ರೆಬೆಲ್ ಸ್ಟಾರ್ ಅಂಬಿಗೆ ಹುಟ್ಟುಹಬ್ಬ ಸಂಭ್ರಮ
ನಟ ಅಂಬರೀಶ್ ಈಗ ಕೇವಲ ರೆಬೆಲ್ ಸ್ಟಾರ್ ಅಷ್ಟೇ ಅಲ್ಲ; ಜನನಾಯಕ, ಜನಸೇವಕ. ಈಗವರು ಕೇವಲ ಮಂಡ್ಯ ಗಂಡಷ್ಟೇ ಅಲ್ಲ; ಆರು ಕೋಟಿ ಕನ್ನಡಿಗರ ಕಣ್ಮಣಿ. ವಸತಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ.
ಅಂಬರೀಶ್ ಅವರು ರಾಜಕೀಯದಲ್ಲಿದ್ದರೂ ಅಷ್ಟೇ ಸಿನಿಮಾದಲ್ಲಿದ್ದರೂ ಅಷ್ಟೇ ಅಭಿಮಾನಿಗಳ ಪಾಲಿಗೆ ಕಲಿಯುಗ ಕರ್ಣ. "ಇಷ್ಟು ದಿನ ಕೆಲಸ ಕಾರ್ಯ ಇರಲಿಲ್ಲ. ಮಧ್ಯಾಹ್ನ 12ಕ್ಕೆ ದಿನದ ಆರಂಭವಾಗುತ್ತಿತ್ತು. ಈಗ ಜನರ ಸೇವೆ ಸಲ್ಲಿಸುವ ಸದಾವಕಾಶ ಸಿಕ್ಕಿದೆ. ಹಾಗಾಗಿ ಬೆಳಗ್ಗೆಯೇ ಬೇಗ ಏಳುವಂತಾಗಿದೆ" ಎಂದಿದ್ದರು ಇತ್ತೀಚೆಗೆ.
ಮೇ 29ಕ್ಕೆ ಅಂಬರೀಶ್ 61ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಅರುವತ್ತರ ಸಂಭ್ರಮದಲ್ಲಿ ಅವರು ಮಾತನಾಡಿದಾಗ, 60 ವರ್ಷಗಳು ತುಂಬಿರುವ ನಾನು ಈಗ ಸೀನಿಯರ್ ಸಿಟಿಜನ್. ಬೆಳೆಯಬೇಕು ಎನ್ನುವ ಕಾರಣಕ್ಕೆ ಚಿತ್ರರಂಗಕ್ಕೆ ಬರಲಿಲ್ಲ. ನಾನು ಏನೂ ಅಂದುಕೊಳ್ಳದೇ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ನನ್ನೊಂದಿಗಿರುವ ಸ್ನೇಹಿತರ ಬಳಗ ದೇವರು ಕೊಟ್ಟ ವರ. ನಾನು ಗಳಿಸಿದ್ದು ಏನೂ ಇಲ್ಲ ಎಂದಿದ್ದರು.

ಮಂಡ್ಯದ ಗಂಡು ಡೈಲಾಗ್ ಕೇಳಿ
"ದುಂಡಗಿರುವ ಜಗತ್ತಲ್ಲಿ, ಗುಂಡಗಿರುವ ದೇಶದಲ್ಲಿ, ಕರುನಾಡಿನಲ್ಲಿ ಪ್ರೀತಿಪಾತ್ರವಾದ ಮಂಡ್ಯದಲ್ಲಿ, ಟಿಪ್ಪು ಸುಲ್ತಾನ್ ಮೆರೆದ ನಾಡಿನಲ್ಲಿ, ಕಾವೇರಿ ತೀರದಲ್ಲಿ, ಚೌಡಯ್ಯರ ಪಿಟೀಲು ಕೇಳುತ್ತಾ, ಕುವೆಂಪುರನ್ನು ಓದುತ್ತಾ, ಡಾ ರಾಜ್ ಕುಮಾರ್ ಅವರನ್ನು ನೋಡುತ್ತಾ ಬೆಳೆದ ಗಂಡು ನಾನು..., ಮಂಡ್ಯದ ಗಂಡು..." ಎಂಬ ಡೈಲಾಗ್ ಅವರ ಬಾಯಲ್ಲಿ ಈಗಲೂ ನಲಿದಾಡುತ್ತದೆ.

