ಅಪ್ಪುಗೆ ಬೆಂಗಳೂರು ತಂಡಗಳ ನಮನ; ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ ಎಂದ ಆರ್ಸಿಬಿ

ಸರಿಯಾಗಿ ವರ್ಷದ ಹಿಂದೆ ಈ ದಿನ ( ಅಕ್ಟೋಬರ್ 29 ) ಈ ಸಮಯಕ್ಕೆ ಪ್ರತಿಯೊಬ್ಬ ಕನ್ನಡಿಗನೂ ಸಹ ಎಂದಿನಂತೆ ತನ್ನ ದಿನವನ್ನು ದೂಡಲಾಗುತ್ತಿರಲಿಲ್ಲ. ಕಾರಣ ಕನ್ನಡ ಚಿತ್ರರಂಗದ ಫ್ಯಾಮಿಲಿ ಪ್ರೇಕ್ಷಕರ ಡಾರ್ಲಿಂಗ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕಿವಿಗೆ ಬಡಿದು ಎದೆಗೆ ನೋವುಂಟು ಮಾಡಿತ್ತು.
ಕಳೆದ ವರ್ಷ ಬೆಳಗ್ಗೆ ಚೆನ್ನಾಗಿಯೇ ಜಿಮ್ ವರ್ಕ್ ಔಟ್ ಮುಗಿಸಿದ್ದ ಪುನೀತ್ ರಾಜ್ಕುಮಾರ್ ಇದ್ದಕ್ಕಿದ್ದಂತೆ ಸುಸ್ತಿನ ಅನುಭವವಾಗಿ ಎದೆ ನೋವು ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ದಾವಿಸಿದ್ದರು. ಆದರೆ ವಿಕ್ರಮ್ ಆಸ್ಪತ್ರೆ ತಲುಪುವ ಮುನ್ನವೇ ಪುನೀತ್ ರಾಜ್ಕುಮಾರ್ ತಮ್ಮ ಅಪಾರ ಅಭಿಮಾನಿ ಬಳಗ ಹಾಗೂ ಪ್ರೀತಿಯ ಕುಟುಂಬವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.
ಹೀಗೆ ಅಪ್ಪು ದೂರಾಗಿ ವರ್ಷ ಕಳೆದಿದ್ದು, ಪುಣ್ಯಸ್ಮರಣೆಯಂದು ರಾಜಕೀಯ ವ್ಯಕ್ತಿಗಳು, ಸಿನಿಮಾ ಕಲಾವಿದರು, ಕ್ರೀಡಾ ಪಟುಗಳು ಸೇರಿದಂತೆ ಹಲವು ಕ್ಷೇತ್ರಗಳ ಸಹಸ್ರಾರು ವ್ಯಕ್ತಿಗಳು ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ. ಈ ಸಾಲಿಗೆ ಬೆಂಗಳೂರು ಕ್ರೀಡಾ ತಂಡಗಳಾದ ಬೆಂಗಳೂರು ಎಫ್ ಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಬೆಂಗಳೂರು ಬುಲ್ಸ್ ಕೂಡ ಸೇರಿಕೊಂಡಿವೆ.
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂರ್ಯನೊಬ್ಬ ಚಂದ್ರನೊಬ್ಬ, ರಾಜನೂ ಒಬ್ಬ, ಈ ರಾಜನೂ ಒಬ್ಬ.. ಮತ್ತೆ ಹುಟ್ಟಿ ಬನ್ನಿ, ಅಪ್ಪು' ಎಂದು ಬರೆದುಕೊಂಡಿದೆ.
'ಪುನೀತ್ ರಾಜ್ ಕುಮಾರ್ ಶಾಶ್ವತವಾಗಿ ನಮ್ಮ ಹೃದಯದಲ್ಲಿರುತ್ತಾರೆ.. ಅಪ್ಪು ಲೀವ್ಸ್ ಆನ್' ಎಂದು ಫುಟ್ ಬಾಲ್ ಕ್ಲಬ್ ಆದ ಬೆಂಗಳೂರು ಎಫ್ ಸಿ ಬರೆದುಕೊಂಡಿದೆ.
ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದೂ ಸೋಲದು ಸೋತು ತಲೆಯ ಬಾಗದು ಎಂದು ಬರೆದುಕೊಂಡಿರುವ ಕಬಡ್ಡಿ ತಂಡ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯವನ್ನು ಅಪ್ಪು ಅಣ್ಣನಿಗೆ ಅರ್ಪಿಸುತ್ತೇವೆ ಎಂದಿದೆ.


Click it and Unblock the Notifications











