ಫೋನ್ ನಂಬರ್ ಕೊಡುವಂತೆ ಕೋರ್ಟ್ ಲಿಫ್ಟ್ನಲ್ಲಿ ದರ್ಶನ್ ಬಳಿ ಪವಿತ್ರಾ ಗೌಡ ಪಟ್ಟು!
ಇಂದು(ಮೇ 20) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಪ್ರಕರಣದ ಎ1 ಪವಿತ್ರಾ ಗೌಡ ಹಾಗೂ ಎ2 ದರ್ಶನ್ ಸೇರಿ 17 ಜನ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಗೆ ಬರುವಾಗ ಫೋನ್ ನಂಬರ್ ಕೊಡುವಂತೆ ದರ್ಶನ್ ಅವರಿಗೆ ಪವಿತ್ರಾ ಗೌಡ ದುಂಬಾಲು ಬಿದ್ದಿದ್ದರು ಎಂದು ವರದಿಯಾಗಿದೆ.
ಕಳೆದ ಬಾರಿ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣೆಗೆ ಹಾಜರಾಗಿದ್ದ ವೇಳೆ ಒಬ್ಬರ ಮುಖ ಒಬ್ಬರು ನೋಡಿರಲಿಲ್ಲ ಎಂದು ಹೇಳಲಾಗಿತ್ತು. ಈ ಬಾರಿ ಕೂಡ ಕೋರ್ಟ್ ಒಳಗೆ ಇಬ್ಬರ ನಡುವೆ ಯಾವುದೇ ಸಂಭಾಷಣೆ ನಡೆಯಲಿಲ್ಲ. ಆದರೆ ನಾಲ್ಕನೇ ಮಹಡಿಯ ಕೋರ್ಟ್ನಿಂದ ಕೆಳಗೆ ಇಳಿದು ಬರುವಾಗ ಇಬ್ಬರು ಒಮ್ಮೆಲೆ ಲಿಫ್ಟ್ನಲ್ಲಿ ಇಳಿದು ಕೆಳಗೆ ಬಂದಿದ್ದು ಈ ವೇಳೆ ಫೋನ್ ನಂಬರ್ ಕೊಡುವಂತೆ ಪವಿತ್ರಾ ಗೌಡ ಕೇಳಿದ್ದಾರೆ.

ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದಾಗಲೇ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆರೋಗ್ಯ ನೆಪವೊಡ್ಡಿ ಮೊದಲಿಗೆ ದರ್ಶನ್ ಮಧ್ಯಂತರ ಜಾಮೀನು ಪಡೆದು ಬಂದಿದ್ದರು. ಬಳಿಕ ಜಾಮೀನು ಸಹ ಸಿಕ್ಕಿತ್ತು. ಇನ್ನು ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದರು.
ಕಳೆದೆರಡು ತಿಂಗಳಿನಿಂದ ದರ್ಶನ್ ಓಡಾಟ ಶುರು ಮಾಡಿದ್ದಾರೆ. ಇನ್ನು ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಸಂಪರ್ಕ ಇರಲಿಲ್ಲ ಎನ್ನಲಾಗಿತ್ತು. ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಪವಿತ್ರಾ ಗೌಡ ದೇವಸ್ಥಾನಗಳಿಗೆ ಭೇಟಿ ನೀಡುವುದರ ಜೊತೆಗೆ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ತಮ್ಮ ಬ್ಯೂಟಿಕ್ ಅನ್ನು ಪುನರಾರಂಭ ಮಾಡಿದ್ದಾರೆ. ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಪದೇ ಪದೆ ಪೋಸ್ಟ್ ಮಾಡುತ್ತಿರುತ್ತಾರೆ.
ಅತ್ತ ದರ್ಶನ್ ಪತ್ನಿ ಹಾಗೂ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ರಾಜಸ್ಥಾನದಲ್ಲಿ ನಡೆದ ಸಿನಿಮಾ ಚಿತ್ರೀಕರಣಕ್ಕೆ ಪತ್ನಿ ಸಮೇತರಾಗಿ ಹೋಗಿದ್ದರು. ನಿನ್ನೆಯಷ್ಟೆ 22 ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದರು. ಖಾಸಗಿ ಹೋಟೆಲ್ನಲ್ಲಿ ಕೇಕ್ ಕತ್ತರಿಸಿ ಹಾಡು ಹಾಡಿ, ಪತ್ನಿ ಜೊತೆ ಕುಣಿದು ಎಂಜಾಯ್ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ.