ನಿಸ್ವಾರ್ಥ ಗುಣಕ್ಕೆ ಮನಸೋಲದವರಿಲ್ಲ
ಅಂಬರೀಶ್ ಅವರದು ಸ್ನೇಹಪರ ವ್ಯಕ್ತಿತ್ವ. ಅವರ ನಿಸ್ವಾರ್ಥ ಗುಣಕ್ಕೆ ಮನಸೋಲದವರಿಲ್ಲ. ಅವರ ಅಭಿಮಾನಿ ಬಳಗ ತುಂಬ ದೊಡ್ಡದು. ಅವರ ಪ್ರೀತಿಯ ಅಭಿಮಾನಕ್ಕೆ ಅಂಬಿ ಜೀವವಿರುವವರೆಗೂ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎನ್ನುತ್ತಾರೆ.

ರಾಜ್ ಜೊತೆ ಅಂಬಿ ಸಂಬಂಧ ಹೇಗಿತ್ತು?
ಡಾ ರಾಜ್ ಜೊತೆಯಲ್ಲಿ ಎಲ್ಲಾ ವಿಷಯಗಳನ್ನು ಮಾತನಾಡಲು ಅವರೊಂದಿಗೆ ಇದ್ದವರು ಹೆದರುತ್ತಿದ್ದರು. ಆದರೆ, ನಾನು ಎಲ್ಲಾ ವಿಷಯಗಳನ್ನು ಅತ್ಯಂತ ಮುಕ್ತವಾಗಿ ಮಾತನಾಡುತ್ತಿದ್ದೆ, ಚರ್ಚಿಸುತ್ತಿದ್ದೆ ಎಂದೊಮ್ಮೆ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರರಂಗದಲ್ಲೇ 40 ವಸಂತಗಳು ಕಂಡ
ನಾಗಹಾವು ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದ ಅಂಬರೀಷ್ ತಮ್ಮ ಸುದೀರ್ಘ 40 ವರ್ಷಗಳ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಡುವಾರಳ್ಳಿ ಪಾಂಡವರು, ರಂಗನಾಯಕಿ, ಶುಭಮಂಗಳ, ಒಲವಿನ ಉಡುಗೊರೆ ಮುಂತಾದ ಚಿತ್ರಗಳಲ್ಲಿನ ಅಭಿನಯದ ಮೂಲಕ ಪರಿಪೂರ್ಣ ಕಲಾವಿದ ಎಂದು ಗುರುತಿಸಿಕೊಂಡವರು.

ಚಿತ್ರರಂಗದ ಮುಂದಾಳತ್ವ ಬೇಡ ಎಂದ ಅಂಬಿ
ಚಿತ್ರರಂಗದಲ್ಲಿ ವಾದ-ವಿವಾದಗಳು ಏನೇ ಆಗಲೀ, ಎಲ್ಲೇ ವೈಮನಸ್ಯ ತಲೆದೋರಲಿ, ಅಂಬರೀಶ್ ಅದನ್ನು ಬಗೆಹರಸಿ ಭಿನ್ನಾಭಿಪ್ರಾಯ ತೊಲಗಿಸಿ ಎಲ್ಲರೂ ಒಪ್ಪತಕ್ಕ ನ್ಯಾಯವೊಂದನ್ನು ನೀಡಿ ಸದ್ದಡಗಿಸಿದ ಉದಾಹರಣೆ ಸಾಕಷ್ಟಿದೆ. ಆದರೆ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಿ ಎಂದರೆ ಅವರು ಅದಕ್ಕೆ ಒಪ್ಪುವುದೇ ಇಲ್ಲ. ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನೇ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.


Click it and Unblock the Notifications











