ರಿಷಬ್, ಅಶ್ವಿನಿ, ಶಿವಣ್ಣ ಬಳಿಕ ಕಿಚ್ಚ ಬಂದಾಯ್ತು; ಅರ್ಥ ಮಾಡ್ಸೋಕೆ ಇನ್ನು ಯಾರ್ಯಾರು ಬರ್ತಾರಪ್ಪ?
ಅರ್ಥ ಆಯ್ತಾ? ಅಂತ ಸ್ಯಾಂಡಲ್ವುಡ್ ಸ್ಟಾರ್ಗಳೆಲ್ಲಾ ಕೇಳೊಕೆ ಶುರು ಮಾಡಿದ್ದಾರೆ. ಪರೋಕ್ಷವಾಗಿ ಸುಳಿವು ಕೊಟ್ಟುಬಿಟ್ಟಿದ್ದಾರೆ. ಕ್ರಿಕೆಟ್ ಪ್ರೇಮಗಳ ಬಹುದಿನದ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ. ಆದರೆ ಈ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನ ಮಾತ್ರ ಜೋರಾಗಿ ನಡೀತಿದೆ. ಎಲ್ಲದಕ್ಕೂ ಮಂಗಳವಾರ(ಮಾರ್ಚ್ 19) ತೆರೆ ಬೀಳಲಿದೆ.
ಮತ್ತೆ ಐಪಿಎಲ್ ಫೀವರ್ ಶುರುವಾಗಿದೆ. ಮಾರ್ಚ್ 22ರಿಂದ ಮೇ 29ರವೆರೆಗೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲಿದೆ. ಬದ್ಧ ವೈರಿಗಳು ಎಂದೇ ಬಿಂಬಿತವಾಗಿರುವ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಮೊದಲ ಪಂದ್ಯ ನಡೆಯಲಿದೆ. 16 ಸೀಸನ್ಗಳಲ್ಲಿ ಆರ್ಸಿಬಿ ತಂಡ ಟ್ರೋಫಿ ಎತ್ತಿ ಹಿಡಿಯಲಿಲ್ಲ ಎನ್ನುವ ಬೇಸರ ಅಭಿಮಾನಿಗಳನ್ನು ಕಾಡುತ್ತಿದೆ. ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆಲ್ಲುವಲ್ಲಿ ಮಾತ್ರ ತಂಡ ಹಿಂದೆ ಬಿದ್ದಿಲ್ಲ. ಈ ಬಾರಿ ಆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುತ್ತಾ? ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಈ ಬಾರಿ ತಂಡದ ಹೆಸರನ್ನು ಕೊಂಚ ಬದಲಿಸಿಕೊಂಡು ಫಾಫ್ ಡು ಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದಾರೆ. ಅದಕ್ಕೂ ಮುನ್ನ ಆರ್ಸಿಬಿ ಅನ್ಬಾಕ್ಸ್ ಈವೆಂಟ್ ನಡೆಯುತ್ತಿದೆ. ಈ ಬಗ್ಗೆ ವಿಭಿನ್ನ ಪ್ರೋಮೊಗಳನ್ನು ಬಿಡುಗಡೆ ಮಾಡಿ ನಿರೀಕ್ಷೆ ಹುಟ್ಟುಹಾಕಲಾಗುತ್ತಿದೆ. Royal Challengers Bangalore ಎನ್ನುವುದನ್ನು Royal Challengers Bengaluru ಎಂದು ಬದಲಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ.
2014ರಲ್ಲೇ ಸರ್ಕಾರ Bangalore ಎನ್ನುವುದನ್ನು Bengaluru ಬಳಸಲು ಆದೇಶ ಹೊರಡಿಸಿತ್ತು. ಆರ್ಸಿಬಿ ಅಭಿಮಾನಿಗಳು ಕೂಡ ತಂಡ ಹೆಸರಿನಲ್ಲಿ ಈ ಬದಲಾವಣೆ ಮಾಡುವಂತೆ ಕೇಳುತ್ತಾ ಬಂದಿದ್ದರು. ಆದರೆ ಇಷ್ಟು ವರ್ಷ ಈ ಬಗ್ಗೆ ಮೌನವಾಗಿದ್ದ ಮಾಲೀಕರು ಈಗ ಅದಕ್ಕೆ ಮುಂದಾಗಿದ್ದಾರೆ. ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಇದು ಅಧಿಕೃತವಾಗಿ ರಿವೀಲ್ ಆಗಲಿದೆ.

