ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರಗೆ ಜನ್ಮದಿನದ ಸಂಭ್ರಮ: ಅಭಿಮಾನಿಗಳ ಸಂಭ್ರಮಾಚರಣೆ ಜೋರು
ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಕತ್ರಿಗುಪ್ಪೆಯ ಉಪ್ಪಿ ನಿವಾಸದ ಎದುರು ಜಮಾಯಿಸಿ, ಕೇಕ್ ಕತ್ತರಿಸಿ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಇನ್ನು ನಿನ್ನೆ(ಸೆಪ್ಟೆಂಬರ್ 17) ಸಂಜೆಯೇ ಸೂಪರ್ ಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ 'ಕಬ್ಜ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಕೊರೊನಾ ಹಾವಳಿ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಉಪೇಂದ್ರ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇನ್ನು ಕೆಲವೇ ನಿಮಿಷಗಳಲ್ಲಿ ರಿಯಲ್ ಸ್ಟಾರ್ ನಿರ್ದೇಶಿಸಿ, ನಟಿಸ್ತಿರೋ 'UI' ಚಿತ್ರದ ಸ್ಪೆಷಲ್ ವಿಡಿಯೋ ರಿಲೀಸ್ ಆಗಲಿದೆ. ಇನ್ನು ಹುಟ್ಟುಹಬ್ಬದ ಈ ದಿನವನ್ನು ಸೂಪರ್ ಸ್ಟಾರ್ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದಾರೆ. ಬರಹಗಾರರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಉಪೇಂದ್ರ ಮುಂದೆ ನಿರ್ದೇಶಕರಾಗಿ, ಹೀರೊ ಆಗಿ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ.
ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ನಟನೆಗಿಂತಲೂ ಹೆಚ್ಚು ಉಪ್ಪಿ ನಿರ್ದೇಶನದ ಸಿನಿಮಾಗಾಗಿ ಕೆಲವರು ಕಾದು ಕೂರುತ್ತಾರೆ. 7 ವರ್ಷಗಳ ನಂತರ ಸ್ಯಾಂಡಲ್ವುಡ್ ಬುದ್ಧಿವಂತ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು 'UI' ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

ಬರಹಗಾರನಾಗಿ ಚಿತ್ರರಂಗಕ್ಕೆ ಎಂಟ್ರಿ
80ರ ದಶಕದ ಕೊನೆಗೆ ಉಪೇಂದ್ರ ಬರಹಗಾರರಾಗಿ ಚಿತ್ರರಂಗಕ್ಕೆ ಬಂದವರು. ಕಾಶೀನಾಥ್ ಜೊತೆ ಸೇರಿ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ, ಸಂಭಾಷಣೆಕಾರನಾಗಿ, ಗೀತಸಾಹಿತಿಯಾಗಿ ಕೆಲಸ ಮಾಡಿದ್ದರು. ಟಿಪಿಕಲ್ ಕಾಶೀನಾಥ್ ಶೈಲಿಯ 'ತರ್ಲೆ ನನ್ಮಗ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದರು. ಜಗ್ಗೇಶ್ ಹೀರೊ ಆಗಿ ನಟಿಸಿದ ಈ ಸಿನಿಮಾ ಹಿಟ್ ಆಯ್ತು. 'ಶ್', 'ಓಂ', 'ಆಪರೇಷನ್ ಅಂತ', 'ಓಂಕಾರಂ', 'ಸ್ವಸ್ತಿಕ್' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಅಲ್ಲಿಯವರೆಗೆ ರಿಯಲ್ ಸ್ಟಾರ್ ಬಗ್ಗೆ ಬಹಳ ಜನಕ್ಕೆ ಗೊತ್ತಿರಲಿಲ್ಲ.

'ಎ' ಸಿನಿಮಾ ಮೂಲಕ ಹೀರೊ ಆದ ಉಪ್ಪಿ
ಅಲ್ಲಿವರೆಗೂ ನಿರ್ದೇಶಕನಾದರೆ ಸಾಕು ಎಂದುಕೊಂಡಿದ್ದ ಉಪೇಂದ್ರ, ನಿರ್ಮಾಪಕರ ಸಲಹೆಯಂತೆ 'ಎ' ಚಿತ್ರಕ್ಕೆ ತಾವೇ ಹೀರೊ ಆಗಿ ಬಣ್ಣ ಹಚ್ಚಿದರು. ಮುಂದೆ 'ಉಪೇಂದ್ರ', 'ಸೂಪರ್', 'ಉಪ್ಪಿ 2' ಸಿನಿಮಾಗಳನ್ನು ನಿರ್ದೇಶಿಸಿದರು. ಆದರೆ 'ಎ' ಸಿನಿಮಾ ನಂತರ ನಿರ್ದೇಶನಕ್ಕಿಂತ ಹೆಚ್ಚು ನಟನೆಯಲ್ಲೇ ಅವರಿಗೆ ಹೆಚ್ಚು ಅವಕಾಶ ಹುಡುಕಿ ಬಂದಿದ್ದರಿಂದ ಮತ್ತೆ ನಿರ್ದೇಶನದತ್ತ ಹೆಚ್ಚು ಗಮನ ಹರಿಸಲಿಲ್ಲ. ಇಂದಿಗೂ ಸಾಕಷ್ಟು ಅಭಿಮಾನಿಗಳು ಉಪೇಂದ್ರ ಮತ್ತೆ ಸಿನಿಮಾಗಳನ್ನು ನಿರ್ದೇಶಿಸಬೇಕು ಎಂದು ಒತ್ತಾಯಿಸುತ್ತಲೇ ಇರುತ್ತಾರೆ. ಅವರೆಲ್ಲರ ಒತ್ತಾಯ ಹಿನ್ನೆಲೆಯಲ್ಲಿ 'UI' ಚಿತ್ರಕ್ಕೆ ಕೈ ಹಾಕಿದ್ದಾರೆ.

