ನಟ ದರ್ಶನ್ ಅಭಿಮಾನಿ ಆಗಿರಲೇ ಇಲ್ಲ ಮೃತ ರೇಣುಕಾಸ್ವಾಮಿ!
ಕಳೆದ ವರ್ಷ ಪಟ್ಟಣಗೆರೆ ಶೆಡ್ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದು ಹೋಗಿತ್ತು. ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿ 7 ಮಂದಿ ಆರೋಪಿಗಳು ಈಗ ಮತ್ತೆ ಜೈಲು ಸೇರುವಂತಾಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದೇ ಇದಕ್ಕೆಲ್ಲಾ ಕಾರಣ ಎನ್ನುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಇನ್ನು ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿಯಾಗಿದ್ದ ಎಂದು ಹೇಳಲಾಗಿತ್ತು.
ನಟಿ ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಬಳಿಕ ವಾಟ್ಸಪ್ ಚಾಟ್ ಕೂಡ ಮಾಡುತ್ತಿದ್ದ. ಆದರೆ ಅತ್ತ ಪವಿತ್ರಾ ಗೌಡ ಹೆಸರಿನಲ್ಲಿ ಆಕೆಯ ಆಪ್ತ ಪವನ್ ಚಾಟ್ ಮಾಡಿದ್ದ. ಇದೇ ವೇಳೆ ರೇಣುಕಾಸ್ವಾಮಿ ತನ್ನ ಮರ್ಮಾಂಗ ಫೋಟೊ ಕಳುಹಿಸಿ, ಕೆಟ್ಟದಾಗಿ ಮಸೇಜ್ ಕಳಿಸಿದ್ದ. ಈ ವಿಚಾರವನ್ನು ದರ್ಶನ್ ಗಮನಕ್ಕೆ ಪವಿತ್ರಾ ಗೌಡ ತಂದಿದ್ದರು. ಹಾಗಾಗಿ ಆತನಿಗೆ ದರ್ಶನ್ ಬುದ್ಧಿ ಕಲಿಸಲು ಮುಂದಾಗಿದ್ದರು. ಆಪ್ತರ ಮೂಲಕ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ನಗರದ ಪಟ್ಟಣಗೆರೆ ಶೆಡ್ಗೆ ಕರೆತಂದಿದ್ದರು. ಚಿತ್ರ ಹಿಂಸೆ ಕೊಟ್ಟಿದ್ದರು, ಈ ವೇಳೆ ಆತನ ಪ್ರಾಣವೇ ಹೋಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣ ಬಯಲಿಗೆ ಬಂದಾಗ ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿಯಾಗಿದ್ದ ಎಂದು ವರದಿಯಾಗಿತ್ತು. ದರ್ಶನ್ ತನ್ನ ನೆಚ್ಚಿನ ನಟ, ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಜೀವನ ಚೆನ್ನಾಗಿರಬೇಕು. ಇಬ್ಬರ ನಡುವೆ ಪವಿತ್ರಾ ಗೌಡ ಬರುತ್ತಿದ್ದಾಳೆ, ಅದು ಸರಿಯಲ್ಲ ಎಂದು ರೇಣುಕಾಸ್ವಾಮಿ ಬಯಸಿದ್ದನಂತೆ. ಅದೇ ಕಾರಣಕ್ಕೆ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿ ನಿಂದಿಸುತ್ತಿದ್ದ, ಅದೇ ಆತನ ಜೀವಕ್ಕೆ ಕುತ್ತು ತಂದಿತ್ತು ಎಂದು ಕೂಡ ಹೇಳಲಾಗಿತ್ತು. ಆದರೆ ರೇಣುಕಾಸ್ವಾಮಿ ಸಿನಿಮಾಗಳನ್ನೇ ನೋಡುತ್ತಿರಲಿಲ್ಲ, ಆತ ದರ್ಶನ್ ಅಭಿಮಾನಿ ಆಗಿರಲೇ ಇಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಿರುವುದು ಈಗ ವೈರಲ್ ಆಗ್ತಿದೆ.
