ಕಾವೇರಿ ಹೋರಾಟ ಬೆಂಬಲಿಸಿ 'ಅಂಬಿ' ಮಾತುಗಳು
ಈ ವೇಳೆ ಕಲಾವಿದರ ಸಂಘದ ಅಧ್ಯಕ್ಷ, ರೆಬೆಲ್ ಸ್ಟಾರ್ ಅಂಬರೀಶ್ ತಮ್ಮೊಂದಿಗೆ ಜೊತೆಯಾಗಿದ್ದ ಕಲಾವಿದರು ಹಾಗೂ ನೆರೆದಿದ್ದ ಅಸಂಖ್ಯಾತ ಜನರನ್ನು ಅದ್ದೇಶಿಸಿ ಮಾತನಾಡಿದ್ದಾರೆ. "ನಮ್ಮಲ್ಲಿ ನೂರು ರೂಪಾಯಿ ಇದ್ದರೆ ಅದರಲ್ಲಿ 50 ರೂಪಾಯಿ ಕೊಡಬಹುದು. ಆದರೆ ನಮ್ಮಲ್ಲಿ 1 ರೂಪಾಯಿ ಇದ್ದಾಗ 50 ರೂಪಾಯಿ ಕೇಳಿದರೆ ಕೊಡುವುದು ಹೇಗೆ?
ಈಗ ಕಾವೇರಿ ವಿಷಯದಲ್ಲೂ ಹೀಗೆ ಆಗಿದೆ. ನಮ್ಮ ರೈತರಿಗೇ ಇರುವ ನೀರು ಸಾಕಾಗುತ್ತಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದು ಎಷ್ಟು ಸರಿ? ಕೇಂದ್ರ ಸರ್ಕಾರ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಪ್ರಧಾನಿಯವರು ಕೂಡಲೇ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು. ಕನ್ನಡಪರ ಹೋರಾಟಕ್ಕೆ ಚಿತ್ರರಂಗ ಯಾವತ್ತಿದ್ದರೂ ಬೆನ್ನುಲುಬಾಗಿ ನಿಲ್ಲುತ್ತದೆ
ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕನ್ನಡಿಗರು ಹನುಮಂತನ ಹಾಗೆ ಎದೆ ಬಗೆದು ತೋರಿಸಿದ್ದೇವೆ. ಆದರೂ ನಮ್ಮ ನೋವಿಗೆ, ಮನವಿಗೆ ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯಕ್ಕೆ ತುಂಬಾ ವರ್ಷಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದು ಶೀಘ್ರವೇ ನಿಲ್ಲಬೇಕು" ಎಂದು ಹೇಳಿದ್ದಾರೆ.
ಅಲ್ಲಿದ್ದ ಎಲ್ಲರಲ್ಲೂ ಕಾವೇರಿ ಹೋರಾಟದ ಕಿಚ್ಚು ಎದ್ದು ಕಾಣುತ್ತಿತ್ತು. "ಕಾವೇರಿ ನಮ್ಮದು. ಕಾವೇರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ. ಆದರೆ ಎಲ್ಲರೂ ಶಾಂತಿಯುತ ಹೋರಾಟ ಮಾಡೋಣ. ಅಷ್ಟಾದ ಮೇಲೂ ಸಮಸ್ಯೆ ಬಗೆಹರಿಯದೇ ಇದ್ದರೆ, ನಂತರ ಉಗ್ರ ಹೋರಾಟಕ್ಕೂ ಮುಂದಾಗೋಣ. ಕಾವೇರಿಯನ್ನು ನಂಬಿ ಬದುಕುತ್ತಿರುವ ರೈತರ ಕಷ್ಟ ನಮಗೆ ಅರ್ಥವಾಗುತ್ತದೆ" ಎಂದು ಹೇಳುವ ಮೂಲಕ ಹೋರಾಟಕ್ಕೆ ಭಾರಿ ಬೆಂಬಲ ಸೂಚಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












