ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬ ವಿಶೇಷಗಳು
ರೆಬೆಲ್ ಸ್ಟಾರ್ ಅಂಬರೀಷ್ ಇದೇ ಮೇ 29ಕ್ಕೆ 60ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಅವರ ಅದ್ದೂರಿ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಕೈಜೋಡಿಸಿದೆ. ಹುಟ್ಟುಹಬ್ಬದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಅರಮನೆ ಮೈದಾನದಲ್ಲಿ ಅಂಬಿ ಹುಟ್ಟುಹಬ್ಬ ನಡೆಯಲಿದೆ.
ಭಾರತ ಚಿತ್ರರಂಗದ ನಟ-ನಟಿಯರು,ಚಿತ್ರ ನಿರ್ದೇಶಕರು ಸೇರಿದಂತೆ ಚಿತ್ರರಂಗದ ದಿಗ್ಗಜರು ಈ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಂಬಿ ಹುಟ್ಟುಹಬ್ಬ ನಡೆಯದೆ. ಈ ಹಿನ್ನೆಲೆಯಲ್ಲಿ ಮೇ 29ರಿಂದ 31ರವರೆಗೆ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲು ನಿರ್ಧರಿಸಲಾಗಿದೆ.
ಹುಟ್ಟುಹಬ್ಬ ನಿಮಿತ್ತವಾಗಿ ಸಿನಿಮಾ ತಾರೆಗಳು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದಕ್ಕಾಗಿ ಈಗಾಗಲೆ ಸಿದ್ಧತೆಗಳು ನಡೆಯುತ್ತಿವೆ. ಅಂಬಿ ಸಿನಿಮಾ, ರಾಜಕೀಯ ಬದುಕು ಹಾಗೂ ವಿವಿಧ ಮಜಲುಗಳನ್ನು ಪರಿಚಯಿಸುವ ಅಭಿನಂದನಾ ಗ್ರಂಥವನ್ನೂ ಹೊರತರಲಾಗುತ್ತಿದೆ.
ಬೆಂಗಳೂರು ಜೆಪಿ ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ವಿಭಿನ್ನ ಛಾಯಾಚಿತ್ರ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಎಸ್ ನಾರಾಯಣ್, ಚಿತ್ರಲೋಕ ಡಾಟ್ ಕಾಮ್ನ ವಿರೇಶ್ ಹಾಗೂ ಕನ್ನಡವೇ ಸತ್ಯ ಖ್ಯಾತಿಯ ರಂಗಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿವಿ ನಾರಾಯಣ ಗೌಡ ಮಾತನಾಡುತ್ತಾ, ಹೃದಯವಂತ, ಕರುಣಾಮಯಿ, ತಾಯಿಯ ಮನಸ್ಸುಳ ವ್ಯಕ್ತಿತ್ವ ಅಂಬರೀಷ್ ಅವರದು ಎಂದು ಬಣ್ಣಿಸಿದರು. ಅವರ ಜೀವನ, ವ್ಯಕ್ತಿತ್ವ ಕುರಿತ 'ಅಂಬರ' ಪುಸ್ತಕ ತರಲು ನಿರ್ಧರಿಸಲಾಗಿದೆ ಎಂದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












