ರೇಣುಕಾಸ್ವಾಮಿ ಪ್ರಕರಣ; ದರ್ಶನ್, ಪವಿತ್ರಾ ಸೇರಿ 7 ಜನ ಆರೋಪಿಗಳಿಗೆ ಬಿಗ್ ರಿಲೀಫ್
ಭಾರೀ ಚರ್ಚೆ ಹುಟ್ಟಾಕ್ಕಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 7 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಬರೋಬ್ಬರಿ 6 ತಿಂಗಳ ಬಳಿಕ ಪ್ರಕರಣದಲ್ಲಿ ದರ್ಶನ್ ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಮಧ್ಯಂತರ ಜಾಮೀನು ಪಡೆದು ದರ್ಶನ್ ಜೈಲಿನಿಂದ ಹೊರಬಂದಿದ್ದರು. ಇದೀಗ ಪೂರ್ಣಪ್ರಮಾಣದಲ್ಲಿ ಜಾಮೀನು ಸಿಕ್ಕಿದೆ.
ಪ್ರಕರಣದಲ್ಲಿ ನಟ ದರ್ಶನ್ ಎ2 ಆಗಿದ್ದರೆ ಪವಿತ್ರಾ ಗೌಡ ಎ1 ಆಗಿದ್ದರು. ಇದೀಗ ಇಬ್ಬರಿಗೂ ಜಾಮೀನು ಸಿಕ್ಕಿದೆ. ಜೂನ್ 8ರಂದು ರೇಣುಕಾಸ್ವಾಮಿ ಸಾವನ್ನಪ್ಪಿದ್ದರು. ಬಳಿಕ ಪ್ರಕರಣದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಂತರ ವಿಚಾರಣಾಧೀನ ಕೈದಿಗಳಾಗಿ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಗೊತ್ತಾದ ಬಳಿಕ ಕೆಲವರನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಆರೋಪಿಗಳೆಲ್ಲಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿ ಇದೀಗ 7 ಜನರಿಗೆ ಜಾಮೀನು ಮಂಜೂರಾಗಿದೆ.
ಒಟ್ಟು 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅದರಲ್ಲಿ ನಾಲ್ವರಿಗೆ ಈ ಹಿಂದೆಯೇ ಬೇಲ್ ಸಿಕ್ಕಿತ್ತು. ಇದೀಗ ನಟ ದರ್ಶನ್, ನಟಿ ಪವಿತ್ರಾ ಗೌಡ, ನಟ ಪ್ರದೋಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಜಗದೀಶ್ ಬೇಲ್ ಪಡೆದಿದ್ದಾರೆ. ಒಟ್ಟಾರೆ 11 ಜನರಿಗೆ ಪ್ರಕರಣದಲ್ಲಿ ರಿಲೀಫ್ ಸಿಕ್ಕಂತಾಗಿದೆ. ನಟ ದರ್ಶನ್ ಪರ ಹಿರಿಯ ವಕೀಲ ಕೆ. ವಿ ನಾಗೇಶ್ ವಾದ ಮಾಡಿದ್ದರು. ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಇದೀಗ ಆರೋಪಿಗಳಿಗೆ ಜಾಮೀನು ಮಂಜೂರು ಆದೇಶ ಹೊರಡಿಸಿದ್ದಾರೆ.
ಬೇಲ್ ಆದೇಶದ ಪ್ರತಿ ಸೆಷನ್ ಕೋರ್ಟ್ಗೆ ತಲುಪಬೇಕು. ಬಳಿಕ ಆರೋಪಿಗಳ ಬಿಡುಗಡೆ ಪ್ರಕ್ರಿಯೆ ಶುರುವಾಗುತ್ತದೆ. ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸೆಷನ್ ಕೋರ್ಟ್ನಲ್ಲಿ ಪೈರೈಸಿದ ಬಳಿಕ ಎಲ್ಲರೂ ಹೊರ ಬರುತ್ತಾರೆ. ತಲಾ ಇಬ್ಬರು ಶ್ಯೂರಿಟಿಯನ್ನು ನೀಡಬೇಕಿದೆ. ಇಂದು ಸಾಧ್ಯವಾಗದೇ ಇದ್ದರೆ ಸೋಮವಾರ ಜಾಮೀನು ಪಡೆದ ಎಲ್ಲರೂ ಜೈಲಿನಿಂದ ಬಿಡುಗಡೆ ಆಗಿ ಹೊರ ಬರುವ ನಿರೀಕ್ಷೆಯಿದೆ.
ಬೇಲ್ ಸಿಕ್ಕ ವಿಚಾರ ಗೊತ್ತಾಗುತ್ತಿದ್ದಂತೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಣ್ಣೀರಾಗಿದ್ದಾರೆ. ಸಂತೋಷದಿಂದ ಆನಂದಭಾಷ್ಪ ಸುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ದರ್ಶನ್ಗೆ ಜಾಮೀನು ಸಿಕ್ಕ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಗೌಡ ಪಾತ್ರ ಏನಿದೆ ಎನ್ನುವ ಆಧಾರದಲ್ಲಿ ಜಾಮೀನು ಸಿಕ್ಕಿದೆ ಎಂದಿದ್ದಾರೆ.
ಪ್ರಕರಣದಲ್ಲಿ ಪತಿ ದರ್ಶನ್ಗೆ ಜಾಮೀನು ಸಿಕ್ಕಿರುವ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ. ದೇವರ ಮುಂದೆ ಹೂವು ಹಿಡಿದ ಫೋಟೊ ಹಾಕಿ ದೇವರ ನಾಮಸ್ಮರಣೆಯನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