ಕೋರ್ಟ್ನಿಂದ ಹೊರ ಬರುವಾಗ ಒಮ್ಮೆ ಪವಿತ್ರಾ ಗೌಡ, ದರ್ಶನ್ ಅವರ ಕೈ ಹಿಡಿದುಕೊಂಡಿದ್ದರು ಎಂದು ಕೂಡ ಹೇಳಲಾಗ್ತಿದೆ. ಇದೆಲ್ಲದರ ನಡುವೆ ಲಿಫ್ಟ್ನಲ್ಲೇ ದುಂಬಾಲು ಬಿದ್ದು ದರ್ಶನ್ ಅವರ ಫೋನ್ ನಂಬರ್ ಅನ್ನು ಪವಿತ್ರಾ ಗೌಡ ಪಡೆದುಕೊಂಡಿದ್ದಾರೆ ಎಂದು ಟಿವಿ-9 ಕನ್ನಡ ವಾಹಿನಿ ವರದಿ ಮಾಡಿದೆ. ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದರ್ಶನ್ ಎಲ್ಲಾ ಆರೋಪಿಗಳ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಜೈಲಿನಿಂದ ದರ್ಶನ್ ಜಾಮೀನು ಪಡೆದು ಹೊರಬಂದಮೇಲೆ ಬೇರೆ ಫೋನ್ ನಂಬರ್ ಬಳಸುತ್ತಿದ್ದಾರೆ ಎನ್ನಲಾಗ್ತಿದೆ. ಇಬ್ಬರ ಭೇಟಿ ಕೂಡ ನಡೆದಿರಲಿಲ್ಲ. ಹಾಗಾಗಿ ದರ್ಶನ್ ಅವರನ್ನು ಪವಿತ್ರಾ ಗೌಡ ಸಂಪರ್ಕಿಸಲು ಅಥವಾ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಊಹಾಪೋಹ ಇತ್ತು. ಇದೀಗ ಕೋರ್ಟ್ ಲಿಫ್ಟ್ನಲ್ಲಿ ಫೋನ್ ಪಡೆದುಕೊಂಡಿದ್ದಾರೆ ಅಂದ್ರೆ ಅದು ಎನ್ನವುದು ಗೊತ್ತಾಗುತ್ತಿದೆ. ವರ್ಷದ ಹಿಂದೆ ರೇಣುಕಾಸ್ವಾಮಿ ಪ್ರಕರಣ ಭಾರೀ ಸದ್ದು ಮಾಡಿತ್ತು.
ದರ್ಶನ್- ಪವಿತ್ರಾ ಗೌಡ ರಿಲೇಷನ್ಶಿಪ್
22 ವರ್ಷಗಳ ಹಿಂದೆ ವಿಜಯಲಕ್ಷ್ಮಿ ಅವರನ್ನು ದರ್ಶನ್ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾರೆ. 'ಜಗ್ಗುದಾದ' ಚಿತ್ರಕ್ಕೆ ಪವಿತ್ರಾ ಗೌಡ ಆಡಿಷನ್ ಕೊಡಲು ಹೋಗಿದ್ದ ಸಮಯದಲ್ಲಿ ದರ್ಶನ್ ಜೊತೆ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ದರ್ಶನ್ ಜೊತೆಗೆ ರಿಲೇಷನ್ಶಿಪ್ ಶುರುವಾಯಿತು ಎನ್ನಲಾಗುತ್ತದೆ. ಅದಾಗಲೇ ಸಂಜಯ್ ಸಿಂಗ್ ಎಂಬುವವರನ್ನು ಪವಿತ್ರಾ ಗೌಡ ಪ್ರೀತಿಸಿ ಮದುವೆ ಆಗಿ ಡಿವೋರ್ಸ್ ಪಡೆದಿದ್ದರು.
ಎರಡ್ಮೂರು ಸಿನಿಮಾಗಳಲ್ಲಿ ಕೂಡ ಪವಿತ್ರಾ ಗೌಡ ನಟಿಸಿದ್ದಾರೆ. ನಮ್ಮಿಬ್ಬರ ರಿಲೇಷನ್ಶಿಪ್ಗೆ 10 ವರ್ಷ ಎಂದು ಕೆಲ ದಿನಗಳ ಹಿಂದೆಯೇ ಪವಿತ್ರಾ ಗೌಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ದರ್ಶನ್ ಜೊತೆಗಿನ ಒಂದಷ್ಟು ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಇದಕ್ಕೆ ವಿಜಯಲಕ್ಷ್ಮಿ ಗರಂ ಆಗಿ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಇದೇ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಏಟು ಎದಿರೇಟು ನಡೆದಿತ್ತು.