ಮಾಧ್ಯಮಗಳ ಸುದ್ದಿ ಆಧರಿಸಿ ನಟಿ ರಮ್ಯಾ ಕೂಡ ಮೃತ ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿ ಆಗಿದ್ದರು ಎಂದು ಹೇಳುತ್ತಾ ಬರ್ತಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗೆ ಎಂತಹ ಶಿಕ್ಷೆ ಕೊಟ್ಟುಬಿಟ್ಟರು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ರೇಣುಕಾಸ್ವಾಮಿ, ದರ್ಶನ್ ಅಭಿಮಾನಿ ಆಗಿರಲಿಲ್ಲ ಎಂದು ಆತನ ಕುಟುಂಬ ಸದಸ್ಯರು ಹೇಳಿರುವುದನ್ನು ಈಗ ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಈ ಹಿಂದೆ ರೇಣುಕಾಸ್ವಾಮಿ ನಿವಾಸಕ್ಕೆ ಪತ್ರಕರ್ತೆ ಭಾವನಾ ಬೆಳಗೆರೆ ಭೇಟಿ ನೀಡಿದ್ದರು. ಆಗ ರೇಣುಕಾಸ್ವಾಮಿ ಪತ್ನಿ ಸಹನಾ ಈ ಬಗ್ಗೆ ಮಾತನಾಡಿದ್ದರು.
ದರ್ಶನ್ ಅಭಿಮಾನಿ ಅಂತೆ ರೇಣುಕಾಸ್ವಾಮಿ, ಮನೆಯಲ್ಲಿ ದರ್ಶನ್ ಫೋಟೊ ಎಲ್ಲಾ ಹಾಕಿಕೊಂಡಿದ್ದಾರಂತೆ ಎನ್ನುವ ಪ್ರಶ್ನೆಗೆ ಸಹನಾ ಮಾತನಾಡಿ "ಇಲ್ಲ.. ಆ ತರ ಏನು ಇಲ್ಲ. ದರ್ಶನ್ ಅಭಿಮಾನಿ ಅಲ್ಲ" ಎಂದಿದ್ದಾರೆ. ಕರ್ನಾಟಕ ಟಿವಿ ಯೂಟ್ಯೂಬ್ ಸಂದರ್ಶನದಲ್ಲಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾತನಾಡಿದ್ದರು. "ಇಲ್ಲ ಸರ್. ಅವನು ಅಭಿಮಾನಿ ಅಲ್ಲ" ಎಂದು ಪ್ರತಿಕ್ರಿಯಿಸಿದ್ದರು. ತಂದೆ ಕಾಶಿನಾಥಯ್ಯ ಮಾತನಾಡಿ "ನಾವು 40 ವರ್ಷದಿಂದ ಚಿತ್ರಮಂದಿರಕ್ಕೆ ಹೋದವರಲ್ಲ. ನಮ್ಮ ಮನೆಯ ಟಿವಿಯಲ್ಲಿ ಧಾರಾವಾಹಿ, ದೇವರ ಹಾಡು ಹಾಕುತ್ತಿದ್ದೆವು. ರೇಣುಕಾಸ್ವಾಮಿಗೆ ಕ್ರಿಕೆಟ್ ನೋಡುವ ಅಭ್ಯಾಸ ಇತ್ತು. ಅದು ಬಿಟ್ಟು ಸಿನ್ಮಾ ನೋಡುತ್ತಿರಲಿಲ್ಲ. ಹಾಗಿದ್ದಾಗ ದರ್ಶನ್ ಅಭಿಮಾನಿ ಎನ್ನುವುದು ಹೇಗೆ?" ಎಂದು ಹೇಳಿದ್ದರು.
ಒಟ್ಟಾರೆ ರೇಣುಕಾಸ್ವಾಮಿ ಸುಮ್ಮನಿರದೇ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದೇ ಜೀವಕ್ಕೆ ಕುತ್ತು ತಂದು ಬಿಡ್ತು. ದರ್ಶನ್ ಕೂಡ ಈ ವಿಚಾರವನ್ನು ಬೇರೆ ರೀತಿ ನಿಭಾಯಿಸಬಹುದಿತ್ತು. ದರ್ಶನ್ ಹಾಗೂ ಪವಿತ್ರಾ ಗೌಡ ಪೊಲೀಸರಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ಎನ್ನುವುದು ಬಹುತೇಕ ಅಭಿಪ್ರಾಯ.


Click it and Unblock the Notifications











