ಕನ್ನಡ ಚಿತ್ರರಂಗಕ್ಕೆ ಎಚ್ಎಸ್ ವೆಂಕಟೇಶಮೂರ್ತಿ ಕೊಡುಗೆ
ಕನ್ನಡದ ಖ್ಯಾತ ಲೇಖಕ, ಕವಿ, ಗೀತರಚನೆಕಾರ, ಕಥೆಗಾರ ಮತ್ತು ಸಂಭಾಷಣಕಾರ ಎಚ್.ಎಸ್. ವೆಂಕಟೇಶಮೂರ್ತಿ ಕೊನೆಯುಸಿರೆಳೆದಿದ್ದಾರೆ. ಹೆಚ್ಎಸ್ವಿ ಎಂದೇ ಖ್ಯಾತರಾಗಿದ್ದ ಅವರು ಕನ್ನಡ ಸಾಹಿತ್ಯಲೋಕ್ಕೆ ನೀಡಿರುವ ಕೊಡುವೆ ಅಪಾರ. ಸಾಕಷ್ಟು ಕೃತಿಗಳನ್ನು ಅವರು ರಚಿಸಿದ್ದರು. ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ 30 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ ನಾರಾಯಣ ಭಟ್ಟರು ಹಾಗೂ ನಾಗರತ್ನಮ್ಮ ದಂಪತಿ ಮಗನಾಗಿ ವೆಂಕಟೇಶಮೂರ್ತಿ ಜನಿಸಿದ್ದರು. ಹೋದಿಗೆರೆ ಹಾಗೂ ಹೊಳಲ್ಕೆರೆಯಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಬಳಿಕ ಚಿತ್ರದುರ್ಗದಲ್ಲಿ ಕಾಲೇಜು ಸೇರಿದ್ದರು. ಮಲ್ಲಾಡಿ ಹಳ್ಳಿಯ ಫ್ರೌಡಶಾಲೆಯ ಕ್ರಾಫ್ಟ್ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದಿದ್ದರು.

'ಒಣಗಿನ ಮರದ ಗಿಳಿಗಳು', 'ಋತು ವಿಲಾಸ', 'ಸಿಂದಬಾದನ ಆತ್ಮಕಥೆ', 'ವಿಮುಕ್ತಿ', 'ಅಮೇರಿಕಾದಲ್ಲಿ ಬಿಲ್ಲುಹಬ್ಬ', 'ಭೂಮಿಯೂ ಒಂದು ಆಕಾಶ' ವೆಂಕಟೇಶಮೂರ್ತಿ ಬರೆದ ಕೆಲ ಕಾವ್ಯಕೃತಿಗಳು. 'ಬುದ್ಧಚರಣ' ಎಂಬ ಮಹಾಕಾವ್ಯವನ್ನು ರಚಿಸಿದ್ದರು. 'ಕತ್ತಲೆಗೆ ಎಷ್ಟು ಮುಖ', 'ಕಂಸಾಯಣ-ಊರ್ಮಿಳಾ-ಮಂಥರಾ', 'ಒಂದು ಸೈನಿಕ ವೃತ್ತಾಂತ' ಅವರ ಕೆಲ ನಾಟಕಗಳು. ತಾಪಿ, ಪುಟ್ಟಚಾರಿಯ ಮತಾಂತರ ಮತ್ತು ಇತರೆ ಕಥೆಗಳು ಸೇರಿ ಸಾಕಷ್ಟು ಕೃತಿಗಳಿಗೆ ಲೇಖನಿ ಹಿಡಿದಿದ್ದರು.
ಕಿರುತೆರೆ ಹಾಗೂ ಚಿತ್ರರಂಗಕ್ಕೆ ಕೂಡ ಎಚ್ಎಸ್ ವೆಂಕಟೇಶಮೂರ್ತಿ ಕೊಡುಗೆ ನೀಡಿದ್ದಾರೆ. 'ಕೊಟ್ರೇಶಿ ಕನಸು', 'ಚಿನ್ನಾರಿ ಮುತ್ತ', 'ಕ್ರೌರ್ಯ', 'ಮತದಾನ' ಸಿನಿಮಾಗಳಿಗೆ ಸಂಭಾಷಣೆ, ಗೀತಸಾಹಿತ್ಯ ರಚಿಸಿದ್ದರು. ಮೈತ್ರಿ ಚಿತ್ರದ 'ಇದು ಯಾವ ಲೋಕವೋ', ಅಮೆರಿಕಾ ಅಮೆರಿಕಾ ಚಿತ್ರದ 'ಬಾನಲ್ಲಿ ತೇಲೊ ಮೇಘಾ' ಹಾಡುಗಳನ್ನು ಬರೆದಿದ್ದರು. 'ಕಿರಿಕ್ ಪಾರ್ಟಿ' ಚಿತ್ರಕ್ಕಾಗಿ 'ತೂಗು ಮಂಚದಲಿ ಕೂತು', 'ಸಪ್ತಸಾಗರದಾಚೆ ಎಲ್ಲೊ ಸೈಡ್-B' ಚಿತ್ರಕ್ಕಾಗಿ 'ಇರಬೇಕು ಇರುವಂತೆ ತೊರೆದು' ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು.
