕಾದಿತ್ತು. ಇನ್ನು ರವಿಚಂದ್ರನ್ ನಟಿಸುತ್ತಿರುವ 'ದ ಜಡ್ಜ್ ಮೆಂಟ್' ಹಾಗೂ 'ಕೆಡಿ' ಚಿತ್ರತಂಡಗಳಿಂದ ಸ್ಪೆಷಲ್ ಪೋಸ್ಟರ್ ಗಿಫ್ಟ್ ಸಿಕ್ಕಿದೆ. ಎರಡು ಪೋಸ್ಟರ್ಗಳು ಸಖತ್ ವೈರಲ್ ಆಗ್ತಿವೆ.
ಇತ್ತೀಚಿನ ದಿನಗಳಲ್ಲಿ ಕನಸುಗಾರನ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯಕ್ಕೆ ತಮ್ಮ ನಿರ್ದೇಶನದಲ್ಲಿ ರವಿಚಂದ್ರನ್ ಯಾವುದೇ ಸಿನಿಮಾ ಘೋಷಿಸಿಲ್ಲ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 'ರವಿ ಬೋಪಣ್ಣ' ಸಿನಿಮಾ ನಿರಾಸೆ ಮೂಡಿಸಿತ್ತು. ಹೀರೊ ಆಗಿ ಮಾತ್ರವಲ್ಲದೇ ಪೋಷಕ ಪಾತ್ರಗಳಲ್ಲೂ ರವಿಚಂದ್ರನ್ ಹೆಚ್ಚು ನಟಿಸುತ್ತಿದ್ದಾರೆ. ಇತ್ತೀಚೆಗೆ 'ಹೆಡ್ಬುಷ್', 'ವಿಜಯಾನಂದ', 'ಕ್ರಾಂತಿ' ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

ಸದ್ಯ 'ದ ಜಡ್ಜ್ ಮೆಂಟ್' ಹಾಗೂ 'ಕೆಡಿ' ಎನ್ನುವ 2 ಸಿನಿಮಾಗಳಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ರವಿಚಂದ್ರನ್ ಹುಟ್ಟುಹಬ್ಬಕ್ಕೆ ಎರಡು ಚಿತ್ರತಂಡಗಳು ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿವೆ. 'ದ ಜಡ್ಜ್ ಮೆಂಟ್' ಚಿತ್ರಕ್ಕೆ ಗುರುರಾಜ ಕುಲಕರ್ಣಿ(ನಾಡಗೌಡ) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಡೀ ಚಿತ್ರತಂಡವನ್ನು ತಮ್ಮ ವಿಶೇಷ ಶೈಲಿ ಮಾತಲ್ಲಿ ಲವಲವಿಕೆಯಿಂದ ಇಟ್ಟು, ಉತ್ಸಾಹ ತುಂಬುವ ರವಿಚಂದ್ರನ್ ರವರಿಗೆ ನಿರ್ಮಾಪಕರು ವಿಶೇಷ ಧನ್ಯವಾದ ಹೇಳಿದ್ದಾರೆ.
ವಕೀಲನಾಗಿ ರವಿಚಂದ್ರನ್
'ದ ಜಡ್ಜ್ ಮೆಂಟ್' ಚಿತ್ರದಲ್ಲಿ ರವಿಚಂದ್ರನ್ ವಕೀಲನ ಪಾತ್ರದಲ್ಲಿ ನಟಿಸ್ತಿರೋದು ಗೊತ್ತಾಗುತ್ತಿದೆ. ಕ್ರೇಜಿಸ್ಟಾರ್ ಜೊತೆಗೆ ದಿಗಂತ ಮಂಚಾಲೆ, ಮೇಘನಾ ಗಾವಂಕರ, ಧನ್ಯಾ ರಾಮಕುಮಾರ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ ಬೆಳವಾಡಿ, ಕೃಷ್ಣಾ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ಸುಜಯ ಶಾಸ್ತ್ರೀ, ರೂಪಾ ರಾಯಪ್ಪ,ರವಿಶಂಕರ ಗೌಡ ನಟಿಸುತ್ತಿದ್ದಾರೆ. ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸಿಳೀನ್ ಸಂಗೀತ ಚಿತ್ರಕ್ಕಿದೆ.

'ಕೆಡಿ' ತಂಡದಿಂದ ಪೋಸ್ಟರ್ ಗಿಫ್ಟ್
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದ್ದು ಅಣ್ಣಯ್ಯಪ್ಪ ಎನ್ನುವ ಪಾತ್ರದಲ್ಲಿ ಕ್ರೇಜಿಸ್ಟಾರ್ ಮಿಂಚಲಿದ್ದಾರೆ. ಕಪ್ಪು ಬ್ಲೇಜರ್, ಉದ್ದ ಕೂದಲು, ಕೂಲಿಂಗ್ ಗ್ಲಾಸ್, ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಖಡಕ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. ಈ ಪಾತ್ರದ ಬಗ್ಗೆಯೂ ಭಾರೀ ಕುತೂಹಲ ಇದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಅಭಿಮಾನಿಗಳಿಗೆ ನಿರಾಸೆ
ರವಿಚಂದ್ರನ್ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲಿಲ್ಲ. ಬೆಳಗ್ಗೆಯಿಂದಲೇ ಅಭಿಮಾನಿಗಳು ರಾರಾಜಿ ನಗರದ ಕ್ರೇಜಿಸ್ಟಾರ್ ನಿವಾಸದ ಮುಂದೆ ಜಮಾಯಿಸಿ ಹುಟ್ಟುಹಬ್ಬ ಕೋರಲು ಪ್ರಯತ್ನಿಸಿದರು. ಆದರೆ ಕ್ರೇಜಿಸ್ಟಾರ್ ಮನೆಯಲ್ಲಿ ಇರಲಿಲ್ಲ. ಶೂಟಿಂಗ್ ಕಾರಣ ಹೊರಗಡೆ ಇದ್ದರು. ಹಾಗಾಗಿ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿತ್ತು. ನೆಚ್ಚಿನ ನಟನನ್ನು ನೋಡಬೇಕು, ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯಕ ಕೋರಬೇಕು ಎನ್ನುವ ಆಸೆ ಈಡೇರಲಿಲ್ಲ.

ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ
'ರವಿ ಬೋಪಣ್ಣ' ನಂತರ ತಮ್ಮ ನಿರ್ದೇಶನ, ನಟನೆಯ ಸಿನಿಮಾವನ್ನು ರವಿಚಂದ್ರನ್ ಘೋಷಿಸಿಲ್ಲ. ಅಂತಾದೊಂದು ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. "ಇಷ್ಟು ದಿನ ನನಗಾಗಿ ಸಿನಿಮಾ ಮಾಡಿದೆ. ಇನ್ನು ಮುಂದೆ ನಿಮಗಾಗಿ ಸಿನಿಮಾ ಮಾಡ್ತೀನಿ. ಪ್ರೇಕ್ಷಕರು ಮತ್ತೆ ಥಿಯೇಟರ್ಗೆ ನುಗ್ಗಿ ಬಂದು ನೋಡುವಂತಹ ಸಿನಿಮಾ ಮಾಡ್ತೀನಿ" ಎಂದು ಇತ್ತೀಚೆಗೆ ಹೇಳಿದ್ದರು.


Click it and Unblock the Notifications











