ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಯಾರು ಬಂದಿಲ್ಲ ಹೇಳಿ?
ಸುದೀಪ್ ವೇದಿಕೆಯೇರಿ ಡೈಲಾಗ್ ಹೊಡೆದು ಡಾನ್ಸ್ ಮಾಡಿದಾಗಲಂತೂ ಕಿಚ್ಚನಿಗೆ ಜೈಕಾರಗಳ ಮಳೆಯೇ ಸುರಿಯಿತು. ದರ್ಶನ್ ಬಂದು 'ಏ ಬುಲ್ ಬುಲ್.. ಮಾತಾಡಾಕಿಲ್ವಾ...' ಎಂಬ ಅಂಬರೀಷ್ ಮೊಟ್ಟಮೊದಲ ಚಿತ್ರ 'ನಾಗರಹಾವು' ಡೈಲಾಗ್ ಹೇಳಿದಾಗಲಂತೂ ಜನ ಕೇಕೆ ಹಾಕಿ ಸಂಭ್ರಮಿಸಿದರು. ನಂತರ ದರ್ಶನ್, ಮಂಡ್ಯದ ಗಂಡು...ಮುತ್ತಿನ ಚೆಂಡು..., ಎಂಬ ಹಾಡಿಗೆ ಡಾನ್ಸ್ ಮಾಡಿದಾಗ ದರ್ಶನ್ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು.
ಶಿವರಾಜ್ ಕುಮಾರ್-ಹರಿಪ್ರಿಯಾ ನೃತ್ಯ ಹಾಗೂ ತಾರಾ ಜೋಡಿ ಉಪೇಂದ್ರ-ಪ್ರಿಯಾಂಕ ಜೋಡಿಯ ನೃತ್ಯ ಎಲ್ಲರ ಗಮನಸೆಳೆದ ಮತ್ತೊಂದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ಅಂಬರೀಷ್ ಸಮಕಾಲೀನರಾಗಿದ್ದು, ಅಂಬರೀಷ್ ಜೊತೆ ನಟಿಸಿದ ನಟಿಯರ ಆಗಮನ ಕಾರ್ಯಕ್ರಮಕ್ಕೆ ಕಳೆ ತಂದಿತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಅಂಬಿಯ ಗುಣಗಾನ ಮಾಡಿದರು.
ಜಯಂತಿ, ಜಯಪ್ರದಾ, ಜಯಮಾಲಾ, ಭವ್ಯ, ತಾರಾ, ಶ್ರುತಿ, ಅನು ಪ್ರಭಾಕರ್, ಸುಧಾರಾಣಿ, ಮಾಲಾಶ್ರೀ-ರಾಮು, ರಕ್ಷಿತಾ, ಉಮಾಶ್ರೀ, ಅಂಬಿಕಾ, ಲಕ್ಷ್ಮೀ, ಭಾರತಿ, ಖುಷ್ಬೂ ಈ ಎಲ್ಲಾ ಹಿರಿತ ತಾರೆಯರ ಜೊತೆ ಇದೀಗ ಕನ್ನಡ ಚಿತ್ರರಂಗದಲ್ಲಿರುವ ನಟಿಯರಾದ ರಮ್ಯಾ, ರಾಧಿಕಾ ಪಂಡಿತ್, ಐಂದ್ರಿತಾ, ರಾಗಿಣಿ, ಹರಿಪ್ರಿಯಾ, ಎಲ್ಲರೂ ಆಗಮಿಸಿದ್ದರು. ಆದರೆ.., ಅಂಬರೀಷ್ ಮೊದಲ ಚಿತ್ರ ನಾಗರಹಾವು ನಾಯಕಿ, ಕನ್ನಡದ 'ರಂಗನಾಯಕಿ' ಆರತಿಯ ಆಗಮನ ಮಾತ್ರ ಕಂಡುಬಂದಿಲ್ಲ.
ಕ್ಯಾಮರಾ ಕಣ್ಣಿನಲ್ಲಿ ಸೆರೆಕಂಡ ಅಪರೂಪದ ದೃಶ್ಯಗಳಲ್ಲಿ ಒಂದು ಮುನಿರತ್ನ ಹಾಗೂ ಕೆ ಮಂಜು ಜೋಡಿ. ಸ್ವಲ್ಪ ದಿನಗಳ ಹಿಂದಷ್ಟೇ ಮಾಧ್ಯಮಗಳಲ್ಲಿ ಕಚ್ಚಾಡುತ್ತಿದ್ದ ಈ ಜೋಡಿ ನಿನ್ನೆ ಒಟ್ಟಿಗೆ ಕುಳಿತು ಕ್ಯಾಮರಾಗೆ ಫೋಸ್ ಕೊಟ್ಟಿದ್ದಲ್ಲದೇ ಮೀಸೆಯಡಿಯಲ್ಲೇ ನಗುತ್ತಿದ್ದರು. ಹಿರಿಯ ನಿರ್ದೇಶಕ ರಾಜೇಂದ್ರಸಿಂಗ ಬಾಬು, ನಟ ಶಶಿಕುಮಾ್ ಸಹ ಆಗಮಿಸಿದ್ದರು. ಒಟ್ಟಿನಲ್ಲಿ ಅಂಬರೀಷ್ ಅರುವತ್ತರ ಸಂಭ್ರಮ ಕನ್ನಡಿಗರೆಲ್ಲರ ಸಂಭ್ರಮದ ಸಂಕೇತವಾಗಿ ಆಚರಿಸಲ್ಪಟ್ಟಿತು.
