ನ್ಯಾಯಾಧೀಶರ ಮುಂದೆ ದರ್ಶನ್, ಪವಿತ್ರಾ ಗೌಡ ಕಣ್ಣೀರು; ಆರೋಪಿಗಳು ಪೊಲೀಸ್ ಕಸ್ಟಡಿಗೆ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಾದ ಆಲಿಸಿ ಬಳಿಕ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು 6 ದಿನ ಪೊಲೀಸ್ ವಶಕ್ಕೆ ನೀಡಿ ನ್ಯಾಯಧೀಶರದಾದ ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1, ನಟ ದರ್ಶನ್ ಎ2 ಆಗಿದ್ದಾರೆ. ಇನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನ್ಯಾಯಧೀಶರ ಮುಂದೆ ಕೈಕಟ್ಟಿ ದರ್ಶನ್ ನಿಂತಿದ್ದರು. ನ್ಯಾಯಾಧೀಶರ ಎದುರು ದರ್ಶನ್ ಹಾಗೂ ಪವಿತ್ರಾ ಗೌಡ ಕಣ್ಣೀರು ಹಾಕಿರುವುದಾಗಿ ವರದಿಯಾಗಿದೆ.

ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಕಳುಹಿಸಿದ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಥಳಿಸಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಪ್ರಕರಣದ ಸಂಬಂಧ 13 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು 14 ದಿನಗಳ ಕಾಲ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಅಪಹರಣ ಹಾಗೂ ಕೊಲೆ ಪ್ರಕರಣದ ಸಂಬಂಧ ಮಹಜರು ಮಾಡಬೇಕು. ಕೊಲೆ ನಡೆದ ಸ್ಥಳ, ಶವ ಎಸೆದ ಸ್ಥಳ ಮಹಜರು ನಡೆಸಬೇಕಿದೆ ಹಾಗಾಗಿ 14 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಆದರೆ ಯಾವುದೇ ಕಸ್ಟಡಿ ಅಗತ್ಯವಿಲ್ಲ ಎಂದು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದರು.
ನಟ ದರ್ಶನ್ ಅವರನ್ನು ನ್ಯಾಯಾಧೀಶರು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದರು. ನಿಮ್ಮನ್ನು ಯಾವಾಗ ಅರೆಸ್ಟ್ ಮಾಡಿದರು? ಎಂದು ಕೇಳಿದ್ದಕ್ಕೆ 3 ಗಂಟೆ ಸುಮಾರಿಗೆ ಅರೆಸ್ಟ್ ಮಾಡಿದರು ಎಂದು ದರ್ಶನ್ ಹೇಳಿದ್ದಾರೆ. ಇನ್ನು ಅರೆಸ್ಟ್ ಬಗ್ಗೆ ಮನೆಯವರಿಗೆ ಮಾಹಿತಿ ಕೊಟ್ರಾ? ಎಂದಿದ್ದಕ್ಕೆ ಹೌದು ಎಂದು ಉತ್ತರಿಸಿದ್ದಾರೆ. ಪೊಲೀಸರು ಏನಾದ್ರೂ ತೊಂದರೆ ಕೊಟ್ರಾ? ಎಂದು ಕೇಳಿದ್ದಕ್ಕೆ ಇಲ್ಲ ಎಂದು ಹೇಳಿದ್ದಾರೆ. ವಕೀಲರನ್ನು ನೇಮಿಸಿಕೊಂಡ್ರಾ? ಎಂದು ಕೂಡ ಕೇಳಿದ್ದಾರೆ ಎಂದು ವರದಿಯಾಗಿದೆ.
ಜೂನ್ 1ರಂದು ಮನೆಯಿಂದ ಹೊರ ಬಂದಿದ್ದ ರೇಣುಕಾಸ್ವಾಮಿ ವಾಪಸ್ ಹೋಗಿರಲಿಲ್ಲ. ಜೂನ್ 10ರಂದು ಕುಟುಂಬ ಸದಸ್ಯರಿಗೆ ಅವರು ಕೊಲೆಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ದರ್ಶನ್ ಅಭಿಮಾನಿಯಾಗಿದ್ದ ರೇಣುಕಾ ಸ್ವಾಮಿ, ಪವಿತ್ರಾ ಗೌಡ ಅವರನ್ನು ದ್ವೇಷಿಸುತ್ತಿದ್ದರು. ಆಕೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯಕ್ಕೆ ಎಂಟ್ರಿ ಕೊಟ್ಟಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡಿದ್ದರು. ಇದೇ ಕಾರಣಕ್ಕೆ ಪವಿತ್ರಾ ಗೌಡ ಪೋಸ್ಟ್ಗಳಿಗೆ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು ಎನ್ನಲಾಗಿದೆ.
ತಮಗೆ ಬರುತ್ತಿದ್ದ ಕೆಟ್ಟ ಕಾಮೆಂಟ್ಸ್, ಮೆಸೇಜ್ ಬಗ್ಗೆ ದರ್ಶನ್ ಬಳಿ ಪವಿತ್ರಾ ಗೌಡ ಹೇಳಿಕೊಂಡಿದ್ದರು. ಹಾಗಾಗಿ ರೇಣುಕಾ ಸ್ವಾಮಿಯನ್ನು ಕರೆತಂದು ಥಳಿಸಿದ್ದು ಈ ವೇಳೆ ಆತನ ಜೀವವೇ ಹೋಗಿದೆ. ಇನ್ನು ದರ್ಶನ್ ಸೂಚನೆಯಂತೆ ಆರೋಪಿಗಳು ರೇಣುಕಾಸ್ವಾಮಿಯನ್ನು ಕರೆತಂದು ಒಂದು ಶೆಡ್ನಲ್ಲಿ ಕೂಡಿ ಹಾಕಿದ್ದರು. ಅಲ್ಲೇ ಮನಸೋ ಇಚ್ಛೆ ಥಳಿಸಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಆತನ ಜೀವ ಹೋದ ಬಳಿಕ ಸುಮನಹಳ್ಳಿ ರಿಂಗ್ ರೋಡ್ ಬಳಿ ಶವ ಎಸೆಯಲಾಗಿತ್ತು.


Click it and Unblock the Notifications










