'ಮನಮೋಹಕ' ಶಿವಣ್ಣ ಅಡ್ರೆಸ್ ಗೆ ಇಲ್ವಲ್ಲಾ? ಏನಾಯ್ತು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಏನು ಮಾಡುತ್ತಿದ್ದಾರೆ? ಹರ್ಷ ನಿರ್ದೇಶಿಸುತ್ತಿರುವ 'ವಜ್ರಕಾಯ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಅದು ಮುಗೀತಿದ್ದ ಹಾಗೆ ಆರ್.ಚಂದ್ರು ನಿರ್ದೇಶನದಲ್ಲಿ 'ಬಾದ್ ಷಾ' ಆಗ್ತಾರೆ.
ಇದೇ ಗ್ಯಾಪಲ್ಲಿ 'ಶ್ರಾವಣಿ ಸುಬ್ರಮಣ್ಯ' ಖ್ಯಾತಿಯ ಮಂಜು ಸ್ವರಾಜ್, ಶಿವಣ್ಣರನ್ನ 'ಸಿ.ಎಂ' ಮಾಡುವುದಕ್ಕೆ ಹೊರಟಿರುವುದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಾ. ಆದರೆ ಅದಾಗಲೇ ಹತ್ತು ತಿಂಗಳ ಹಿಂದೆ 'ರಸಿಕರ ಯುವರಾಜ'ನಾಗಿ ಶಿವಣ್ಣ 'ಮನಮೋಹಕ' ಪೋಸ್ ಗಳನ್ನ ನೀಡಿದ್ದು ನೆನಪಿದ್ಯಾ? ['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಯಾಗಿರುವ ಸಿಂಪಲ್ ಸುನಿ, ವಿಭಿನ್ನ ರೀತಿಯ ಕಥೆ ಹೆಣೆದು 'ಮನಮೋಹಕ' ತಯಾರು ಮಾಡುವುದಕ್ಕೆ ರೆಡಿಯಾಗಿದ್ದರು. ಅದರಂತೆ ರೆಟ್ರೋ ಸ್ಟೈಲ್ ನಲ್ಲಿ ಫೋಟೋ ಶೂಟ್ ಕೂಡ ಮಾಡಿದ್ದರು.
ಎಲ್ಲವೂ ಪ್ಲಾನ್ ಪ್ರಕಾರ ಸರಾಗವಾಗಿ ನಡೆದಿದ್ದರೆ ಇಷ್ಟೊತ್ತಿಗೆ ಶಿವಣ್ಣ 'ಮನಮೋಹಕ'ವಾಗಿ ತೆರೆಮೇಲೆ ಕಾಣುವುದಕ್ಕೆ ರೆಡಿಯಾಗಿರ್ಬೇಕಿತ್ತು. ಆದರೆ ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ! [ಶಿವಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಐಶ್ವರ್ಯಾ ರೈ ಎಂಟ್ರಿ]
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಹಿಟ್ ಆದ್ಮೇಲೆ ಏಕಕಾಲಕ್ಕೆ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈಹಾಕಿ ಸುನಿ, 'ಉಳಿದವರು ಕಂಡಂತೆ' ಮತ್ತು 'ಬಹುಪರಾಕ್'ನ ತೆರೆಮೇಲೆ ತಂದರು. ಆದ್ರೆ, ಎರಡೂ ಚಿತ್ರಗಳು ನಿರೀಕ್ಷಿಸಿದಷ್ಟು ಯಶಸ್ವಿಯಾಗ್ಲಿಲ್ಲ.

ಸೋಲಿನ ಜೊತೆ ನಷ್ಟವೂ ಅನುಭವಿಸಿದ ಸುನಿಗೆ, ಶಿವಣ್ಣ ಡೇಟ್ಸ್ ಕೊಟ್ಟಾಗ 'ಮನಮೋಹಕ' ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾದ್ರೆ, 'ಮನಮೋಹಕ' ಪ್ರಾಜೆಕ್ಟ್ ನಿಂತುಹೋಯ್ತಾ? ಖಂಡಿತ ಇಲ್ಲ! ['ಮನಮೋಹಕ'ವಾಗಿ ಕೈಕೊಟ್ರು ಸಮರ್ಥ ಪ್ರಸಾದ್]
ಸುನಿಗೆ ಸಾಧ್ಯವಾದಾಗ ಸಿನಿಮಾ ಮಾಡಲಿ ಅಂತ ಶಿವಣ್ಣ ಹೇಳಿದ್ದಾರೆ. ಇದೇ ಖುಷಿಯಲ್ಲಿ ನಿರ್ದೇಶಕ ಸುನಿ 'ಮನಮೋಹಕ' ಕಥೆಯನ್ನ ತಿದ್ದಿ-ತೀಡಿ ಮತ್ತಷ್ಟು ಮನಮಿಡಿಯುವ ಹಾಗೆ ಮಾಡುತ್ತಿದ್ದಾರೆ. 'ವಜ್ರಕಾಯ' ಮತ್ತು 'ಶ್ರೀಕಂಠ' ಮುಗೀತಿದ್ದ ಹಾಗೆ ಶಿವಣ್ಣನ 'ಮನಮೋಹಕ'ನಾಗುವುದು ಗ್ಯಾರೆಂಟಿಯಾಗಿದೆ.
'ಪ್ರಯತ್ನಕ್ಕೆ ಸಾವಿದೆ, ಪ್ರಯೋಗಕ್ಕಲ್ಲ' ಅನ್ನುವುದನ್ನ ನಂಬಿರುವ ಸುನಿ, 'ಮನಮೋಹಕ' ಮೂಲಕ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಅವರ ನಂಬಿಕೆ ಸುಳ್ಳಾಗದಿರಲಿ ಅನ್ನುವುದೇ ನಮ್ಮ ಹಾರೈಕೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











