ಉಪೇಂದ್ರ ಮಾನವೀಯತೆಯ ಮತ್ತೊಂದು ಮುಖ
ನಟ ಉಪೇಂದ್ರ ಅವರು ಕೇವಲ ತೆರೆಯ ಮೇಲಷ್ಟೇ ಅಲ್ಲ ತೆರೆಯ ಹೊರಗೂ ರಿಯಲ್ ಸ್ಟಾರ್ ಅನ್ನಿಸಿಕೊಂಡಿದ್ದಾರೆ. ಎಚ್ಐವಿ ಬಾಧಿತ ಮಗುವನ್ನು ದತ್ತು ಸ್ವೀಕರಿಸುವ ಮೂಲಕ ಉಪ್ಪಿ ಮಾನವೀಯತೆಯ ಮತ್ತೊಂದು ಮುಖ ಅನಾವರಣಗೊಂಡಿದೆ.
ಇತ್ತೀಚೆಗೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋನು (ಹೆಸರು ಬದಲಾಯಿಸಲಾಗಿದೆ) ಎಂಬ 9 ವರ್ಷದ ಮಗುವನ್ನು ಉಪ್ಪಿ ಹಾಗೂ ಅವರ ಪತ್ನಿ ಪ್ರಿಯಾಂಕಾ ಅವರು ದತ್ತು ತೆಗೆದುಕೊಂಡರು. [ಕೋಟಿ ಕೋಟಿ ಲೂಟಿ ಮಾಡ್ತಿವೆ ಕನ್ನಡ ಸಿನಿಮಾಗಳು]
ಮಾಜಿ ಸಚಿವ ಎಸ್.ರಾಮದಾಸ್ ಒಡೆತನದ ಅನಂತ ಭಾರತ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಚ್ಐವಿ ಮುಕ್ತ ಭಾರತದ ಗುರಿ ಹೊತ್ತಿರುವ ಮಿಷನ್ 2015 ಅಭಿಯಾನದಡಿ ನಡೆದ ಕಾರ್ಯಕ್ರಮ ಇದಾಗಿದೆ. ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು.ಇದೇ ಸಂದರ್ಭದಲ್ಲಿ ಉಪೇಂದ್ರ ದಂಪತಿಗಳು ಎಚ್ಐವಿ ಬಾಧಿತ ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದರು. ಎಚ್ಐವಿ ಬಾಧಿತ ಸಂಧ್ಯಾ ಎಂಬ ಮಗುವನ್ನು ಉಪ್ಪಿ ದಂಪತಿಗಳು ಎತ್ತಿ ಮುದ್ದಾಡಿದರು. ಶಾಸಕರಾದ ಸಾ.ರಾ.ಮಹೇಶ್, ಗೋ.ಮಧುಸೂಧನ್ ಸೇರಿದಂತೆ ಹಲವು ಗಣ್ಯರು 35ಕ್ಕೂ ಹೆಚ್ಚು ಮಕ್ಕಳ ದತ್ತು ಸ್ವೀಕಾರ ಮಾಡಿದರು.
ಉಪೇಂದ್ರ ಅವರ 45ನೇ ಹುಟ್ಟುಹಬ್ಬ (ಸೆ.18) ಸಂಭ್ರಮಕ್ಕೆ ಈಗಾಗಲೆ ಅಭಿಮಾನಿಗಳು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ 'ಸೂಪರ್ ರಂಗ' ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಕೆ.ಮಂಜು ನಿರ್ಮಾಣದ ಈ ಚಿತ್ರದಲ್ಲಿ ಕೃತಿ ಕರಬಂಧ ನಾಯಕಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