ಕನ್ನಡ ಚಿತ್ರರಂಗದ ಒಗ್ಗಟ್ಟು ನೆರೆದವರು ಮೂಗಿನ ಮೇಲೆ ಬೆರಳಿಡುವಂತಿತ್ತು. ಸುಮಲತಾ ಅಂಬರೀಷ್ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ಪತಿಗೆ ಬಂದ ಹಾರೈಕೆಗಳಿಗೆ ಧನ್ಯವಾದ ಹೇಳುತ್ತಾ ಪಾದರಸದಂತೆ ಓಡಾಡುತ್ತಿದ್ದರು. ಅಂಬಿಯ ಹುಟ್ಟುಹಬ್ಬದ ಕೇಂದ್ರಬಿಂದುವಾಗಿ ಸುಮಲತಾ ಕಂಗೊಳಿಸುತ್ತಿದ್ದರು ಎಂದರೆ ಅತಿಶಯೋಕ್ತಿಯೇನಿಲ್ಲ.
ಅಂಬರೀಷ್ ಮಗ ಅಭಿಷೇಕ್ ಮೇಲೆ ಕ್ಯಾಮರಾ ಕಣ್ಣು ಆಗಾಗ ಬೀಳುತ್ತಿತ್ತು, ತಮ್ಮ ತಂದೆಯ ಜನಪ್ರಿಯತೆ, ತಾಯಿ ಸುಮಲತಾರ ಮೇಲಿನ ಜನರ ಪ್ರೀತಿ ಅವರನ್ನು ಮಂತ್ರಮುಗ್ಧರನ್ನಾಗಿಸಿ ಕುಳಿತ ಸಿಟಿಗೆ ಬಿಗಿಯಾಗಿ ಅಂಟಿಸಿಬಿಟ್ಟಿತ್ತು. ಕಲಿಯುಗ ಕರ್ಣ ಬಿರುದು ಸಂಪಾದಿಸಿದ ತಮ್ಮ ಅಪ್ಪ, ಅದೆಷ್ಟು ಜನರ ಪ್ರೀತಿಗೆ ಪಾತ್ರರಾಗಿದ್ದಾರೆಂಬುದನ್ನು ಪ್ರತ್ಯಕ್ಷವಾಗಿ ನೋಡಿ ರೋಮಾಂಚನ ಅನುಭವಿಸಿದ ಅಭಿಷೇಕ್ ಕಣ್ಣಿಂದ ಆನಂದಭಾಷ್ಪ ಉದುರಿದ್ದು ಕ್ಯಾಮರಾ ಮೂಲಕ ಎಲ್ಲರಿಗೂ ತಲುಪಿತು.
ಎಲ್ಲರ ಹಾರೈಕೆಗಳನ್ನು ನಾನು ನನ್ನ ಜೀವವಿರುವವರೆಗೆ ಮರೆಯಲಾರೆ. ಎಲ್ಲರಿಗೂ ನಾನು ಚಿರಋಣಿ ಎಂಬ ಅಂಬರೀಷ್ ಮಾತು ಅರಮನೆ ಮೈದಾನದ ತುಂಬೆಲ್ಲಾ ಪ್ರತಿಧ್ವನಿಸಿತು. ಬಂದಿದ್ದ ಅಂಬಿ ಹಾಗೂ ಸಿನಿಅಭಿಮಾನಿಗಳು ಧನ್ಯತೆ ಅನುಭವಿಸುತ್ತಾ ತಮ್ಮ ತಮ್ಮ ಮನೆಯ ದಾರಿ ಹಿಡಿದರೂ ಮನದ ತುಂಬಾ ಅಂಬಿಯ ಬಿಂಬವೇ ತುಂಬಿತ್ತು. ನಾಡಹಬ್ಬದಂತೆ ರೆಬೆಲ್ ಸ್ಟಾರ್ ಅಂಬಿಯ ಹುಟ್ಟುಹಬ್ಬ ನೆರವೇರಿತು. (ಒನ್ ಇಂಡಿಯಾ ಕನ್ನಡ)


Click it and Unblock the Notifications