ರೇಣುಕಾಸ್ವಾಮಿ ಪ್ರಕರಣ
ಪವಿತ್ರಾ ಗೌಡ ಪೋಸ್ಟ್ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಆತನಿಗೆ ಬುದ್ಧಿ ಕಲಿಸಲು ಆತನ ಫೋನ್ ನಂಬರ್ ತೆಗೆದುಕೊಂಡು ಪವಿತ್ರಾ ಗೌಡ ಹೆಸರಿನಲ್ಲಿ ಆಕೆಯ ಬಳಿ ಕೆಲಸ ಮಾಡಿಕೊಂಡಿದ್ದ ಪವನ್ ಎಂಬಾತ ಚಾಟ್ ಮಾಡುತ್ತಿದ್ದ. ಪವಿತ್ರಾ ಗೌಡ ಎಂದುಕೊಂಡು ರೇಣುಕಾಸ್ವಾಮಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಆತನಿಗೆ ಬುದ್ಧಿ ಕಲಿಸಲು ಆಕೆ ಮುಂದಾಗಿದ್ದರು.
ದರ್ಶನ್ಗೆ ರೇಣುಕಾಸ್ವಾಮಿ ವಿಚಾರ ತಿಳಿಸಿ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದರು. ವಿಷಯ ಗೊತ್ತಾದ ಬಳಿಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ತಾಕೀತು ಮಾಡಲು ಪ್ರಯತ್ನಿಸಿದ್ದರು. ತಮ್ಮ ಆಪ್ತರ ಮೂಲಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ಥಳಿಸಿದ್ದರು. ಆತನಿಗೆ ಚಿತ್ರಹಿಂಸೆ ಕೊಟ್ಟು ಬುದ್ದಿ ಹೇಳಲು ಪ್ರಯತ್ನಿಸಿದ್ದಾಗ ಆತನ ಜೀವ ಹೋಗಿತ್ತು ಎಂದು ವರದಿ ಆಗಿತ್ತು.
ದರ್ಶನ್ ಬಂಧನ
ಕಳೆದ ವರ್ಷ ಜೂನ್ 8ರಂದು ರೇಣುಕಾಸ್ವಾಮಿ ಸಾವನ್ನಪ್ಪಿದ್ದನು. ಮರುದಿನ ಆತನ ಶವ ಸುಮನಹಳ್ಳಿ ರಿಂಗ್ ರೋಡ್ ಬಳಿ ಸಿಕ್ಕಿತ್ತು. ಪೊಲೀಸರ ವಿಚಾರಣೆಯಲ್ಲಿ ಸಾವಿಗೆ ಅಸಲಿ ಕಾರಣ ಗೊತ್ತಾಗಿತ್ತು. ಪ್ರಕರಣ ಸಂಬಂಧ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೂನ್ 11ರಂದು ಮೈಸೂರಿನ ಹೋಟೆಲ್ವೊಂದರಲ್ಲಿ ಬೀಡು ಬಿಟ್ಟಿದ್ದ ದರ್ಶನ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿ ಕರೆತಂದಿದ್ದರು.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಹಾಜರಿಪಡಿಸಿದ್ದರು. 14 ದಿನಗಳ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಜೂನ್ 22ರಂದು ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಆರೋಪಿಗಳು ಹಾಜರಾಗುತ್ತಿದ್ದರು. ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಆಗುತ್ತಿತ್ತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವುದು ಗೊತ್ತಾದ ಬಳಿಕ ಆರೋಪಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ದರ್ಶನ್ನ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಸೆಪ್ಟೆಂಬರ್ 3ರಂದು ತನಿಖಾಧಿಕಾರಿಗಳು ಪ್ರಕರಣದ ಚಾರ್ಜ್ಶೀಟ್ ಸಲ್ಲಿಸಿದ್ದರು. ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿತ್ತು.
ಅಕ್ಟೋಬರ್ 29ರಂದು ಮಧ್ಯಂತರ ಜಾಮೀನು ಸಿಕ್ಕಿ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ವಾಪಸ್ ಬಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಬಳಿಕ ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದರು. ನಿಧಾನವಾಗಿ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ.


Click it and Unblock the Notifications











