ರೇಣುಕಾಸ್ವಾಮಿ ಪ್ರಕರಣ; ನಟ ದರ್ಶನ್ಗೆ ಹೈಕೋರ್ಟ್ ಮತ್ತೆ ರಿಲೀಫ್
ನಟ ದರ್ಶನ್ಗೆ ಮತ್ತೆ ಸಣ್ಣ ರಿಲೀಫ್ ಸಿಕ್ಕಂತಾಗಿದೆ. 6 ವಾರಗಳ ಹಿಂದೆ ಮಧ್ಯಂತರ ಜಾಮೀನು ಪಡೆದು ದರ್ಶನ್ ಬಳ್ಳಾರಿ ಜೈಲಿನಿಂದ ಬಂದಿದ್ದರು. ಮಧ್ಯಂತರ ಜಾಮೀನು ಅವಧಿ ಮುಕ್ತಾಯದ ಹಂತ ತಲುಪಿದೆ. ಇದರ ಬೆನ್ನಲ್ಲೇ ದರ್ಶನ್ ಮತ್ತೆ ಜೈಲು ಸೇರುತ್ತಾರಾ? ಎನ್ನುವ ಕುತೂಹಲ ಮೂಡಿತ್ತು.
ಇದೀಗ ನಟ ದರ್ಶನ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಮತ್ತಷ್ಟು ರಿಲೀಫ್ ಸಿಕ್ಕಂತಾಗಿದೆ. ಹೈಕೋರ್ಟ್ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಎಸ್ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲರಾದ ಕೆ. ವಿ ನಾಗೇಶ್ ತಮ್ಮ ವಾದವನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ದರು.

ಮುಂದಿನ ದಿನಾಂಕದವರೆಗೂ ನಟ ದರ್ಶನ್ ಮಧ್ಯಂತರ ಜಾಮೀನು ವಿಸ್ತರಣೆಯಾಗಿದೆ. ಹಾಗಾಗಿ ಮತ್ತಷ್ಟು ದಿನ ದರ್ಶನ್ ಜೈಲಿಗೆ ಹೋಗದೇ ಹೊರಗೆ ಇರಲು ಅವಕಾಶ ಸಿಕ್ಕಂತಾಗಿದೆ. ಕೋರ್ಟ್ ಆದೇಶದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ. ಬೆನ್ನುನೋವಿನಿಂದ ನಟ ದರ್ಶನ್ ಬಳಲುತ್ತಿದ್ದಾರೆ. ಕೂಡಲೇ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಬೇಕು, ಅದಕ್ಕೆ ಅವಕಾಶ ಬೇಕು ಎಂದು ಮಧ್ಯಂತರ ಜಾಮೀನು ಪಡೆಯಲಾಗಿತ್ತು.
ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದರೂ ಇನ್ನು ಯಾಕೆ ಶಸ್ತ್ರಚಿಕಿತ್ಸೆ ನಡೆದಿಲ್ಲ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಆದರೆ ಶಸ್ತ್ರ ಚಿಕಿತ್ಸೆಗೆ ಇನ್ನು ಸಮಯ ಬೇಕು, ವೈದ್ಯರು ಅದನ್ನು ತೀರ್ಮಾನಿಸುತ್ತಾರೆ ಎಂದು ನಾಗೇಶ್ ವಾದ ಮುಂದಿಟ್ಟಿದ್ದರು. ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿರುವ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಯಾಕೆ ದರ್ಶನ್ಗೆ ಸರ್ಜರಿ ಆಗಲಿಲ್ಲ ಎನ್ನುವುದನ್ನೇ ಅಸ್ತ್ರವಾಗಿಟ್ಟುಕೊಂಡು ಎಸ್ಪಿಪಿ ವಾದ ಆರಂಭಿಸಿದ್ದರು. ಮಧ್ಯಂತರ ಬೇಲ್ ವಿಸ್ತರಣೆ ಮಾಡಬೇಡಿ ಎಂದು ಕೋರ್ಟ್ನಲ್ಲಿ ಮನವಿ ಮಾಡಿದ್ದರು. ದರ್ಶನ್ಗೆ ಡಿಸೆಂಬರ್ 11ರಂದು ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಿ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಅದಕ್ಕೆ ಒಪ್ಪಿ ಕೋರ್ಟ್ ಮಧ್ಯಂತರ ಜಾಮೀನು ವಿಸ್ತರಿಸಿ ಆದೇಶ ಹೊರಡಿಸಿದೆ.
ಮೆಡಿಕಲ್ ಬೇಲ್ ಜೊತೆ ಜೊತೆಗೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೂಡ ನಡೀತಿತ್ತು. ಸದ್ಯ ರೆಗ್ಯುಲರ್ ಬೇಲ್ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ. ಆ ಬೇಲ್ ಆದೇಶ ಹೊರಬರುವರೆಗೂ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಆಗುವ ಸಾಧ್ಯತೆಯಿದೆ. ಒಟ್ಟಾರೆ ಡಿಸೆಂಬರ್ 12ರಂದೇ ದರ್ಶನ್ ಮತ್ತೆ ಜೈಲಿಗೆ ಹೋಗುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಅದಕ್ಕೆ ಬ್ರೇಕ್ ಬಿದ್ದಂತಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೂನ್ 11ರಂದು ನಟ ದರ್ಶನ್ ಬಂಧನವಾಗಿತ್ತು. ಬಳಿಕ ವಿಚಾರಣೆ ನಡೆದು ದರ್ಶನ್ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಗೊತ್ತಾದ ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದರು. ಮಧ್ಯಂತರ ಜಾಮೀನು ಪಡೆದು ಅಕ್ಟೋಬರ್ 30ರಂದು ದರ್ಶನ್ ಬಿಡುಗಡೆ ಆಗಿದ್ದರು.


Click it and Unblock the Notifications











