ಮಂಗಳೂರಿನಲ್ಲಿ ಸೆಪ್ಟೆಂಬರ್ 21-23 ರವರೆಗೆ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವ
ಇದೇ ಪ್ರಪ್ರಥಮ ಬಾರಿಗೆ ರಾಜಧಾನಿಯಿಂದ ಹೊರಗಡೆ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಸೆಪ್ಟೆಂಬರ್ 21, 22 ಹಾಗೂ 23 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಿಸಿದರು.
''ಸಾಂಸ್ಕೃತಿಕ ವಿಕೇಂದ್ರೀಕರಣವಾಗಬೇಕೆಂಬ ಉದ್ದೇಶದಿಂದ ಈ ಬಾರಿ ಬೆಂಗಳೂರಿನಿಂದ ಹೊರಗಡೆ ಚಿತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪಂಚ ದ್ರಾವಿಡ ಭಾಷೆಗಳ ಖ್ಯಾತ ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುವವು. ತುಳುವಿನ 'ಪಡ್ಡಾಯಿ', ಕೊಡವರ 'ತಳಂಗ್ ನೀರ್', ಬಂಜಾರದ 'ಕೊಂಜಾವರಮ್' ಕೊಂಕಣಿಯ 'ಉಜ್ವಾಡು' ಹಾಗೂ ಬ್ಯಾರಿಯ 'ಬ್ಯಾರಿ' ಚಿತ್ರಗಳು ಪ್ರದರ್ಶನಗೊಳ್ಳಲಿವೆ''

''ಕನ್ನಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು', ತುಳುವಿನ 'ಬಂಗಾರ್ ಪಟ್ಲೇರ್', 'ಒರಿಯರ್ದೊರಿ ಅಸಲ್', 'ಚಾಲಿ ಪೋಲಿಲು' ಚಿತ್ರಗಳು ಸೇರಿದಂತೆ ಒಟ್ಟು ಒಂಬತ್ತು ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರತಿ ಚಿತ್ರ ಪ್ರದರ್ಶನದ ಬಳಿಕ ಆಯಾ ನಿರ್ದೇಶಕರ ಜೊತೆ ಚರ್ಚೆ ಸಹ ನಡೆಸಲಾಗುವುದು'' ಎಂದು ಡಾ.ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಈ ಬಾರಿ ದಸರಾ ಮಹೋತ್ಸವದಲ್ಲಿ ಸಹ ಒಂದು ವಾರ ಚಿತ್ರೋತ್ಸವ ಹಮ್ಮಿಕೊಳ್ಳಲಾಗುವುದು. ಮಂಗಳೂರಿನಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುವ ಪ್ರಾದೇಶಿಕ ಭಾಷಾ ಚಿತ್ರ್ಯೋತ್ಸವದಲ್ಲಿ ವಿವಿಧ ಕಾಲೇಜು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಿನಿಮಾ ವೀಕ್ಷಿಸಲು ಮುಕ್ತ ಅವಕಾಶವಿದೆ. ಈ ಕಾಲೇಜಿನ ಹವಾನಿಯಂತ್ರಕ ಥಿಯೇಟರ್ ನಲ್ಲಿ ಸುಮಾರು 400 ಮಂದಿ ಚಿತ್ರ ವೀಕ್ಷಿಸಬಹುದಾಗಿದೆ.
ಚಲನಚಿತ್ರ್ಯೋತವ ಉದ್ಘಾಟನೆಯನ್ನು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಚಿತ್ರನಟ ನಿರ್ದೇಶಕರಾದ ಶಿವಧ್ವಜ್ ಹಾಗೂ ರಿಷಬ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭಾಷಾ ಚಿತ್ರೋತ್ಸವದ ಸಂಚಾಲಕರಾದ ಪ್ರೊ. ನಾ.ದಾಮೋದರ ಶೆಟ್ಟಿ ಅವರು ಉಪಸ್ಥಿತರಿದ್ದರು.


Click it and Unblock the Notifications











