ಕರುನಾಡಿನ ಕ್ಷಮೆ ಕೇಳುತ್ತಾರಾ ನಟ ದರ್ಶನ್?
ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗರ ರಿಲೀಫ್ ಸಿಕ್ಕಿದೆ. ಜಾಮೀನು ಪಡೆದು ದರ್ಶನ್ ನಿರಾಳರಾಗಿದ್ದಾರೆ. ಬೆನ್ನು ನೋವಿನಿಂದ ಆಸ್ಪತ್ರೆ ಸೇರಿ ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ದರ್ಶನ್ ಇದೀಗ ಮನೆಗೆ ವಾಪಸ್ ಆಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಜೈಲಿನಿಂದ ಹೊರ ಬಂದಿರುವುದಕ್ಕೆ ಆಪ್ತರು, ಅಭಿಮಾನಿಗಳು ಖುಷಿಯಾಗಿದ್ದಾರೆ. ಶೀಘ್ರದಲ್ಲೇ ದರ್ಶನ್ ಚೇತರಿಸಿಕೊಂಡು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ನಟ ದರ್ಶನ್ ಬೆನ್ನು ನೋವಿನಿಂದ ಇನ್ನು ಬಳಲುತ್ತಿದ್ದಾರೆ. ಮೊನ್ನೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ದರ್ಶನ್ ತಮ್ಮ ಪುತ್ರನ ಸಹಾಯದೊಂದಿಗೆ ಹೊರಗೆ ಬಂದು ಕಾರ್ ಏರಿ ಮನೆ ತಲುಪಿದ್ದರು. ಆದಷ್ಟು ಬೇಗ ಚೇತರಿಸಿಕೊಳ್ಳಿ ಬಾಸ್ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕೆಲ ದಿನಗಳಲ್ಲೇ ಎಲ್ಲಾ ತಣ್ಣಗಾಗುತ್ತದೆ ಎಂದು ಭಾವಿಸಿದ್ದಾರೆ.
ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದು ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದರು. ಬಳಿಕ ಇತ್ತೀಚೆಗೆ ರೆಗ್ಯುಲರ್ ಜಾಮೀನು ಸಹ ಸಿಕ್ಕಿದೆ. ಆದರೆ ಪೊಲೀಸರು ನಟ ದರ್ಶನ್ಗೆ ಸಿಕ್ಕಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ ದರ್ಶನ್ಗೆ ಇನ್ನು ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಚರ್ಚೆ ನಡೀತಿದೆ.

ದರ್ಶನ್ ಜಾಮೀನು ಪಡೆದು ಹೊರ ಬಂದ ಬಳಿಕ ನಾಡಿನ ಜನತೆ ಕ್ಷಮೆ ಕೇಳುತ್ತಾರಾ? ತಮ್ಮ ಅಭಿಮಾನಿಗಳ ಕ್ಷಮೆ ಕೇಳುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಯಾಕಂದ್ರೆ ಈ ಹಿಂದೆ ತಪ್ಪು ಮಾಡಿದಾಗಲೆಲ್ಲಾ ಅದರ ಅರಿವಾಗಿ ದರ್ಶನ್ ಒಂದು ಹೆಜ್ಜೆ ಇಳಿದು ಬಂದಿದ್ದರು. ಗೊತ್ತಿಲ್ಲದೇ ತಪ್ಪಾಯಿತು ಕ್ಷಮಿಸಿಬಿಡಿ ಎಂದಿದ್ದರು. ಈ ಬಾರಿ ಕೂಡ ಅದೇ ಪುನರಾವರ್ತನೆ ಆಗುತ್ತಾ? ಕಾದು ನೋಡಬೇಕಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪಾತ್ರ ಎಷ್ಟರಮಟ್ಟಿಗೆ ಇದೆ ಎನ್ನುವುದರ ಬಗ್ಗೆ ಇನ್ನು ತನಿಖೆ ನಡೀತಿದೆ. ಯಾವುದು ಸರಿ? ಯಾವುದು ತಪ್ಪು ಎನ್ನುವುದು ಕೋರ್ಟ್ ತೀರ್ಪಿನಲ್ಲಿ ಗೊತ್ತಾಗುತ್ತದೆ. ಆದರೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ತಂದು ಬುದ್ಧಿಕಲಿಸಲು ದರ್ಶನ್ ಮುಂದಾಗಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಹಾಗೂ ಚಾರ್ಜ್ಶೀಟ್ನಲ್ಲಿ ಈ ಬಗ್ಗೆ ದರ್ಶನ್ ಹೇಳಿರುವುದನ್ನು ದಾಖಲಿಸಲಾಗಿದೆ.
