ಅಂಬರೀಷ್ ಹುಟ್ಟುಹಬ್ಬಕ್ಕೆ ಭಟ್ಟರ ಸ್ಪೆಷಲ್ ಹಾಡು

ಇದೇ 29 (ಮೇ 29, 2012) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವಿಶೇಷ ಸಂದರ್ಭಕ್ಕಾಗಿ ಯೋಗರಾಜ್ ಭಟ್, ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಸಾಧನೆ ಹಾಗೂ ಅವರ ಮೇಲೆ ಉದ್ಯಮ ಹಾಗೂ ಜನರಿಗಿರುವ ಪ್ರೀತಿ-ವಿಶ್ವಾಸಗಳ ಕುರಿತು ಒಂದು ಹಾಡನ್ನು ರಚಿಸಿಕೊಟ್ಟಿದ್ದಾರೆ.
ಅಂಬರೀಷ್ ಸಾಧನೆಯನ್ನು ಸಂಕ್ಷಿಪ್ತವಾಗಿ ಹೇಳುವ ಈ ಹಾಡಿನ ಪ್ರಾರಂಭದ ಸಾಲುಗಳು ಹೀಗಿವೆ:
ನಮ್ಮ ನಾಡಿನ ಕೀರ್ತಿ ಪುರುಷ...
ಬಾಳಬೇಕಯ್ಯ ನೂರು ವರುಷ...
ಮಂಡ್ಯದ ಚಂದಮಾಮ ಅಂಬರೀಷ್ ಅಣ್ಣಯ್ಯ...
ಕರುನಾಡ ಮಾಸ್ಟರ್ ಪೀಸ್ ಬೇರೆ ಇಲ್ಲಯ್ಯ...
ಹೀಗೆ ಸಾಗುವ ಈ ಹಾಡು, ಅಂಬಿಗೆ ಕನ್ನಡ ಚಿತ್ರರಂಗ, ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳು ಹೀಗೆ ಎಲ್ಲರಿಂದ ಬಂದ ಬಿರುದು, ಪ್ರೀತಿಗಳನ್ನು ಸಾರುವಂತಿದೆ. ಈ ಹಾಡನ್ನು ಅಂದು ವೇದಿಕೆಯ ಮೇಲೆ ಕೇಳುವ ಸೌಭಾಗ್ಯ ಅಲ್ಲಿ ನೆರೆಯಲಿರುವ ಸಮಸ್ತ ಜನರಿಗೂ ಲಭಿಸಲಿದೆ.
ಅಂಬರೀಷ್ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗ ಒಟ್ಟಾಗಲಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಸೋಜಿಗವೇ ಸರಿ. ಅಂಬಿಯ ಹುಟ್ಟುಹಬ್ಬಕ್ಕಾಗಿ ಮೂರು ದಿನ ಸಂಪೂರ್ಣವಾಗಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.
ಅಷ್ಟೇ ಅಲ್ಲ, ಎಲ್ಲಾ ನಟ-ನಟಿಯರೂ ಒಂದಲ್ಲ ಒಂದು ಕಾರ್ಯಕ್ರಮ ನೀಡುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಅಂಬಿ 'ಅಜಾತಶತ್ರು' ಎಂಬ ಮಾತಿಗೆ ಈ ಕಾರ್ಯಕ್ರಮ ವಿಶೇಷ ಇಂಬು ನೀಡಲಿದೆ ಎಂಬುದಂತೂ ಸತ್ಯ.
ಒಟ್ಟಿನಲ್ಲಿ ಅಂಬರೀಷ್ ಹುಟ್ಟುಹಬ್ಬಕ್ಕೂ ಭಟ್ಟರ ಹಾಡು ಬಳಕೆಯಾಗುತ್ತಿರುವುದು ಯೋಗರಾಜ್ ಭಟ್ಟರ ಅಭಿಮಾನಿಗಳಿಗಂತೂ ತುಂಬಾ ಸಂತೋಷದ ಸಂಗತಿ. ಸ್ವತಃ ಭಟ್ಟರು ಈ ಅವಕಾಶದಿಂದ ಧ್ರಿಲ್ ಆಗಿದ್ದಾರೆ ಹಾಗೂ ಇದಕ್ಕಾಗಿ ವಿಶೇಷವಾದ ಹಾಡು ಬರೆದುಕೊಟ್ಟಿದ್ದಾರೆ ಎಂದು ಭಟ್ಟರ ಆಪ್ತರು ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