ಟ್ರೆಂಡ್ ಸೆಟ್ಟರ್ ನಿರ್ದೇಶಕ-ನಟ ಉಪೇಂದ್ರ
ಫಿಲ್ಟರ್ ಇಲ್ಲದ ಸಂಭಾಷಣೆ, ಡಬಲ್ ಮೀನಿಂಗ್ ಡೈಲಾಗ್ಸ್, ವಿಭಿನ್ನ ಮ್ಯಾನರಿಸಂನಿಂದ ಗೆದ್ದವರು ಉಪೇಂದ್ರ. ಹೀರೊ ಅಂದರೆ ತುಂಬಾ ಸಾಧು, ಸೌಮ್ಯವಾಗಿರಬೇಕು ಎನ್ನುವುದನ್ನು ಬಿಟ್ಟು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಡೈಲಾಗ್ ಡೆಲಿವರಿಯಿಂದ ಹುಚ್ಚೆಬ್ಬಿಸಿದ್ದರು. ಇನ್ನು ನಿರ್ದೇಶನದಲ್ಲೂ ಇದನ್ನೇ ಉಪ್ಪಿ ಫಾಲೋ ಮಾಡ್ತಾರೆ. ಗೊಂದಲ ಮೂಡಿಸುವ ನಿರೂಪಣೆಯಿಂದಲೂ ಅವರು ಹೆಚ್ಚು ಸದ್ದು ಮಾಡುತ್ತಾರೆ. ಸೈಕಲಾಜಿಕಲ್ ಥ್ರಿಲ್ಲರ್ 'ಎ' ಸಿನಿಮಾ ಮೂಲಕ ಹೀರೊ ಆಗಿ ಗೆದ್ದ ರಿಯಲ್ ಸ್ಟಾರ್ ಮುಂದೆ ತಮ್ಮ ಹೆಸರಿನಲ್ಲೇ ಸಿನಿಮಾ ಮಾಡಿ ಸೈ ಅನ್ನಿಸಿಕೊಂಡರು.

45ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ರಿಯಲ್ ಸ್ಟಾರ್ ಉಪೇಂದ್ರ ಹೀರೊ ಆಗಿಯೂ ಸಕ್ಸಸ್ ಕಂಡಿದ್ದಾರೆ. ರಕ್ತಕಣ್ಣೀರು, ಅನಾಥರು, H2O, ಹಾಲಿವುಡ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಉಪ್ಪಿ ನಟನೆಯನ್ನು ಮರೆಯೋಕೆ ಸಾಧ್ಯವಿಲ್ಲ. ಇನ್ನು ಸಾಕಷ್ಟು ರೀಮೆಕ್ ಸಿನಿಮಾಗಳಲ್ಲಿ ನಟಿಸಿ ರಿಯಲ್ ಸ್ಟಾರ್ ಸಕ್ಸಸ್ ಕಂಡಿದ್ದಾರೆ. ತಮ್ಮದೇ ವಿಭಿನ್ನ ಮ್ಯಾನರಿಸಂನಿಂದ ರೀಮೆಕ್ ಸಿನಿಮಾಗಳಲ್ಲೂ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ.

ಪ್ರಜಾಕಾರಣಿ ಉಪ್ಪಿ
ಉಪೇಂದ್ರ ಕೆಲ ವರ್ಷಗಳ ಹಿಂದೆ ರಾಜಕೀಯರಂಗಕ್ಕೆ ಧುಮುಕುವ ಘೋಷಣೆ ಮಾಡಿದ್ದರು. ಆದರೆ ಯಾವುದೆ ಪಕ್ಷಕ್ಕೂ ಸೇರಲಿಲ್ಲ. ಉತ್ತಮ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಈಗ ಇರುವ ರಾಜಕೀಯ ವ್ಯವಸ್ಥೆಯನ್ನು ಬಿಟ್ಟು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಉಪೇಂದ್ರ ಬದಲಿ ವ್ಯವಸ್ಥೆ ಬೇಕು ಎನ್ನುತ್ತಿದ್ದಾರೆ. ಹಣ ಇಲ್ಲದೇ ಚುನಾವಣೆ ಪ್ರಚಾರ, ನಾಯಕನಿಲ್ಲದ ವ್ಯವಸ್ಥೆ, ಜನರೇ ಜನರನ್ನು ಚುನಾಯಿಸುವುದು, ಜನರೇ ತಮ್ಮ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಚುನಾಯಿತ ಅಭ್ಯರ್ಥಿ ಕಾರ್ಮಿಕನಂತೆ ಕೆಲಸ ಮಾಡುವುದು, ಒಂದು ವೇಳೆ ಚುನಾವಣೆಯಲ್ಲಿ ಗೆದ್ದವನು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆತನನ್ನು ಅನರ್ಹಗೊಳಿಸುವುದು. ಒಟ್ಟಾರೆ ಪ್ರಜೆಗಳ ಕೈಗೆ ಅಧಿಕಾರ ನೀಡುವುದು ಪ್ರಜಾಕೀಯದ ಉದ್ದೇಶ.


Click it and Unblock the Notifications