ಪ್ರಕರಣದಲ್ಲಿ ದರ್ಶನ್ ಕಡೆಯಿಂದ ತಪ್ಪು ಆಗಿರುವುದಂತೂ ನಿಜ. ಆದರೆ ಅದರ ಪ್ರಮಾಣ ಎಷ್ಟು ಎನ್ನುವುದು ಮುಂದೆ ಗೊತ್ತಾಗಲಿಲ್ಲ. ಇದೆಲ್ಲದರ ನಡುವೆ ದರ್ಶನ್ ಈ ಹಿಂದೆ ಎರಡು ಬಾರಿ ಕ್ಷಮೆ ಕೇಳಿದ್ದು ನೆನಪಾಗುತ್ತದೆ. ಒಮ್ಮೆ ಕೌಟುಂಬಿಕ ಕಲಹ ಹಿನ್ನೆಲೆ ಜೈಲಿಗೆ ಹೋಗಿ ಬಂದ ಬಳಿಕ ನಾಡಿನ ಜನರ ಕ್ಷಮೆ ಕೇಳಿದ್ದರು. ಆ ವೀಡಿಯೋ ವೈರಲ್ ಆಗುತ್ತಿದೆ. ಮಾಧ್ಯಮಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೂ ಕ್ಷಮೆ ಕೇಳಿ ಪತ್ರ ಬರೆದಿದ್ದರು.
2011ರಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ದರ್ಶನ್ ಜೈಲಿಗೆ ಹೋಗುವಂತಾಗಿತ್ತು. ಬಳಿಕ ಸಂಧಾನ ನಡೆಸಿ ವಿಜಯಲಕ್ಷ್ಮಿ ದೂರು ವಾಪಸ್ ಪಡೆದಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಬಳಿಕ ಸುದ್ದಿಗೋಷ್ಠಿ ನಡೆಸಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮಾತನಾಡಿದ್ದರು.
ದರ್ಶನ್ ಮಾತನಾಡಿ "ಕರ್ನಾಟಕದ ಜನತೆ, ಅಭಿಮಾನಿಗಳು ನನ್ನನ್ನು ಕ್ಷಮಿಸಿ. ಅದೊಂದು ಕಹಿ ಘಟನೆ. ನಡೆಯಬಾರದ್ದು ನಡೆದು ಹೋಯಿತು. ಇನ್ನೊಮ್ಮೆ ನನ್ನ ಕಡೆಯಿಂದ ಈ ರೀತಿ ಯಾವುದೇ ತಪ್ಪು ಆಗದಂತೆ ಅಭಿಮಾನಿಗಳಿಗೆ ಬೇಸರವಾಗದಂತೆ ನಡೆದುಕೊಳ್ಳುತ್ತೇನೆ. ನಿಜಕ್ಕೂ ನನಗೆ ಇಷ್ಟು ಅಭಿಮಾನಿಗಳಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ನಿಜಕ್ಕೂ ಅವರಿಗೆಲ್ಲಾ ಬೇಜಾರ್ ಮಾಡಿದ್ದೀನಿ. ದಯವಿಟ್ಟು ಕ್ಷಮಿಸಿ" ಎಂದಿದ್ದರು.
"ಒಬ್ಬ ವ್ಯಕ್ತಿ, ಕಲಾವಿದ ಎಷ್ಟು ಜನರನ್ನು ಸಂಪಾದಿಸಿದ್ದಾನೆ ಎನ್ನುವುದು ಬದುಕಿದ್ದಾಗ ಗೊತ್ತಾಗಲ್ಲ. ಸತ್ತಾಗಲೇ ಗೊತ್ತಾಗುತ್ತದೆ ಅಂತೆ. ಆದರೆ ನನಗೆ ಅಭಿಮಾನಿಗಳು ಈಗಲೇ ತೋರಿಸಿಕೊಟ್ಟಿದ್ದಾರೆ. ಜೀವನ ಪೂರ್ತಿ ಅವರಿಗೆ ಚಿರಋಣಿಯಾಗಿರ್ತೀನಿ. ದಯವಿಟ್ಟು ಎಲ್ಲಾ ಅಭಿಮಾನಿಗಳು ನನ್ನನ್ನು ಕ್ಷಮಿಸಿ. ಇನ್ನು ಮುಂದೆ ದರ್ಶನ್ಯಿಂದ ಯಾವುದೇ ತಪ್ಪಾಗಲ್ಲ" ಎಂದು ದರ್ಶನ್ ಭರವಸೆ ನೀಡಿದ್ದರು.
"ನಾನು ನನ್ನ ಹೆಂಡ್ತಿ ಚೆನ್ನಾಗಿಯೇ ಇದ್ದೀವಿ. ಆದರೆ ಇದು ಕೆಟ್ಟ ಸಮಯ. ನಾವಿಬ್ಬರು ಮುಂದೆ ಬದುಕಿ ಬಾಳಿ ತೋರಿಸುತ್ತೇವೆ. ಈ ಕಹಿ ಘಟನೆ ಮತ್ತೆ ನೆನಪಿಸಿಕೊಳ್ಳಲ್ಲ. ಮಾಧ್ಯಮದವರು ಕ್ಷಮಿಸಿ. ನನಗೆ ಬೆಂಲವಾಗಿ ನೀವು ಇದ್ದೀರ. ಪ್ರತಿ ಜಿಲ್ಲೆಗೆ ಹೋಗಿ ಜನರ ಕ್ಷಮೆ ಕೇಳಿ ಬರ್ತೀನಿ" ಎಂದಿದ್ದರು. ಅದರಂತೆ ರಾಜ್ಯಾದ್ಯಂತ 'ಸಾರಥಿ' ವಿಜಯಯಾತ್ರೆ ಮಾಡಿ ದರ್ಶನ್ ಜನರಿಗ ಧನ್ಯವಾದ ತಿಳಿಸಿದ್ದರು.


Click it and Unblock the Notifications