ಕಿರುತೆರೆಯ 'ಮುಕ್ತ' ಹಾಗೂ 'ಮಹಾಪರ್ವ' ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನು ಎಚ್.ಎಸ್. ವೆಂಕಟೇಶಮೂರ್ತಿ ರಚಿಸಿದ್ದರು. ಇಂದು ಮಧ್ಯಾಹ್ನ 11 ಗಂಟೆಯಿಂದ 2 ಗಂಟೆಯವೆರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಗಣ್ಯರು, ಅಭಿಮಾನಿಗಳು ಹೆಚ್ಎಸ್ವಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಆಪ್ತರು ಹೆಚ್ಎಸ್ವಿಗೆ ನುಡಿ ನಮನ ಸಲ್ಲಿಸಿದ್ದಾರೆ. "ಹಿರಿಯರಾದ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ 15 ವರ್ಷಗಳಿಂದ ಅವರ ಒಡನಾಟದ ಭಾಗ್ಯ ನನಗೆ ಸಿಕ್ಕಿತ್ತು. ಕೊನೆಯ ಗಳಿಗೆಯವರೆಗೂ ಸಾಹಿತ್ಯವನ್ನು ಜಪಿಸುತ್ತಾ, ಸಾಹಿತ್ಯ ರಚಿಸುತ್ತಾ ಇದ್ದ ಅವರ ಚೇತನ ನನಗೆ ಮಾದರಿ. ಕಳೆದ ತಿಂಗಳು ನಾವೊಂದಿಷ್ಟು ಜನ ಗೆಳೆಯರು ಅವರ ಮನೆಗೆ ಹೋಗಿ ಅವರನ್ನು ಮಾತಾಡಿಸಿ, ಪ್ರೀತಿ ತೋರಿಸಿ ಬಂದೆವು. ಸಾಕಷ್ಟು ಕ್ಷೀಣರಾಗಿದ್ದರೂ ಉತ್ಸಾಹದಿಂದಲೇ ತಮ್ಮ ಬದುಕನ್ನು ಕುರಿತು ಮಾತಾಡಿದರು" ಎಂದು ಬರೆದು ಕತೆಗಾರ ವಸುಧೇಂದ್ರ ವಿಡಿಯೋ ಹಂಚಿಕೊಂಡಿದ್ದಾರೆ.
"ನನ್ನ ಧಾರಾವಾಹಿಗಳಿಗೆ ಘನತೆ, ತೇಜಸ್ಸು, ಜನಪ್ರಿಯತೆ ತಂದಕೊಟ್ಟ ಪ್ರೀತಿಯ ಮೇಷ್ಟ್ರು, ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಇನ್ನಿಲ್ಲ. ನನ್ನ ಧಾರಾವಾಹಿಗಳ ಹಾಡುಗಳು ತಬ್ಬಲಿಯಾದವು. ಊರ ಸೇರಬಹುದೇ ನೀನು ದಾರಿ ಮುಗಿಯದೇ...? ಅಂತಿಮ ನಮನಗಳು ಪ್ರೀತಿಯ ಎಚ್ಚೆಸ್ವಿ" ಎಂದು ನಿರ್ದೇಶಕ ಟಿ. ಎನ್ ಸೀತಾರಾಮ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಚ್ಎಸ್ವಿ ಬರೆದ ಹಾಡುಗಳನ್ನು ಮೆಲುಕು ಹಾಕಿದ್ದಾರೆ.
"ಕನ್ನಡ ಸಾರಸ್ವತ ಲೋಕದ ಗ್ರಹಿಕೆಗೆ ನನ್ನನ್ನು ಪರಿಚಯಿಸಿದ.. ನನ್ನ ಕನ್ನಡ ಮೇಷ್ಟ್ರು...ಎಚ್.ಎಸ್.ವಿ. ಇನ್ನಿಲ್ಲ. ಧನ್ಯವಾದಗಳು ಗುರುಗಳೆ .. ನಾನು ನಿಮ್ಮ ಪ್ರೀತಿಯ ವಿದ್ಯಾರ್ಥಿ ಎನ್ನುತ್ತಿದ್ದ ನಿಮ್ಮ ಮಾತುಗಳು ನನ್ನೊಳಗುಳಿದಿದೆ .. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