ಈ ಬಗ್ಗೆ ಸುಳಿವು ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರೋಮೊಗಳನ್ನು ಬಿಡುಗಡೆ ಮಾಡುತ್ತಿದೆ. ಒಂದೊಂದರಲ್ಲಿ ಒಬ್ಬೊಬ್ಬ ಕನ್ನಡ ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮೊದಲಿಗೆ ರಿಷಬ್ ಶೆಟ್ಟಿ ಕಂಬದ ಕೋಣಗಳ ಜೊತೆ ಕಾಣಿಸಿಕೊಂಡಿದ್ದರು. ಅರ್ಥ ಆಯ್ತಾ? ಎಂದಿದ್ದರು.
ರಿಷಬ್ ಬಳಿಕ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಲ್ಯಾಪ್ಟಾಪ್ ಪಾಸ್ ವರ್ಡ್ ಮರೆತು ಅರ್ಥ ಆಯ್ತಾ? ಎಂದು ಕೇಳಿದ್ದರು. ಇನ್ನು ಭೈರತಿ ರಣಗಲ್ ಲುಕ್ನಲ್ಲಿ ಶಿವಣ್ಣ ಲಾಂಗ್ ಹಿಡಿದು ಎಷ್ಟು ದಿನ ಈ ಲಾಂಗ್ ಎಂದು ಹೇಳಿ ಅರ್ಥ ಆಯ್ತಾ? ಎಂದಿದ್ದರು. ಇದೀಗ ಸುದೀಪ್ ಆ ಇಡ್ಲಿ ಬೇಡ ಎಂದು ಹೇಳಿ ಮತ್ತದೇ ಪ್ರಶ್ನೆ ಕೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ಬಾಕ್ಸ್ ಈವೆಂಟ್ ಕುರಿತ ಪ್ರೋಮೊದಲ್ಲಿ ಸುದೀಪ್ ಸಹ ಕಾಣಿಸಿಕೊಂಡಿದ್ದಾರೆ. ಹೋಟೆಲ್ನಲ್ಲಿ ಕಿಚ್ಚ ಸ್ಟೈಲಿಶ್ ಆಗಿ ಬಂದು ಡೈನಿಂಗ್ ಟೇಬಲ್ ಮೇಲೆ ಕೂತಿದ್ದಾರೆ. ಅಣ್ಣ 3 ಇಡ್ಲಿ ಎಂದು ಆರ್ಡರ್ ಮಾಡಿದ್ದಾರೆ. ಒಂದು ಇಡ್ಲಿ ಬೇಡ ಎಂದು ಬೇರೆ ತರಲು ಹೇಳಿದ್ದಾರೆ. ಬಳಿಕ ಯಾಕೆ ಅಂತ ಅರ್ಥ ಆಯ್ತಾ? ಎಂದು ಕೇಳಿದ್ದಾರೆ.
ಆರ್ಸಿಬಿ ಅನ್ಬಾಕ್ಸ್ ಈವೆಂಟ್ಗೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಕೊನೆ ಪ್ರೋಮೊದಲ್ಲಿ ಯಾವ ಸ್ಟಾರ್ ನಟ ಕಾಣಿಸಿಕೊಳ್ಳುತ್ತಾರೆ ಎನ್ನುವ ಕೂತೂಹಲ ಅಭಿಮಾನಿಗಳಲ್ಲಿದೆ. ಯಶ್, ದರ್ಶನ್, ಉಪೇಂದ್ರ ಮೂವರಲ್ಲಿ ಯಾರಾದರೂ ಒಬ್ಬರು ದರ್ಶನ ಕೊಡುತ್ತಾರೆ, ತಮ್ಮದೇ ಸ್ಟೈಲ್ನಲ್ಲಿ ಮತ್ತದೇ ಪ್ರಶ್ನೆ ಕೇಳುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಎಲ್ಲಾ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.


Click it and Unblock the Notifications











